ಕುಂಭಮೇಳ ಕಾಲ್ತುಳಿತ ದುರಂತ: ನಾಲ್ವರ ಪಾರ್ಥಿವ ಶರೀರ ಬೆಳಗಾವಿಗೆ ಆಗಮನ, ಕುಟುಂಬಸ್ಥರ ಆಕ್ರಂದನ
ಬೆಳಗಾವಿ: ಉತ್ತರಪ್ರದೇಶದ ಪ್ರಯಾಗರಾಜ್'ನ ಮಹಾಕುಂಬ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದ ಬೆಳಗಾವಿಯ ನಾಲ್ವರ ಮೃತದೇಹಗಳು ಬೆಳಗಾವಿ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೊದಲಿಗೆ ಇಬ್ಬರ ಮೃತದೇಹಗಳನ್ನು ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆ 6.20ಕ್ಕೆ ಕರೆತರಲಾಯಿತು. ಇನ್ನಿಬ್ಬರ ಮೃತದೇಹಗಳು ದೆಹಲಿಯಿಂದ ಗೋವಾ ಮೂಲಕ ತಡರಾತ್ರಿ ಆಗಮಿಸಿದವು.
ಬೆಳಗಾವಿಗೆ ಆಗಮಿಸಿದ ಶಿವಾಜಿನಗರದ ಮಹಾದೇವಿ ಬಾವನೂರ ಹಾಗೂ ಶೆಟ್ಟಿ ಗಲ್ಲಿಯ ಅರಣ್ ಕೋಪರ್ಡೆ ಅವರ ಮೃತದೇಹಗಳನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು. ಮಹಾದೇವಿ ಹಾಗೂ ಅರುಣ್ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿ ತಲುಪಿದ್ದರಿಂದ ಮಧ್ಯಾಹ್ನದ ವಿಮಾನದಲ್ಲಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತೆಗೆದುಕೊಂಡು ಬರಲಾಯಿತು. ವಡಗಾವಿ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ ಶವ ತಡವಾಗಿ ತಲುಪಿದ್ದರಿಂದ ದೆಹಲಿಯಿಂದ ಗೋವಾಗೆ, ಅಲ್ಲಿಂದ ಬೆಳಗಾವಿಗೆ ತಲುಪಿದವು.
ಈ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಗಳು ಬೆಳಗಾವಿ ತಲುಪುತ್ತಿದ್ದಂತೆಯೇ ಅಂತಿಮ ದರ್ಶನಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಲು ಆರಂಭಿಸಿದರು. ಆದರೆ ಜಿಲ್ಲಾಡಳಿತವು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಹಸ್ತಾಂತರಿಸುವುದಾಗಿ ಭರವಸೆ ನೀಡಿತು.
ರಾತ್ರಿ 8 ಗಂಟೆಗೆ ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರ ಕುಟುಂಬಗಳಿಗೆ ಜಿಲ್ಲಾಡಳಿತ ಹಸ್ತಾಂತರಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದ್ದಾರೆ.
ಇನ್ನು ಮೃತ ಮೇಘಾ ಅವರ ನಾಯಿ, ತನ್ನ ಮಾಲಕಿ ಕುಂಭಮೇಳಕ್ಕೆ ಹೋದ ದಿನದಿಂದಲೂ ಬೇಸರದಲ್ಲಿಯೇ ಇದ್ದು, ಅನ್ನ, ನೀರು ಸೇವನೆ ಮಾಡುವುದನ್ನು ನಿಲ್ಲಿಸಿತ್ತು ಎಂದು ತಿಲಿದುಬಂದಿದೆ.
ಮೇಘಾ ತೀರ್ಥಯಾತ್ರೆಗೆ ತೆರಳಿದ ದಿನದಿಂದ ನಾಯಿ ಮಂಕಾಗಿತ್ತು. ಆಹಾರ ಸೇವಿಸುವುದನ್ನು ನಿಲ್ಲಿಸಿತ್ತು. ದುರಂತದ ಬಗ್ಗೆ ನಾಯಿಗೆ ಮೊದಲೇ ತಿಳಿದಿತ್ತೇನೋ ಎಂದು ಮೇಘಾ ಅವರ ಸಹೋದರಿ ಕಣ್ಣೀರಿಟ್ಟಿದ್ದಾರೆ.
ಕುಂಭಮೇಳಕ್ಕೆ ಹೋಗಲು ಮೇಘಾ ಹಠ ಮಾಡಿದ್ದಳು. ಪ್ರಯಾಗರಾಜ್ ಕುಂಭಮೇಳ ಮತ್ತೊಮ್ಮೆ ಜೀವನದಲ್ಲಿ ಬರದು. ನಾನು ಅಲ್ಲಿಗೆ ಹೋಗಲೇಬೇಕು ಎಂದು ಹಠ ಹಿಡಿದಿದ್ದಳು. ಹೀಗಾಗಿ, ತಾಯಿ ಜ್ಯೋತಿ ಜೊತೆಗೆ ತೆರಳಿದ್ದಳು. ಬರುವ ಮಾರ್ಚ್ ನಲ್ಲಿ ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಮಾತುಕತೆ ಕೂಡ ಆಗಿತ್ತು. ಹಸೆಮಣೆ ಏರಬೇಕಿದ್ದವಳು ಶವವಾಗಿ ಬಂದಿದ್ದಾಳೆಂದು ದುಃಖಿತರಾದರು.