ಬೆಂಗಳೂರು: 2 ಕೋಟಿ ರೂ ದರೋಡೆ ಪ್ರಕರಣಕ್ಕೆ ಟ್ವಿಸ್ಟ್; ದೂರುದಾರನೇ 'ಮಾಸ್ಟರ್ ಮೈಂಡ್'!

ದೂರುದಾರ ಶ್ರೀ ಹರ್ಷ ಸೇರಿದಂತೆ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ, ಅವರಲ್ಲಿ ಇಬ್ಬರು ಉದ್ಯಮಿಗಳ ಹಣವನ್ನು ಕ್ರಿಪ್ಟೋಕರೆನ್ಸಿ USDT (ಟೆಥರ್) ಆಗಿ ಪರಿವರ್ತಿಸುವ ನೆಪದಲ್ಲಿ ವಂಚಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ತಿಂಗಳು ವಿದ್ಯಾರಣ್ಯಪುರದಲ್ಲಿ ವರದಿಯಾದ 2 ಕೋಟಿ ರೂ. ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಸಂಬಂಧ ದೂರು ನೀಡಿದ್ದ ವ್ಯಕ್ತಿಯೇ ಇಡೀ ದರೋಡೆಯನ್ನು ಸಂಘಟಿಸಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ನಗದು ಹಣವನ್ನು ಡಿಜಿಟಲ್ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ಉದ್ಯಮಿಯನ್ನು ನಂಬಿಸಿ 2 ಕೋಟಿ ರೂ. ಹಣ ಪಡೆದು ಬಳಿಕ ಅಪರಿಚಿತ ವ್ಯಕ್ತಿಗಳಿಂದ ದರೋಡೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದ.

ದೂರುದಾರ ಶ್ರೀ ಹರ್ಷ ಸೇರಿದಂತೆ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ, ಅವರಲ್ಲಿ ಇಬ್ಬರು ಉದ್ಯಮಿಗಳ ಹಣವನ್ನು ಕ್ರಿಪ್ಟೋಕರೆನ್ಸಿ USDT (ಟೆಥರ್) ಆಗಿ ಪರಿವರ್ತಿಸುವ ನೆಪದಲ್ಲಿ ವಂಚಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬಂಧಿತರನ್ನು ಹರ್ಷ, ಉದ್ಯಮಿ ರಕ್ಷಿತ್ ಎಂ, ಚಂದ್ರಶೇಖರ್, ಬೆಂಜಮಿನ್ ಹರ್ಷ, ಸೈಯದ್ ಅಖಿಬ್, ಮೊಹಮ್ಮದ್ ಸುಹೈಲ್, ಸಲ್ಮಾನ್ ಖಾನ್, ಮುಹೀಬ್ ಎಸ್, ಮೊಹ್ಸಿನ್ ಖಾನ್, ಸಲ್ಮಾನ್ ಖಾನ್ (ಅದೇ ಹೆಸರಿನ ಎರಡನೇ ಆರೋಪಿ), ಸೈಯದ್ ಅಮ್ಜದ್, ಸೈಯದ್ ಅಫ್ರೀದ್, ಸೈಯದ್ ವಾಸಿಂ, ಮೊಹಮ್ಮದ್ ಅತೀಗ್ ಎಂದು ಗುರುತಿಸಲಾಗಿದೆ. ಸಂದೀಪ್, ಶೇಖ್ ಸಾದು, ರಾಕೇಶ್ ಮತ್ತು ಮೊಹಮ್ಮದ್ ಸಬೀರ್ ಪರಾರಿಯಾಗಿದ್ದಾರೆ.

