Dr G Parameshwara
ಗೃಹ ಸಚಿವ ಡಾ ಜಿ ಪರಮೇಶ್ವರ್

ರಾಜ್ಯದಲ್ಲಿ ಹೆಚ್ಚಿದ ಗೋಹಿಂಸೆ-ಗೋಹತ್ಯೆ ಪ್ರಕರಣ: ತನಿಖೆಗೆ ರಾಜ್ಯ ಸರ್ಕಾರ ಆದೇಶ

ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಘಟನೆ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿದ್ದು, ಎಲ್ಲೆಡೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ.
Published on

ಬೆಂಗಳೂರು: ರಾಜ್ಯದಲ್ಲಿ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಘಟನೆ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿದ್ದು, ಎಲ್ಲೆಡೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಗೋಹತ್ಯೆ ಹಾಗೂ ಗೋಹಿಂಸೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮತ್ತೊಮೆ ಸೂಚನೆ ನೀಡಿದ್ದೇನೆಂದು ಹೇಳಿದರು.

ಈ ರೀತಿಯ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕು. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ? ಅಥವಾ ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಅಥವಾ ಸಂಘಟನೆಗಳಿವೆಯೇ ಎಂಬೆಲ್ಲಾ ವಿಚಾರಗಳನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.

ಸೆಂಟ್ರಲ್ ಜೈಲು ವಿಭಜನೆ

ಇದೇ ವೇಳೆ ಸೆಂಟ್ರಲ್ ಜೈಲು ವಿಭಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ವಿಭಾಗಿಸುವ ಯಾವುದೇ ಪ್ರಸ್ತಾವನೆಗಳು ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಆದರೆ, ರಾಜ್ಯದ ಎಲ್ಲಾ ಜೈಲುಗಳಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುವುದು. ಬಹಳ ವರ್ಷಗಳಿಂದಲೂ ಬಂಧೀಖಾನೆ ಇಲಾಖೆಗೆ ನೇಮಕಾತಿಗಳು ನಡೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಬಳಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದರು.

Dr G Parameshwara
ಉತ್ತರ ಕನ್ನಡದಲ್ಲಿ ಅಮಾನವೀಯ ಘಟನೆ: ಗರ್ಭಿಣಿ ಹಸುವಿನ ತಲೆ-ಕಾಲು ಕಡಿದು ಹತ್ಯೆ; ಪ್ರಕರಣ ದಾಖಲು

ದರೋಡೆ ಪ್ರಕರಣ

ಮಂಗಳೂರು ಬ್ಯಾಂಕ್ ದರೋಡೆ ಮತ್ತು ಬೀದರ್ ಎಟಿಎಂ ದರೋಡೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆ ದಾಳಿ ನಡೆಸಿ ಒಬ್ಬರನ್ನು ಹತ್ಯೆಗೈದು, ಮತ್ತೊಬ್ಬರನ್ನು ಗಾಯಗೊಳಿಸಿ 83 ಲಕ್ಷ ದರೋಡೆ ಮಾಡಿದ ಪ್ರಕರಣದಲ್ಲಿ ಮಾಹಿತಿಗಳನ್ನು ಕಲೆಹಾಕಲಾಗಿದೆ. ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಾಗುವುದು. ಮಂಗಳೂರಿನ ಬ್ಯಾಂಕ್‌ ದರೋಡೆಯಲ್ಲಿ 2 ಕಾರುಗಳನ್ನು ಬಳಸಿರುವುದು ಸೇರಿದಂತೆ ಇತರ ಮಾಹಿತಿಗಳು ದೊರೆತಿವೆ. ಈ ಎರಡೂ ಘಟನೆಗಳಿಗೆ ತಂಡವನ್ನು ರಚನೆ ಮಾಡಿ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆಂದು ಹೇಳಿದರು.

ಆರೋಪಿಗಳು ಬೇರೆ ರಾಜ್ಯದವರೋ ಅಥವಾ ಎಲ್ಲಿಯವರು ಎಂಬುದು ಸೇರಿದಂತೆ ಹಲವಾರು ಮಾಹಿತಿಗಳು ನಮ್ಮ ಬಳಿ ಇವೆ. ಆದರೆ, ಸದ್ಯಕ್ಕೆ ಯಾವುದನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಬೀದರ್‌ನ ಘಟನೆಯಲ್ಲಿ ಶಸ್ತ್ರ ಸಜ್ಜಿತ ಸಿಬ್ಬಂದಿ ಇಲ್ಲದೇ ಇರುವುದನ್ನು ನೋಡಿಕೊಂಡು ಕೃತ್ಯ ಎಸಗಲಾಗಿದೆ. ಮಂಗಳೂರಿನ ಘಟನೆಯಲ್ಲೂ ಭದ್ರತಾ ಸಿಬ್ಬಂದಿ ಇಲ್ಲದ ಸಂದರ್ಭವನ್ನು ಉಪಯೋಗಿಸಿಕೊಳ್ಳಲಾಗಿದೆ. ಈ ರೀತಿಯ ಲೋಪಗಳಾಗಬಾರದು. ಸರ್ಕಾರ ಈಗಾಗಲೇ ಬ್ಯಾಂಕ್‌ಗಳಿಗೆ ಭದ್ರತೆಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ. ಬ್ಯಾಂಕ್‌ನವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಮೈಕ್ರೋ ಫೈನಾನ್ಸ್ ಹಾವಳಿ

ಮೈಕ್ರೋ ಫೈನಾನ್ಸ್ ಬಡ್ಡಿ ದಬ್ಬಾಳಿಕೆಗೆ ಕಡಿವಾಣ ಹಾಕಲು ಕಾನೂನು ತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಿರು ಸಾಲ ನೀಡಿ ಅದರ ವಸೂಲಿಗೆ ಕಿರುಕುಳ ನೀಡುತ್ತಿರುವವರಿಗೆ ಕಡಿವಾಣ ಹಾಕಲು ಪ್ರತ್ಯೇಕ ಕಾಯ್ದೆ ತರುವುದು ಹಣಕಾಸು ಇಲಾಖೆಯ ಜವಾಬ್ದಾರಿ. ದೂರುಗಳು ಬಂದರೆ ಕ್ರಮ ಕೈಗೊಳ್ಳುವುದಷ್ಟೇ ಪೊಲೀಸ್‌‍ ಇಲಾಖೆಯ ಕೆಲಸ ಎಂದರು.

X

Advertisement

X
Kannada Prabha
www.kannadaprabha.com