ಕೃಷ್ಣಾ ಮೇಲ್ದಂಡೆ ಯೋಜನೆಗೆ 87,818 ರೂ ಆಗತ್ಯವಿದೆ, ಕೇಂದ್ರದ ಮೇಲೆ ಒತ್ತಡ ಹೇರಿ: BJP ಸಹಕಾರ ಕೋರಿದ ಡಿ.ಕೆ ಶಿವಕುಮಾರ್

ಸಣ್ಣ ಹಾಗೂ ದೊಡ್ಡ ನೀರಾವರಿ ಈ ಎರಡೂ ಇಲಾಖೆಗಳ ಬಜೆಟ್ ಇರುವುದೇ 22 ಸಾವಿರ ಕೋಟಿ ರೂ.ಗಳಾಗಿದೆ. ಆದರೂ ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ.
DK Shivakumar in Assembly
ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಅಂದಾಜಿನ ಪ್ರಕಾರ ನೀರಾವರಿ ಇಲಾಖೆಗೆ 87,818 ಕೋಟಿ ರೂ.ಗಳ ಅಗತ್ಯವಿದೆ. ಈಗ ಅಂದಾಜು ಮಾಡಿದರೆ ವೆಚ್ಚ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿದರು.

ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತ ಯೋಜನೆಗೆ ಒಂದೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಡಿಕೆ.ಶಿವಕುಮಾರ್ ಅವರು ಉತ್ತರಿಸಿದರು.

ಸಣ್ಣ ಹಾಗೂ ದೊಡ್ಡ ನೀರಾವರಿ ಈ ಎರಡೂ ಇಲಾಖೆಗಳ ಬಜೆಟ್ ಇರುವುದೇ 22 ಸಾವಿರ ಕೋಟಿ ರೂ.ಗಳಾಗಿದೆ. ಆದರೂ ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆಂದು ಹೇಳಿದರು.

ಕೇಂದ್ರ ಜಲಶಕ್ತಿ ಸಚಿವರನ್ನು ಈಗಾಗಲೇ ದೆಹಲಿಯಲ್ಲಿ ಭೇಟಿಯಾಗಿ ಯೋಜನೆ ಅನುಮೋದನೆಗೆ ಮನವರಿಕೆ ಮಾಡಿದ್ದೇವೆ. ಇದಕ್ಕೂ ಮುಂಚಿತವಾಗಿ ಕಾನೂನಿನ ಚೌಕಟ್ಟಿನಲ್ಲಿ ಏನೇನು ಮಾಡಬೇಕು ಎಂದು ನಾವು ಆಲೋಚನೆ ಮಾಡಿದ್ದೇವೆಂದು ತಿಳಿಸಿದರು.

ಈಗಾಗಲೇ 75,563 ಎಕರೆ ಸಬ್ ಮರ್ಜ್ ಆಗಿದೆ, 2,543 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 29,568 ಎಕರೆ ಭೂಮಿ ವಿವಿಧ ಹಂತಗಳಲ್ಲಿದೆ. 43,452 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡಬೇಕಿದೆ. ಆರ್.ಸಿ ಭೂಮಿಗೆ 6,467 ಎಕರೆ ಬೇಕಾಗಿದೆ. ಇದರಲ್ಲಿ ಶೇ.50 ರಷ್ಟು ಎಂದರೆ 3,392 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ವಿವಿಧ ಹಂತಗಳಲ್ಲಿ 2,600 ಎಕರೆಯಿದ್ದು, 471 ಎಕರೆ ಬಾಕಿ ಉಳಿದಿದೆ.

DK Shivakumar in Assembly
Honeytrap ವಿಚಾರ ನನಗೆ ಗೊತ್ತಿಲ್ಲ; ಪೊಲೀಸ್ ಕಂಪ್ಲೇಟ್ ಕೊಡಲಿ: ಡಿ.ಕೆ ಶಿವಕುಮಾರ್

ಫಾರ್ಮೇಶನ್ ಆಫ್ 24 ಆರ್ ಸಿ ವಿಲೇಜ್ ಅಡಿ 4,636 ಎಕರೆ, ವಿವಿಧ ಹಂತಗಳಲ್ಲಿ 2,500 ಮತ್ತು 1,886 ಎಕರೆ ಬಾಕಿಯಿದೆ. ಕಾಲುವೆ ಜಾಲ ನಿರ್ಮಾಣಕ್ಕೆ 1,33,867 ಎಕರೆ ಬೇಕಾಗಿದೆ. ಇದರಲ್ಲಿ ಈಗಾಗಲೇ 51 ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರಕಾರದ ಬಳಿ ವಿವಿಧ ಹಂತಗಳಲ್ಲಿ 22,962 ಎಕರೆ ಭೂಮಿ ಇದೆ ಎಂದು ಅಂಕಿ-ಅಂಶಗಳನ್ನು ಅವರು ಸದನದ ಮುಂದಿಟ್ಟರು.

