
ಬೆಂಗಳೂರು: ಕಾಂಗ್ರೆಸ್ಸಿನತ್ತ ದೇಶದ ಒಬಿಸಿ ಸಮುದಾಯಗಳನ್ನು ಸೆಳೆಯಲು ರಾಷ್ಟ್ರೀಯ ಸಲಹಾ ಮಂಡಳಿಯನ್ನು ಎಐಸಿಸಿ ರಚನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಂಡಳಿಯ ನೇತೃತ್ವ ವಹಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಮುಖ್ಯ ಮಂತ್ರಿ ಪಟ್ಟದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯತ್ನ ಇದು ಎಂದು ಬಿಜೆಪಿ ನಾಯಕರು ಸಾಲುಸಾಲಾಗಿ ಹೇಳಿಕೆ ನೀಡಿದ್ದು, ಈ ನಡುವೆ ಮುಖ್ಯಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬಿಸಿ ಸಲಹಾ ಮಂಡಳಿಗೆ ನಾನು ಮುಖ್ಯಸ್ಥ ಅಲ್ಲ, ನಾನೊಬ್ಬ ಸದಸ್ಯನಷ್ಟೇ. ಅದರ ನೇತೃತ್ವವನ್ನು ಬೇರೊಬ್ಬರು ಹೊತ್ತಿದ್ದಾರೆ. ನಾನು ಆತಿಥ್ಯ ಮಾತ್ರ ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ಸಲಹಾ ಮಂಡಳಿ ಅಧ್ಯಕ್ಷನಾಗಿ ನನ್ನನ್ನು ನೇಮಿ ಸಿಲ್ಲ. ಸದಸ್ಯನನ್ನಾಗಿಯಷ್ಟೆ ನೇಮಿಸಲಾಗಿದೆ, ಈ ತಿಂಗಳ 15 ರಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿರುವ ಒಬಿಸಿ ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈಹಿಂದ್ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿ 50 ಮಂದಿ ಭಾಗವಹಿಸುವ ಈ ಸಭೆಯ ಆತಿಥ್ಯವನ್ನಷ್ಟೇ ನಾನು ವಹಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಸಲಹಾ ಮಂಡಳಿಗೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ನನಗೆ ಗೊತ್ತಿಲ್ಲ. ಜವಾಬ್ದಾರಿ ಕೊಟ್ಟಾಗ ನಾನು ಓಡಿ ಹೋಗಲ್ಲ. ಸಲಹಾ ಮಂಡಳಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಾಗ ಬಿಟ್ಟು ಓಡಿ ಹೋಗೋಕೆ ಆಗುತ್ತಾ? ಸಲಹಾ ಮಂಡಳಿಗೆ ನೇಮಿಸಲು ನಾನೇನು ಕೇಳಿರಲಿಲ್ಲ. ಅವರು ಘೋಷಣೆ ಮಾಡಿದ್ದಾರೆ. ಯಾವ ರೀತಿ ಎಂಬುದರ ಬಗ್ಗೆ ಹೈಕಮಾಂಡ್ ಜತೆ ಮಾತನಾಡುತ್ತೇನೆ, ನನ್ನನ್ನು ಸಂಚಾಲಕನನ್ನಾಗಿ ಮಾಡಲಾಗಿದೆಯೋ ಅಥವಾ ಯಾವ ರೀತಿ ಹುದ್ದೆ ನೀಡಿದ್ದಾರೆ ಎಂದು ತಿಳಿಯದೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆಂದು ಹೇಳಿದರು.
ಇದೇ ವೇಳೆ ಶಿವಮೊಗ್ಗದಲ್ಲಿ ನಡೆದಿರುವ ಕೋಮುಗಲಭೆ ಪ್ರಕರಣ ಕುರಿತು ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ಶಾಸಕ ಬಸವರಾಜರಾಯರೆಡ್ಡಿ ರಸ್ತೆ ಅಭಿವೃದ್ಧಿಯಾಗಬೇಕಾದರೆ ಗ್ಯಾರಂಟಿ ಯೋಜನೆಗಳನ್ನು ಕೈಬಿಡಿ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಗ್ಯಾರಂಟಿ ಯೋಜನೆಗಳಲ್ಲಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವುಗಳನ್ನು ಬಡವರ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಸೇತುವೆಗಳ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗೆ ಹಣ ನೀಡಲಾಗುತ್ತಿದೆ. ಪಕ್ಷಾತೀತವಾಗಿ ಎಲ್ಲಾ ಪಕ್ಷದವರಿಗೂ ಹಣ ನೀಡುತ್ತಿರುವುದಾಗಿ ಹೇಳಿದರು.
Advertisement