ಪ್ರಸ್ತುತ ಪಾಕ್ ವಿರೋಧಿ ಅಲೆ ಮಂಗಳೂರಿನಲ್ಲಿ ಗುಂಪು ಹತ್ಯೆಗೆ ಕಾರಣವಾಗಿರಬಹುದು: ಬಿಜೆಪಿ ಶಾಸಕ

ಯಾರಾದರೂ ಪಾಕಿಸ್ತಾನ ಪರವಾಗಿ ಮಾತನಾಡಿದರೆ ಜನ ಸುಮ್ಮನಿರಲ್ಲ ಮತ್ತು ಕುಡುಪು ಘಟನೆ(ಗುಂಪು ಹತ್ಯೆ) ಕೂಡ ಪ್ರಸ್ತುತ ಪರಿಸ್ಥಿತಿಯಿಂದಾಗಿ ನಡೆದಿರಬಹುದು. ಆದರೆ ಅದು ಆಕಸ್ಮಿಕ ದಾಳಿ, ಯೋಜಿತ ದಾಳಿಯಲ್ಲ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಗುರುವಾರ ಹೇಳಿದ್ದಾರೆ.
ಹತ್ಯೆಯಾದ ಮೊಹಮ್ಮದ್ ಅಶ್ರಫ್
ಹತ್ಯೆಯಾದ ಮೊಹಮ್ಮದ್ ಅಶ್ರಫ್
Updated on

ಮಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಯಾರಾದರೂ ಪಾಕಿಸ್ತಾನ ಪರವಾಗಿ ಮಾತನಾಡಿದರೆ ಜನರು ಸುಮ್ಮನಿರಲು ಸಾಧ್ಯವಿಲ್ಲ ಮತ್ತು ಕುಡುಪು ಘಟನೆ(ಗುಂಪು ಹತ್ಯೆ) ಕೂಡ ಪ್ರಸ್ತುತ ಪರಿಸ್ಥಿತಿಯಿಂದಾಗಿ ನಡೆದಿರಬಹುದು. ಆದರೆ ಅದು ಆಕಸ್ಮಿಕ ದಾಳಿ, ಯೋಜಿತ ದಾಳಿಯಲ್ಲ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಗುರುವಾರ ಹೇಳಿದ್ದಾರೆ.

ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಭರತ್ ಶೆಟ್ಟಿ, "ನಮ್ಮ ದೇಶದಲ್ಲಿ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಯುದ್ಧದ ಪರವಾದ ವಾತಾವರಣವಿದೆ. ಆದರೆ ನಮ್ಮ ದೇಶದಲ್ಲಿ ಪಾಕಿಸ್ತಾನ ಧ್ವಜಗಳನ್ನು ಸುಟ್ಟವರ ಮೇಲೆ ಸ್ಲೀಪರ್ ಸೆಲ್‌ಗಳು ಮತ್ತು ಭಯೋತ್ಪಾದಕ ಸಹಾನುಭೂತಿ ಹೊಂದಿರುವವರು ದಾಳಿ ನಡೆಸುತ್ತಿದ್ದಾರೆ. ಕುಡುಪುವಿನಲ್ಲಿ, ಲಭ್ಯವಿರುವ ಮಾಹಿತಿಯ ಪ್ರಕಾರ, ಆ ವ್ಯಕ್ತಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನು ಮತ್ತು ಅಲ್ಲಿದ್ದ ಜನ ನಿಜವಾಗಿಯೂ ಆಕ್ರೋಶಗೊಂಡಿದ್ದರು. ಆದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿರಬಹುದು ಎಂದರು.

ಕೆಲವು ಪಕ್ಷಗಳು ಇದನ್ನು ಯೋಜಿತ ಕೊಲೆ ಎನ್ನುತ್ತಿವೆ. ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಈ ಘಟನೆಗೆ ರಾಜಕೀಯ ಬಣ್ಣ ಬಳಿಯುತ್ತಿವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ರವೀಂದ್ರ ನಾಯಕ್ ಎಂಬ ವ್ಯಕ್ತಿಯನ್ನು ದಾಳಿಗೆ ಹೊಣೆಗಾರ ಎಂದು ಆರೋಪಿಸಿದ್ದಾರೆ. ಆದರೆ ಕ್ರಿಕೆಟ್ ಪಂದ್ಯಾವಳಿಯನ್ನು ಯಾವುದೇ ರಾಜಕೀಯ ಪಕ್ಷ ಆಯೋಜಿಸಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಹಾಜರಿದ್ದವರೆಲ್ಲರೂ ಕ್ರಿಕೆಟಿಗರು. ಅಪರಾಧ ನಡೆದಿದೆ ಮತ್ತು ನಾವು ಅದನ್ನು ಕ್ರಿಮಿನಲ್ ಚಟುವಟಿಕೆ ಎಂದು ಮಾತ್ರ ಪರಿಗಣಿಸಬೇಕು ಎಂದರು.

