ಕೋಟೆಕಾರು ಬ್ಯಾಂಕ್ ದರೋಡೆ: ಪ್ಲಾನ್ ಮಾಡಿದ ಸ್ಥಳೀಯರಿಗೆ ರಾಜಕೀಯ ಬೆಂಬಲ- ಶಾಸಕ ಭರತ್ ಶೆಟ್ಟಿ ಆರೋಪ
ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ ಶಾಮೀಲಾದ ಸ್ಥಳೀಯರಿಗೆ ರಾಜಕೀಯ ಬೆಂಬಲವಿದೆ, ಬ್ಯಾಂಕ್ ದರೋಡೆಯಲ್ಲಿ ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ದರೋಡೆ ಪ್ರಕರಣದಲ್ಲಿ ಶೇಕಡಾ 100 ರಷ್ಟು ಸ್ಥಳೀಯರು ಇದ್ದಾರೆ. ದರೋಡೆಕೋರರನ್ನ ಬಂಧಿಸಿದ್ದಾರೆ. ಆದರೆ ಪ್ಲಾನಿಂಗ್ ಮಾಡಿದವರನ್ನು, ಕುಮ್ಮಕ್ಕು ನೀಡಿದವರನ್ನು ಬಚಾವ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ನೈಜ ಆರೋಪಿಗಳನ್ನು ಬಯಲಿಗೆ ತನ್ನಿ. ದರೋಡೆಕೊರರಿಗೆ ರಾಜಕೀಯ ಬೆಂಬಲ ಇದೆ. ಅವರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಬೇರೆ ಪ್ರಕರಣಗಳಲ್ಲಿ ಶಾಮೀಲಾದವರೂ ದರೋಡೆ ಪ್ರಕರಣದಲ್ಲಿದ್ದಾರೆ ಎಂದು ಭರತ್ ಶೆಟ್ಟಿ ದೂರಿದ್ದಾರೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಮಾಡಿದ ಮೂವರ ಬಂಧನ ಈಗಾಗಲೇ ಆಗಿದೆ. ಮುಂಬೈನ ಕಣ್ಣನ್ ಮಣಿ ಗುಂಡೇಟು ತಿಂದು ಪೊಲೀಸರ ವಶದಲ್ಲಿದ್ದರೆ, ಕಿಂಗ್ಪಿನ್ ತುಮಿಳುನಾಡಿನ ಮುರುಗನ್ ಡಿ ದೇವರ್, ಸಹಚರ ರಾಜೇಂದ್ರನ್ನನ್ನ ನಿನ್ನೆ ಮಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.