
ಬೆಂಗಳೂರು: ಕನ್ನಡ ಹಾಡು ಹೇಳುವಂತೆ ಕೇಳಿದ್ದಕ್ಕೆ ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ಎಂದು ಹೇಳಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಬಾಲಿವುಡ್ ಗಾಯಕ ಸೋನು ನಿಗಮ್ ಇದೀಗ ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಸಮರ್ಥನೆಯ ದಾಟಿಯೂ ಅದೇ ಮೊಂಡುತನದಿಂದ ಕೂಡಿದ್ದು, ಕನ್ನಡಿಗರು ಮತ್ತೆ ಕಿಡಿಕಾರಿದ್ದಾರೆ.
ಹೌದು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್ಐಆರ್, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಸೋನು ನಿಗಮ್, ಕನ್ನಡ, ಕನ್ನಡ ಎಂದು ಖುಷಿಯಲ್ಲಿ ಹೇಳುವುದಕ್ಕೂ, ಕೋಪದಿಂದ ಬೆದರಿಕೆಯೊಡ್ಡುವ ರೀತಿ ಹೇಳುವುದಕ್ಕೂ ವ್ಯತ್ಯಾಸ ಇದೆ. ನಾನು ಶೋ ನೀಡುವಾಗ ನಾಲ್ಕೈದು ಗೂಂಡಾಗಳ ರೀತಿಯಲ್ಲಿ ಇದ್ದರು. ಆ ನಾಲ್ಕೈದು ಜನರಿಗೆ ತಿಳುವಳಿಕೆ ಹೇಳುವುದು ಅಗತ್ಯವಿತ್ತು ಎಂದು ಹೇಳಿದ್ದಾರೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಪ್ಯಾಂಟ್ ತೆಗೆಸಿದರೆ ಹೊರತು, ಯಾವ ಭಾಷೆ ಎಂದು ಯಾರು ಕೂಡ ಕೇಳಲಿಲ್ಲ ಎನ್ನುವ ದಾಟಿಯಲ್ಲಿ ನಾನು ಹೇಳಿದ್ದೇನೆ. ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವವಿದ್ದು, ನಾನು ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ನಾನು ಯಾವಾಗಲೂ ಕನ್ನಡ ಹಾಡನ್ನು ಹಾಡಲು ಎಲ್ಲ ರೀತಿಯಿಂದಲೂ ಸಿದ್ಧನಾಗಿ ಬಂದಿರುತ್ತೇನೆ. ಇದನ್ನು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ಆದರೆ, ಈ ರೀತಿ ತೊಂದರೆ ಕೊಡುವವರು ಯಾರೇ ಆದರೂ ಅವರನ್ನು ಅಲ್ಲಿಯೇ ತಡೆಯಬೇಕು ಎಂದಿದ್ದಾರೆ.
ಅಂದು ಆಗಿದ್ದೇನು? ಈಸ್ಟ್ ಪಾಯಿಂಟ್ ಕಾಲೇಜು ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ್ದು, ಅದು ಸಾಮಾನ್ಯ ಕೂಡ ಆಗಿತ್ತು. ಆದರೆ, ಈ ವೇಳೆ ತಾಳ್ಮೆ ಕಳೆದುಕೊಂಡ ಸೋನು ನಿಗಮ್ ಅವರು, ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ ಎಂದು ಹೇಳಿದ್ದಾರೆ.
ಈ ಹೇಳಿಕೆ ಇದೀಗ ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಸೋನು ನಿಗಮ್ ಅವರ ಕುರಿತು ತೀವ್ರ ಟೀಕೆ ವ್ಯಕ್ತವಾಗುತ್ತಿರುವುದಲ್ಲದೇ, ಬ್ಯಾನ್ ಮಾಡಬೇಕೆಂಬ ಆಗ್ರಹಗಳೂ ಕೇಳಿ ಬರುತ್ತಿವೆ.
Advertisement