ಹತ್ಯೆಯಾದ ಮೊಹಮ್ಮದ್ ಅಶ್ರಫ್
ಮಂಗಳೂರು: ಕ್ರಿಕೆಟ್ ಪಂದ್ಯದ ವೇಳೆ ಜಗಳ; ಗುಂಪು ಹಲ್ಲೆಗೆ ಯುವಕ ಬಲಿ, 15 ಜನರ ಬಂಧನ

ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಪೊಲೀಸ್ ಅಧಿಕಾರಿಗಳಿಗೆ ಮೇಲಧಿಕಾರಿಗಳಿಂದ ಒತ್ತಡವಿದ್ದು,"ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು" ಎಂದು ಬಿಜೆಪಿ ಶಾಸಕರು ಒತ್ತಾಯಿಸಿದರು.

ಗುಂಪು ಹತ್ಯೆ ತನಿಖೆಗೆ ಎಸ್‌ಐಟಿ ರಚಿಸುವಂತೆ ರಮಾನಾಥ್ ರೈ ಆಗ್ರಹ

ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಮತ್ತು ಜಿಲ್ಲೆಯಲ್ಲಿ ನಡೆದ ಇತರ ಟಾರ್ಗೆಟೆಡ್ ಹತ್ಯೆಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ ಎಂದು ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ ರಮಾನಾಥ್ ರೈ ಅವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈ, "ಮಂಗಳೂರಿನಲ್ಲಿ ನಡೆದಿರುವ ಘೋರ ಅಪರಾಧ ಇದಾಗಿದ್ದು, ಇದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿ ವ್ಯಕ್ತಿಯ ಧರ್ಮ ಅಥವಾ ಜಾತಿ ಮುಖ್ಯವಲ್ಲ. ಆದರೆ ಒಬ್ಬ ಮನುಷ್ಯನನ್ನು ಹೊಡೆದು ಹತ್ಯೆ ಮಾಡಲಾಗಿದೆ. ಇದು ಖಂಡನೀಯ. ದಕ್ಷಿಣ ಕನ್ನಡದಲ್ಲಿ ಹಿಂದೆ ಹಲವಾರು ಟಾರ್ಗೆಟೆಡ್ ಹತ್ಯೆಗಳು ನಡೆದಿವೆ ಮತ್ತು ಅಮಾಯಕರು ಸಾವನ್ನಪ್ಪಿದ್ದಾರೆ. ಆದರೆ ಇಲ್ಲಿಯವರೆಗೆ ಆ ಪ್ರಕರಣಗಳಲ್ಲಿ ಒಬ್ಬ ಆರೋಪಿ ಅಥವಾ ಸಂಚುಕೋರರಿಗೆ ಶಿಕ್ಷೆಯಾಗಿಲ್ಲ. ಈ ಘೋರ ಹತ್ಯೆ ಪ್ರಕರಣದಲ್ಲೂ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮತ್ತು ನಮ್ಮ ಜಿಲ್ಲೆಯಲ್ಲಿ ಅಂತಹ ಘೋರ ಅಪರಾಧಗಳು ಮರುಕಳಿಸದಂತೆ ನೋಡಿಕೊಳ್ಳಲು ಎಸ್‌ಐಟಿ ರಚಿಸಬೇಕಾಗಿದೆ" ಎಂದು ಅವರು ಹೇಳಿದರು.

ಮಂಗಳೂರಿನ ಕುಡುಪುವಿನಲ್ಲಿ ಕೇರಳ ಮೂಲದ ಮುಸ್ಲಿಂ ಯುವಕ ಮೊಹಮ್ಮದ್ ಅಶ್ರಫ್ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಈ ಸಂಬಂಧ 15 ಜನರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com