
ಹೊನ್ನಾವರ (ಉತ್ತರ ಕನ್ನಡ): ಹೊನ್ನಾವರದಲ್ಲಿ ಗರ್ಭಿಣಿ ಹಸುವನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಜಾನುವಾರು ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 6 ತಂಡಗಳ ರಚನೆ ಮಾಡಿ ತನಿಖೆಯನ್ನು ತೀವ್ರಗೊಳ್ಳುವಂತೆ ಮಾಡಿದೆ.
ಸಾಲ್ಕೋಡು ಪಂಚಾಯಿತಿಯಲ್ಲಿ ನಡೆದ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ ಅವರು ಉತ್ತರ ಕನ್ನಡ ಐಜಿ ಮತ್ತು ಎಸ್ಪಿ ಅವರೊಂದಿಗೆ ಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ, ಅಕ್ರಮ ಗೋಮಾಂಸ ಸಾಗಣೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಈ ಹಿಂದೆ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಲ್ಲರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಎಂ ನಾರಾಯಣ್ ಅವರು ಮಾತನಾಡಿ. ಪ್ರಕರಣ ಸಂಬಂಧ ಐದು ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಆದರೆ, ಇದುವರೆಗೂ ಯಾರನ್ನೂ ಬಂಧನಕ್ಕೊಳಪಡಿಸಿಲ್ಲ. ಘಟನೆ ನಡೆದ ಸ್ಥಳವು ಅರಣ್ಯ ಪ್ರದೇಶವಾಗಿರುವುದರಿಂದ ತನಿಖೆ ವೇಳೆ ದ್ವಿತೀಯ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇವೆ, ಅರಣ್ಯಾಧಿಕಾರಿಗಳೂ ಕೂಡ ಸ್ಥಳೀಯರ ಮಾಹಿತಿ ಪಡೆಯುತ್ತಿದ್ದಾರೆ. ಅಕ್ರಮ ಗೋಸಾಗಣೆ ಕಂಡು ಬಂದರೆ ಮಾಹಿತಿ ನೀಡುವಂತೆ ಜನರಿಗೆ ತಿಳಿಸಲಾಗಿದೆ. ಪ್ರಕರಣವನ್ನು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಮೇಲ್ವಿಚಾರಣೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಜಾನುವಾರು ಕಳ್ಳತನ ಮಾಡುವ ಯಾರೊಬ್ಬರನ್ನೂ ಬಿಡುವುದಿಲ್ಲ. ಈಗಾಗಲೇ ಆರು ತಂಡಗಳನ್ನು ರಚಿಸಲಾಗಿದೆ, ಈಗಷ್ಟೇ ಅಲ್ಲ, ಈ ಹಿಂದೆಯೂ ಅಕ್ರಮ ಗೋಸಾಗಣೆ ಮಾಡಿದ ಹಲವರ ಬಂಧನಗಳಾಗಿವೆ. ಕಳೆದ ಐದು ವರ್ಷಗಳಿಂದ 138 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದೇವೆ. ಅಕ್ರಮವಾಗಿ ಸಾಗಿಸುತ್ತಿದ್ದ 866 ಗೋವುಗಳನ್ನು ರಕ್ಷಿಸಿದ್ದೇವೆಂದು ಮಾಹಿತಿ ನೀಡಿದರು.
ಜಾನುವಾರು ಕಳ್ಳತನ ಹಾಗೂ ಸಾಗಾಟದಲ್ಲಿ ತೊಡಗಿದ್ದ 467 ಮಂದಿಯನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, ಜಾನುವಾರು ಕಳ್ಳಸಾಗಣೆ ತಡೆಯಲು ಗಸ್ತು ಹೆಚ್ಚಿಸಲಾಗಿದೆ, ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ, ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು, ತನಿಖೆ ತೀವ್ರಗೊಳಿಸಲಾಗಿದ್ದು, ಶೀಘ್ರವೇ ಪ್ರಕರಣ ಭೇದಿಸಲಾಗುವುದು ಎಂದರು.
Advertisement