ದಲಿತನೊಬ್ಬ ಮುಖ್ಯಮಂತ್ರಿಯಾಗಬೇಕಾದರೆ ಬಸವಣ್ಣ ಮತ್ತೆ ಹುಟ್ಟಿ ಬರಬೇಕು: ಸಂಸದ ಗೋವಿಂದ ಕಾರಜೋಳ

ಸದಾಶಿವ ಆಯೋಗದ ವಿಷಯ ಮುಗಿದ ಅಧ್ಯಾಯವಾಗಿದ್ದು, ರಾಜ್ಯ ಸರ್ಕಾರ ಅಧಿವೇಶನಕ್ಕೂ ಮುನ್ನ ಒಳಮೀಸಲಾತಿ ನೀಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು.
Govinda Karajola
ಗೋವಿಂದ ಕಾರಜೋಳ
Updated on

ಬೆಳಗಾವಿ: ಪರಿಶಿಷ್ಟ ಜಾತಿಗಳ ಎಲ್ಲಾ ಸರ್ಕಾರಗಳು ಅನ್ಯಾಯ ಮತ್ತು ಅಸಡ್ಡೆ ತೋರುತ್ತಿದ್ದು, ದಲಿತನೊಬ್ಬ ಮುಖ್ಯಮಂತ್ರಿಯಾಗಬೇಕಾದರೆ ಬಸವಣ್ಣನಂತಹ ವ್ಯಕ್ತಿ ಮತ್ತೆ ಹುಟ್ಟಿಬರಬೇಕೆಂದು ಸಂಸದ ಗೋವಿಂದ ಕಾರಜೋಳ ಅವರು ಗುರುವಾರ ಹೇಳಿದರು.

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಮಟ್ಟದ ಮಾದರಿ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವಿಷಯ ಮುಗಿದ ಅಧ್ಯಾಯವಾಗಿದ್ದು, ರಾಜ್ಯ ಸರ್ಕಾರ ಅಧಿವೇಶನಕ್ಕೂ ಮುನ್ನ ಒಳಮೀಸಲಾತಿ ನೀಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ ಸಚಿವರು, ಶಾಸಕರು, ಸಂಸದರಾದವರಿಗೆ ಮೀಸಲಾತಿ ಏಕೆ ತಂದರು ಎನ್ನುವ ಕಲ್ಪನೆಯಲ್ಲಿದ್ದಾರೆ. ಇಂತಹವರು ಆಳ್ವಿಕೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.

ಎಸ್ಸಿ, ಎಸ್ಟಿ ಸಮಾಜಕ್ಕೆ ಸಂವಿಧಾನದಲ್ಲಿ ಮೀಸಲಾತಿ ನೀಡಲಾಯಿತು. ಎಸ್ಸಿಯಲ್ಲಿ 101, ಎಸ್ಟಿಯಲ್ಲಿ 51 ಜಾತಿಗಳನ್ನು ಕಾಲಕಾಲಕ್ಕೆ ಸೇರಿಸಿದರು. ಅವರನ್ನು ನಾವು ಸ್ವಾಗತ ಮಾಡಿಕೊಂಡಿದ್ದೇವೆ. ಇವತ್ತು ರಾಜಕೀಯ ಗಂಧ ಗೊತ್ತಿಲ್ಲದವರು ಮೀಸಲಾತಿ ಓಟ್ ಬ್ಯಾಂಕ್ ಅಂದುಕೊಂಡಿದ್ದಾರೆ. ಈ ದೇಶದಲ್ಲಿ ಅಸ್ಪೃಶ್ಯತೆ ಜನಾಂಗವನ್ನು ಮೇಲಕ್ಕೆ ತರಲು ಮೀಸಲಾತಿ ಕೊಟ್ಟಿದ್ದಾರೆ ಎಂದರು.

Govinda Karajola
ಸರ್ಕಾರದಿಂದ ಬಲವಂತವಾಗಿ ದಲಿತರ ಅರಣ್ಯ ಭೂಮಿ ಸ್ವಾಧೀನ: ಛಲವಾದಿ ನಾರಾಯಣಸ್ವಾಮಿ

ಶಿಕ್ಷಣ, ರಾಜಕೀಯ, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆ ಮಾಡಿದರು. ಆಗ ಸದಾಶಿವ ಅವರು ಮೂಲಭೂತ ಸೌಲಭ್ಯ ಕೊಡದಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದರು. ಆಗ ಯಡಿಯೂರಪ್ಪ ಅವರು ಆಯೋಗಕ್ಕೆ ರೂ.13 ಕೋಟಿ ಹಣ ಕೊಟ್ಟರು. ಅದೇ 2013ರಿಂದ ಈವರೆಗೂ ಸಿಎಂ ಸಿದ್ದರಾಮಯ್ಯ ಅವರು ನ್ಯಾಯ ಒದಗಿಸಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಿದರು. ಮೀಸಲಾತಿಯಲ್ಲಿ ಮಾದಿಗ ಸೇರಿ ಕೆಲ ಸಮುದಾಯಕ್ಕೆ ಶೇ.17ರಷ್ಟು ಮೀಸಲಾತಿ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್‌ನಲ್ಲಿ ಎಸ್ಪಿಯವರಿಗೆ ಒಳ ಮೀಸಲಾತಿ ನೀಡಿದ್ದಾರೆ. ಅದೇ ಕರ್ನಾಟಕದಲ್ಲಿ ಒಳ ಮೀಸಲಾತಿಯನ್ನು ಖರ್ಗೆಯವರು ಎಐಸಿಸಿ ಅಧ್ಯಕ್ಷರಿದ್ದರೂ, ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು ಕೊಟ್ಟಿಲ್ಲ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಕೊಟ್ಟು ಆ.1ಕ್ಕೆ ಒಂದು ವರ್ಷ ಆಗಲಿದೆ. ಆ.11 ರಿಂದ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೂ ಮುನ್ನವೇ ಒಳಮೀಸಲಾತಿ ಕೊಡಬೇಕು. ಇಲ್ಲವಾದಲ್ಲಿ ಆ.16ರಂದು ಮಾದಿಗ ಸಮುದಾಯ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಸರ್ಕಾರಕ್ಕೆ ಆಡಳಿತ ಮಾಡಲು ಬಿಡುವುದಿಲ್ಲ. ಮಂತ್ರಿಗಳು ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com