ಕುದುರೆಮುಖ ರಾಷ್ಟ್ರೀಯ ಪಾರ್ಕ್ ನಲ್ಲಿ ಕಾಡ್ಗಿಚ್ಚು, 15 ಹೆಕ್ಟೇರ್ ಅರಣ್ಯಭೂಮಿ ಬೆಂಕಿಗೆ ಆಹುತಿ: ಸ್ಥಳೀಯರ ಕೃತ್ಯ ಶಂಕೆ

ಅರಣ್ಯ ಪ್ರದೇಶದಲ್ಲಿ 1,300 ಕುಟುಂಬಗಳು ವಾಸಿಸುತ್ತಿದ್ದು, ಅದರಲ್ಲಿ 650 ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪಿಕೊಂಡಿವೆ. ಇಲಾಖೆಯು 350 ಕುಟುಂಬಗಳನ್ನು ಸ್ಥಳಾಂತರಿಸಿದೆ. ಉಳಿದ 200 ಕುಟುಂಬಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ (KNP) ಮೊನ್ನೆ ಮಂಗಳವಾರ ಸಂಭವಿಸಿದ ಕಾಡ್ಗಿಚ್ಚಿನಿಂದ ಸುಮಾರು 15 ಹೆಕ್ಟೇರ್ ಅರಣ್ಯ ಭೂಮಿ ಸುಟ್ಟು ಭಸ್ಮವಾಗಿದೆ.

ಬೆಂಕಿ ಹೊತ್ತಿ ಉರಿಯಲು ಕಾರಣರಾದ ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಇತ್ತೀಚಿನ ದಿನಗಳಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಎರಡನೇ ಕಾಡ್ಗಿಚ್ಚು ಇದಾಗಿದೆ. ಅರಣ್ಯದ ಒಳಗೆ ಮತ್ತು ಹೊರಗೆ ವಾಸಿಸುವ ಸ್ಥಳೀಯರು ಮತ್ತು ಬುಡಕಟ್ಟು ಜನಾಂಗದವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬಂಗಾರು ಬೆಳ್ಳಿಗೆಯಲ್ಲಿ ಮೊನ್ನೆ ಬೆಂಕಿ ಸಂಭವಿಸಿದೆ. ಕೆಳಗಿನ ಬೆಟ್ಟ ಮತ್ತು ಬಂಡೆಯಲ್ಲಿನ ಹುಲ್ಲು ಸುಟ್ಟುಹೋಗಿದೆ. ಕಾಡಿನೊಳಗೆ ಬುಡಕಟ್ಟು ವಸಾಹತುಗಳಿವೆ. ಯಾವುದೇ ಕಾಡ್ಗಿಚ್ಚು ನೈಸರ್ಗಿಕವಲ್ಲ; ಅವೆಲ್ಲವೂ ಮಾನವ ನಿರ್ಮಿತ. ರಾಷ್ಟ್ರೀಯ ಉದ್ಯಾನವನದಲ್ಲಿ ಹಿಂದೆ ಅನೇಕ ಸಣ್ಣ ಬೆಂಕಿ ಸಂಭವಿಸಿದ್ದವು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಅರಣ್ಯ ಪ್ರದೇಶದಲ್ಲಿ 1,300 ಕುಟುಂಬಗಳು ವಾಸಿಸುತ್ತಿದ್ದು, ಅದರಲ್ಲಿ 650 ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪಿಕೊಂಡಿವೆ. ಇಲಾಖೆಯು 350 ಕುಟುಂಬಗಳನ್ನು ಸ್ಥಳಾಂತರಿಸಿದೆ. ಉಳಿದ 200 ಕುಟುಂಬಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

ಕುದುರೆಮುಖ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಸಾಮಾನ್ಯವಾಗಿ ಪ್ರತಿವರ್ಷ ಕಾಣಿಸಿಕೊಳ್ಳುತ್ತವೆ. ಅರಣ್ಯದ ಗಡಿಯ ಹೊರಗಿರುವ ಕಳಸಾ ಶ್ರೇಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿಂದ ಬೆಂಕಿ ಕುದುರೆಮುಖ ಅರಣ್ಯ ಪ್ರದೇಶದೊಳಗೆ ಹರಡಿತು. ಜನರು ಕಾಡಿನೊಳಗೆ ಬೆಂಕಿ ಹಚ್ಚುತ್ತಿದ್ದಾರೆ. ನಾವು ನಿಯಮಿತವಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದರೂ, ಬೆಂಕಿ ರೇಖೆಗಳನ್ನು ರಚಿಸಿದ್ದರೂ ಇದೆಲ್ಲವೂ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾಡಿಗೆ ಬೆಂಕಿ ಹಚ್ಚುವುದರಿಂದ ಮೊದಲ ಮಳೆಯ ನಂತರ ಹುಟ್ಟಿಕೊಳ್ಳುವ ಹುಲ್ಲು ಜಾನುವಾರುಗಳಿಗೆ ಆಹಾರಕ್ಕಾಗಿ ಆರೋಗ್ಯಕರವಾಗಿರುತ್ತದೆ ಎಂದು ಜನರು ನಂಬುತ್ತಾರೆ. ಇಲಾಖೆ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಕುದುರೆಮುಖ, ಸೋಮೇಶ್ವರ ಮತ್ತು ಮೂಕಾಂಬಿಕಾ ವಲಯಗಳಲ್ಲಿ ಐದು ಬೇಟೆಯಾಡುವ ಪ್ರಕರಣಗಳನ್ನು ಬಹಿರಂಗಪಡಿಸಿದೆ, ಇದು ಕಾಡಿನ ಬೆಂಕಿಗೆ ಕಾರಣವಾಗಬಹುದು ಎಂದು ಮೂಲವೊಂದು ಹೇಳುತ್ತದೆ.

Representational image
ಮೇಕೆಗೆ ಮೇವು ಸಿಗಲೆಂದು ಅರಣ್ಯ ಪ್ರದೇಶದ ಒಣ ಹುಲ್ಲಿಗೆ ಬೆಂಕಿ ಇಟ್ಟ ಭೂಪ: 10 ಎಕರೆ ಅರಣ್ಯ ಸುಟ್ಟು ಭಸ್ಮ, ಬಂಧನ

ಇತ್ತೀಚೆಗೆ ಇಲಾಖೆಯು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದ ಜನರ ಗುಂಪನ್ನು ತಡೆದು, ಕಾಡುಕೋಣವನ್ನು ಬೇಟೆಯಾಡಲು ಕಾಡಿಗೆ ಹೋಗಿದ್ದ ಗುಂಪನ್ನು ಬಂಧಿಸಿತ್ತು.

ಕಾಡಿಗೆ ಬೆಂಕಿ ಹಚ್ಚಿದವರು ಯಾರು ಎಂಬುದು ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಕೆಎನ್‌ಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಎಂ ಬಾಬು ಹೇಳುತ್ತಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರೆದಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com