
ಬೆಂಗಳೂರು: 2025–26ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್'ಸಿ ಫಲಿತಾಂಶಗಳನ್ನು ಸುಧಾರಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಪಠ್ಯಕ್ರಮ ಪೂರ್ಣಗೊಳಿಸುವಿಕೆ, ಪರಿಹಾರ ಬೋಧನೆ, ಪರೀಕ್ಷಾ ತಯಾರಿ, ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಶಾಲಾ ಮೇಲ್ವಿಚಾರಣೆಯನ್ನು ಉದ್ದೇಶಿಸಿ 29 ಅಂಶಗಳ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದೆ.
ಕಳೆದ ಎರಡು ವರ್ಷಗಳಿಂದ ಎಸೆಸೆಲ್ಸಿ ಫಲಿತಾಂಶ ಕುಸಿತ ಹಿನ್ನೆಲೆಯಲ್ಲಿ ಫಲಿತಾಂಶ ಹೆಚ್ಚಿಸಲು ಇಲಾಖೆ ಶಿಕ್ಷಕರಿಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸುತ್ತೋಲೆಯ ಪ್ರಕಾರ, ಎಲ್ಲಾ ಶಾಲೆಗಳು ಡಿಸೆಂಬರ್ 2025 ರೊಳಗೆ SSLC ಪಠ್ಯಕ್ರಮವನ್ನು ಪೂರ್ಣಗೊಳಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯವಸ್ತು ಬೋಧನೆ ಪೂರ್ಣಗೊಳಿಸಬೇಕು.
ಎರಡು ತಿಂಗಳಿಗೊಮ್ಮೆ ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಕಲಿಕಾ ಮಟ್ಟ ಬಗ್ಗೆ ಮಾಹಿತಿ ನೀಡಿ ಮನೆಯಲ್ಲೂ ವ್ಯಾಸಂಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ತಿಳಿಸಬೇಕು.
ಡಯಟ್ ಅಧಿಕಾರಿಗಳು ವಾರದಲ್ಲಿ ಐದು ದಿನ ಶಾಲೆಗಳಿಗೆ ಭೇಟಿ ನೀಡಿ ಪರಿಹಾರ ಬೋಧನಾ ತರಗತಿಗಳಲ್ಲಿ ಭಾಗವಹಿಸುವುದು,
ಮಕ್ಕಳಿಂದ ಗಟ್ಟಿಯಾಗಿ ಓದಿಸುವ ಅಭ್ಯಾಸ ಮಾಡಿಸುವುದು, ಇದರಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಹೆಚ್ಚು ಎಂಬ ಮೂರು ಗುಂಪುಗಳನ್ನು ರಚಿಸಬೇಕು. ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡಬೇಕು.
ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ ಗುಂಪು ಅಧ್ಯಯನ ಚಟುವಟಿಕೆಗಳನ್ನು ರೂಪಿಸಬೇಕು,
ಮಧ್ಯವಾರ್ಷಿಕ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳನ್ನು ವೆಬ್ಕಾಸ್ಟಿಂಗ್ ಕಣ್ಣಾವಲಿನಲ್ಲಿ ನಡೆಸಬೇಕು.
ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದುನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ವೇಕ್ ಅಪ್ ಕಾಲ್ ಮಾಡಬೇಕು.
ಒತ್ತಡ ನಿವಾರಣೆಗೆ ವಾರದಲ್ಲಿ ಕನಿಷ್ಠ ಒಂದು ಅವಧಿಯನ್ನು ಕ್ರೀಡೆಗೆ ಮೀಸಲಿಡುವುದು.
ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಗೀಳು ತಪ್ಪಿಸಬೇಕು.
ಹಿಂದಿನ ವರ್ಷಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆ ರೂಪಿಸಬೇಕು.
ಶೂನ್ಯ ಫಲಿತಾಂಶ ಪಡೆದ ಶಾಲೆಗಳು, ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಬಿಇಓ ಮತ್ತು ಡಿಡಿಪಿಐಗಳು ನಿರಂತರವಾಗಿ ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸುತ್ತೋಲೆ ಹೊರಡಿಸಿದ್ದಾರೆ.
Advertisement