
ಉಡುಪಿ: ಮಂಗಳೂರಿನ ಬಜ್ಪೆಯಲ್ಲಿ ಗುರುವಾರ ಹತ್ಯೆಗೀಡಾದ ಸುಹಾಸ್ ಶೆಟ್ಟಿ (30) ಹತ್ಯೆಗೆ ಪ್ರತೀಕಾರವಾಗಿ ಜಿಲ್ಲೆಯ ಬಡಗಬೆಟ್ಟುವಿನ 50 ವರ್ಷದ ಆಟೋ ರಿಕ್ಷಾ ಚಾಲಕನೊಬ್ಬನ ಮೇಲೆ ಕೊಲೆ ಯತ್ನ ನಡೆದಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಆತ್ರಾಡಿ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಕೊಲೆ ಯತ್ನದಿಂದ ತಪ್ಪಿಸಿಕೊಂಡ ವ್ಯಕ್ತಿಯನ್ನು ಅಬೂಬ್ಕರ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಆಟೋರಿಕ್ಷಾ ಚಾಲಕನನ್ನು ಹಿಂಬಾಲಿಸಿದ್ದಾರೆ. ಬಳಿಕ ಕತ್ತಿ ಮತ್ತು ಬಾಟಲಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.
ಅಬೂಬ್ಕರ್ ಅವರಿಗೆ ಪರಿಚಯವಿದ್ದ ದಿನೇಶ್ ಎಂಬಾತ ಬಾಡಿಗೆಗೆ ಬರುವಂತೆ ಹೇಳಿದ್ದ. ಅದರಂತೆ ಅಬೂಬ್ಕರ್ ಅವರು ತಮ್ಮ ಆಟೋ ರಿಕ್ಷಾದಲ್ಲಿ ಗುರುವಾರ ರಾತ್ರಿ 11.15ರ ಸುಮಾರಿಗೆ ತೆರಳಿದ್ದಾರೆ. ಆತ್ರಾಡಿಯ ಮುಖ್ಯರಸ್ತೆಯಲ್ಲಿರುವ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾರೆ. ಆಟೋವನ್ನು ಓವರ್ ಟೇಕ್ ಮಾಡಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ ಮತ್ತು ನಿಂದಿಸಿದ್ದಾರೆ. ಅಬೂಬ್ಕರ್ ಅವರು ಆಟೋ ನಿಲ್ಲಿಸದೆ ಮುಂದೆ ಓಡಿಸಿದ್ದಾರೆ. ದ್ವಿಚಕ್ರ ವಾಹನದ ಹಿಂಬದಿ ಸವಾರನ ಬಳಿ ಕತ್ತಿಯನ್ನು ಗಮನಿಸಿದ್ದಾರೆ. ಅವರಲ್ಲಿ ಒಬ್ಬಾತ ತನ್ನನ್ನು ಕೊಲ್ಲುವಂತೆ ತುಳುವಿನಲ್ಲಿ ಸೂಚಿಸಿದ್ದಾನೆ ಎಂದು ಅಬೂಬ್ಕರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಣಭಯದಿಂದ ಅಬೂಬ್ಕರ್ ಅವರು ಶೇಡಿಗುಡ್ಡೆ ಕಡೆಗೆ ಆಟೋ ಚಲಾಯಿಸಿದ್ದಾರೆ. ಮನೆಯೊಂದರ ಬಳಿ ಆಟೋ ನಿಲ್ಲಿಸಿ ಓಡಿಹೋಗುತ್ತಿದ್ದಾಗ ದಾಳಿಕೋರರಲ್ಲಿ ಒಬ್ಬಾತ ಅವರ ತಲೆಗೆ ಕತ್ತಿಯಿಂದ ಬೀಸಿದ್ದಾನೆ. ಈ ದಾಳಿಯಿಂದ ಅಬೂಬ್ಕರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮತ್ತೊಬ್ಬ ದುಷ್ಕರ್ಮಿ ಆಟೋ ರಿಕ್ಷಾದ ಮುಂಭಾಗದ ಗ್ಲಾಸ್ಗೆ ಬಾಟಲಿಯಿಂದ ಹೊಡೆದು ಹಾನಿಗೊಳಿಸಿದ್ದಾನೆ. ಅಬೂಬ್ಕರ್ ಹತ್ತಿರದ ಕಾಂಪೌಂಡ್ ಗೋಡೆಯನ್ನು ಹಾರಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಬಜ್ಪೆಯಲ್ಲಿ ಗುರುವಾರ ಹತ್ಯೆಗೀಡಾದ ಸುಹಾಸ್ ಶೆಟ್ಟಿ (30) ಹತ್ಯೆಗೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎಂದು ಇದುವರೆಗೆ ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಇಬ್ಬರು ದಾಳಿಕೋರರನ್ನು ಬಂಧಿಸಿದ್ದು, ಬಂಧಿತರನ್ನು ಹಿರಿಯಡ್ಕದ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಹಿರಿಯಡ್ಕದ ಬಾಪೂಜಿ ದರ್ಕಾಸ್ನ ಸುಶಾಂತ್ (32) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮುಂದಿನ ತನಿಖೆ ನಡೆಯುತ್ತಿದೆ ಎಂದು ಡಾ. ಅರುಣ್ ಕೆ ತಿಳಿಸಿದ್ದಾರೆ.
Advertisement