
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದಲ್ಲಿ ದೂರುದಾರರಾಗಿ ಗಮನ ಸೆಳೆದಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಮೈಸೂರು ಕೋರ್ಟ್ ತೀರ್ಪು ನೀಡಿದೆ.
2015 ರಲ್ಲಿ, ಮೈಸೂರಿನ ಹೊರವಲಯದಲ್ಲಿರುವ ಲಲಿತಾದ್ರಿಪುರ ನಿವಾಸಿ ಕುಮಾರ್ ಅವರಿಂದ ಕೃಷ್ಣ ಸಾಲ ಪಡೆದಿದ್ದರು. ಸಾಲ ಮರುಪಾವತಿಯಾಗಿ ಸ್ನೇಹಮಯಿ ಕೃಷ್ಣ ಅವರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ನ ಚೆಕ್ ನೀಡಿದ್ದರು.
ಕುಮಾರ್ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿದಾಗ ಬೌನ್ಸ್ ಆಗಿತ್ತು. ನಂತರ ಅವರು ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ಸಿ ಕೋರ್ಟ್ ಗುರುವಾರ ಸ್ನೇಹಮಯಿ ಕೃಷ್ಣ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಸ್ನೇಹಮಯಿ ಕೃಷ್ಣ ಅವರ ತಕ್ಷಣವೇ ಹಣ ಪಾವತಿಸಬೇಕು ಅಥವಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ತೀರ್ಪಿಗೆ ಪ್ರತಿಕ್ರಿಯಿಸಿದ ಕೃಷ್ಣ, ಚೆಕ್ ಬೌನ್ಸ್ಗೆ ಸಂಬಂಧಿಸಿದಂತೆ ಹಣ ಪಾವತಿ ಮಾಡಬೇಕು ಅಥವಾ ಆರು ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಈ ಸಂಬಂಧ ನನ್ನ ಕಾನೂನು ಹೋರಾಟ ಮುಂದುವರಿಸುತ್ತೇನೆ. ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ" ಎಂದು ತಿಳಿಸಿದ್ದಾರೆ.
Advertisement