ಪೊಲೀಸರ ಪ್ರಕಾರ, ಜೂನ್ 25 ರಂದು ಹರ್ಷ ದೂರು ದಾಖಲಿಸಿದ್ದ. ಉದ್ಯಮಿಯಿಂದ 2 ಕೋಟಿ ರೂ. ಪಡೆದು ಈ ಹಣವನ್ನ ಡಿಜಿಟಲ್ ಕರೆನ್ಸಿಯಾಗಿ ಪರಿವರ್ತಿಸಿ, ಆರ್​ಟಿಜಿಎಸ್ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ಆರೋಪಿ ಶ್ರೀಹರ್ಷ ನಂಬಿಸಿದ್ದ. ಇದರಂತೆ ಹಣ ಪಡೆದು ಜೂನ್ 25 ರಂದು ವಿದ್ಯಾರಣ್ಯಪುರದ ಎಂ.ಎಸ್. ಪಾಳ್ಯ ಬಳಿಯ ಅಂಗಡಿಯಲ್ಲಿರುವಾಗ ಪೂರ್ವಸಂಚಿನಂತೆ ಹಣ ದರೋಡೆ ಮಾಡಿಸಿದ್ದ. ಬಳಿಕ ಅಪರಿಚಿತ ವ್ಯಕ್ತಿಗಳಿಂದ 2 ಕೋಟಿ ದರೋಡೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

Representational image
ಕಲಬುರಗಿ ಚಿನ್ನದಂಗಡಿ ದರೋಡೆ ಪ್ರಕರಣ: ಮೂವರು ಅಂತಾರಾಜ್ಯ ದರೋಡೆಕೋರರ ಬಂಧನ; Video

ಶಂಕಿತರ ಬಂಧನದ ನಂತರ ಪ್ರಕರಣವು ತಿರುವು ಪಡೆದುಕೊಂಡಿತು. ವಿಚಾರಣೆಯ ಸಮಯದಲ್ಲಿ, ಅಪರಾಧದ ಸಂಚು ರೂಪಿಸುವಲ್ಲಿ ಹರ್ಷನ ಪಾತ್ರ ಬಹಿರಂಗವಾಯಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕರೆ ದಾಖಲೆಗಳ ವಿಶ್ಲೇಷಣೆಯಿಂದ ಹೆಚ್ಚಿನ ತನಿಖೆಯು ಹರ್ಷನ ಪಾತ್ರವನ್ನು ದೃಢಪಡಿಸಿತು.

ಹರ್ಷ ಬೆಂಗಳೂರಿನ ಭರತ್ ಸಿಂಗ್ ಮತ್ತು ಮಂಗಳೂರಿನ ಅಭಿಷೇಕ್ ಎಂಬ ಇಬ್ಬರು ಉದ್ಯಮಿಗಳಿಗೆ ತಮ್ಮ 2 ಕೋಟಿ ರೂ. ಹಣವನ್ನು USDT ಆಗಿ ಪರಿವರ್ತಿಸುವ ಮೂಲಕ ಹೆಚ್ಚಿನ ಆದಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದ ನಂತರ, ಹರ್ಷ ತಪ್ಪೊಪ್ಪಿಕೊಂಡಿದ್ದು, ಹಣವನ್ನು ಹಸ್ತಾಂತರಿಸಿದ ಉದ್ಯಮಿಗಳನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ. ಸಿಂಗ್ ಮತ್ತು ಅಭಿಷೇಕ್ ಇಬ್ಬರೂ ಹರ್ಷ ತಮಗೆ ಲಾಭದಾಯಕ ಆದಾಯದೊಂದಿಗೆ ಕ್ರಿಪ್ಟೋ ಹೂಡಿಕೆ ಒಪ್ಪಂದವನ್ನು ನೀಡಿದ್ದಾಗಿ ದೃಢಪಡಿಸಿದರು.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ, ಕೆಲವು ಆರೋಪಿಗಳ ಮೇಲೆ ಕೆಆರ್ ಪುರ ಮತ್ತು ಬಾಗಲೂರು ಪೊಲೀಸ್ ಠಾಣೆಗಳಲ್ಲಿ ಹಿಂದಿನ ಕ್ರಿಮಿನಲ್ ದಾಖಲೆಗಳಿವೆ ಎಂದು ದೃಢಪಡಿಸಿದರು. 1 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರವಾಹನಗಳು, 2 ಆಟೋಗಳು, 8 ಮೊಬೈಲ್ ಫೋನ್ ಹಾಗೂ ಒಂದು ಲಾಂಗ್, ಮಚ್ಚನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಳಿದ ಹಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ತನಿಖೆ ಪೂರ್ಣಗೊಂಡ ನಂತರ ಆದಾಯ ತೆರಿಗೆ ಇಲಾಖೆಗೆ ವರದಿಯನ್ನು ಕಳುಹಿಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com