
ಬೆಳಗಾವಿ: ಯತ್ನಾಳ್ ನಾಲಿಗೆ ಮತ್ತು ತಲೆಗೆ ಕನೆಕ್ಷನ್ ತಪ್ಪಿದೆ. ನಾಲಿಗೆ ಹರಿಬಿಟ್ಟಿದಕ್ಕೆ ಬಿಜೆಪಿಯಲ್ಲಿ ಯತ್ನಾಳರನ್ನ ಉಚ್ಛಾಟನೆ ಮಾಡಿದ್ದಾರೆ. ನಮ್ಮ ಸಮಾಜದವರು ಎಂದು ನಾವು ನಮ್ಮ ಚೌಕಟ್ಟಿನಲ್ಲಿ ಅವರಿಗೆ ಗೌರವ ಕೊಡುತ್ತೇವೆ. ಆದರೆ, ಅವರ ಮಾತನಾಡೋ ರೀತಿ ನೋಡಿದರೆ ನಾಲಿಗೆಗೆ ತಲೆಗೆ ಕನೆಕ್ಷನ್ ತಪ್ಪಿದೆ ಅನಿಸುತ್ತೆ ಎಂದು ಯತ್ನಾಳ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ನಮ್ಮ (ಪಂಚಮಸಾಲಿ) ಸಮಾಜದ ಹಿರಿಯರು ಎಂದು ಚೌಕಟ್ಟಿನಲ್ಲಿ ಗೌರವ ನೀಡುತ್ತಿದ್ದೆವು. ಅವರು ನಾಲಗೆ ಹರಿಬಿಡುವುದರಿಂದ ಬಿಜೆಪಿ ಉಚ್ಚಾಟಿಸಿದೆ. ಅವರ ಮಾತಿನ ರೀತಿ ಗಮನಿಸಿದರೆ ನಾಲಗೆ ಮತ್ತು ತಲೆಗೆ ಕನೆಕ್ಷನ್ ತಪ್ಪಿದೆ. ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಶೇ.80ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆ ಎಂದಿದ್ದು ನನ್ನ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಪಂಚಮಸಾಲಿ ಹೋರಾಟ ಪಕ್ಷಾತೀತ, ನಾವೆಲ್ಲರೂ ಪಾಲ್ಗೊಂಡಿದ್ದೆವು. ಮೀಸಲು ಕ್ಷೇತ್ರಗಳು ಸೇರಿ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಲಿಂಗಾಯತ ಪಂಚಮಸಾಲಿಗರು ಕಾರಣ ಎಂದು ಕಿಡಿಕಾರಿದರು.
ನೀವು ಕೂಡಲಸಂಗಮ ಶ್ರೀಗಳ ಪ್ರತಿಭಟನೆಗೆ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಕಾಂಗ್ರೆಸ್ ಪಕ್ಷ, ಅವರು ಬಿಜೆಪಿಯವರು. ಸಮಾಜ ಮತ್ತು ಪಕ್ಷ ಬೇರೆ ಬೇರೆ. ಹಾಗಾಗಿ, ಅವರ ಪ್ರತಿಭಟನೆಗೆ ನಾವು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಸ್ವಾಮೀಜಿ ಮತ್ತು ಮಠಮಾನ್ಯರು ಮಾರ್ಗದರ್ಶನ ಕೊಡಬೇಕು. ಎಲ್ಲಾದರೂ, ಏನಾದರೂ ತಪ್ಪಿದ್ದರೆ ಸಲಹೆ ನೀಡಬೇಕು. ಅದು ಇತಿಮಿತಿಯಲ್ಲಿ ಇರಬೇಕು. ಅದು ಅತೀ ಆಗಬಾರದು ಎಂದು ಅಸಮಾಧಾನ ಹೊರಹಾಕಿದರು.
ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿ, ಜನವರಿ ತಿಂಗಳ ಕಂತಿನ ಹಣವನ್ನು ಖಜಾನೆಗೆ ಕಳಿಸಿದ್ದೇವೆ. ಇದು ಯುಗಾದಿ ಮತ್ತು ಈದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಖುಷಿಯ ವಿಚಾರ. ಇನ್ನು ಫೆಬ್ರವರಿ ತಿಂಗಳ ಹಣವನ್ನು ಶೀಘ್ರವೇ ಕೊಡುತ್ತೇವೆ ಎಂದು ಭರವಸೆ ನೀಡಿದರು.
Advertisement