ಯೋಜನೆಗೆ ಕೇವಲ ಶೇ. 5 ರಷ್ಟು ಹಂಚಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪೂಜಾರ್ ಅವರಿಗೆ, ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಪ್ರಶ್ನೆಗಳನ್ನು ಎತ್ತಿದ ಕೀರ್ತಿ ಎಂಎಲ್‌ಸಿಗೆ ಸಲ್ಲಬೇಕು ಎಂದು ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಬಾರಿಗೆ ಭೂಸ್ವಾಧೀನಕ್ಕೆ ಒಪ್ಪಿಕೊಂಡಿದ್ದಾರೆ. ನೀವು (ಪೂಜಾರ) ನಮ್ಮೊಂದಿಗೆ ಜಗಳವಾಡುತ್ತಿದ್ದೀರಿ...ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ವಿರೋಧ ಪಕ್ಷದ ಬೆಂಬಲ ಕೋರಿದರು.

ವರಾಹಿ ಯೋಜನೆ ಶೀಘ್ರ ಪೂರ್ಣ

ಬಳಿಕ ವರಾಹಿ ಯೋಜನೆ ಯಾವಾಗ ಪ್ರಾರಂಭವಾಯಿತು ಇಲ್ಲಿಯ ತನಕ ಇದಕ್ಕೆ ಎಷ್ಟು ಖರ್ಚಾಗಿದೆ ಎಂದು ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು, “1979 ರಿಂದ 2005 ರವರೆಗೆ ಸುಮಾರು 26 ವರ್ಷಗಳ ಕಾಲ ಕೇಂದ್ರ ಪರಿಸರ ಇಲಾಖೆಯ ತಿಳುವಳಿಕೆ ಪತ್ರ ಪಡೆಯಲು ಸಮಯ ಹೋಗಿದೆ. ಇದಾದ ನಂತರ ಈ ಯೋಜನೆಗೆ ಜೀವ ಬಂದಿತು. ಆದಷ್ಟು ಬೇಗ ಕೆಲಸ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ವರಾಹಿ ಎಡದಂಡೆಯಲ್ಲಿ ಮಾತ್ರ ನೀರು ಹೋಗುತ್ತಿದೆ. ಭಂಡಾರಿಯವರ ಜೊತೆ ಒಮ್ಮೆ ಯೋಜನಾ ಸ್ಥಳಕ್ಕೆ ಭೇಟಿ ನೀಡಲಾಗುವುದು ಎಂದು ಹೇಳಿದರು.

1979 ರಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆಯ ನೀತಿ ನಿಯಮಗಳ ಅರಿವಿಲ್ಲದೆ ಯೋಜನೆ ಮಾಡಿಬಿಟ್ಟಿದ್ದಾರೆ. ಭೂ ಸ್ವಾಧೀನವೇ ಈ ಯೋಜನೆಯ ಪ್ರಮುಖ ವಿಚಾರ. 1,009 ಎಕರೆ ಪಟ್ಟಾ ಭೂಮಿಯಲ್ಲಿ 765 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡಿದ್ದು, ಇನ್ನೂ 343 ಎಕರೆ ಬಾಕಿಯಿದೆ. 813 ಎಕರೆ ಸರ್ಕಾರಿ ಭೂಮಿಯಲ್ಲಿ 714 ಎಕರೆ ಸ್ವಾಧೀನ ಮಾಡಿಕೊಂಡಿದ್ದು 99 ಎಕರೆ ಬಾಕಿಯಿದೆ. 345 ಎಕರೆ ಅರಣ್ಯ ಭೂಮಿಯಲ್ಲಿ 319 ಎಕರೆ ಸ್ವಾಧೀನ ಮಾಡಿಕೊಂಡಿದ್ದು 19 ಎಕರೆ ಬಾಕಿಯಿದೆ. ಡೀಮ್ಡ್ ಅರಣ್ಯ ಭೂಮಿಯಲ್ಲಿ 11 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 104 ಎಕರೆ ಬಾಕಿಯಿದೆ. ಸ್ವಾಧೀನಗಳಿಗೆ 73 ಕೋಟಿ ಅವಶ್ಯಕತೆಯಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com