
ಬೆಂಗಳೂರು: ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಅಣುಸ್ಥಾವರ, ಅಣೆಕಟ್ಟುಗಳು ಸೇರಿದಂತೆ ಪ್ರಮುಖ ಸ್ಥಳಗಳ ರಕ್ಷಣೆಗೆ ಉತ್ತಮ ತರಬೇತಿ ಪಡೆದ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಭದ್ರತೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ(ಎಸ್ಪಿ) ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
"ನಮ್ಮಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಂತಹ ಕೆಲವು ವಿಶೇಷ ಪಡೆಗಳಿವೆ. ಅವುಗಳಿಗೆ ಕಮ್ಯಾಂಡೋ ತರಬೇತಿಗಳಾಗಿರುತ್ತವೆ. ಅಂತಹ ಸಿಬ್ಬಂದಿಗಳನ್ನು ಭದ್ರತಾ ಕೆಲಸಗಳಿಗೆ ನಿಯೋಜಿಸಲಾಗುವುದು ಎಂದರು.
ರಾಯಚೂರು(ಉಷ್ಣ ವಿದ್ಯುತ್ ಸ್ಥಾವರ), ಕೈಗಾ(ಪರಮಾಣು ವಿದ್ಯುತ್ ಸ್ಥಾವರ) ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟು ಮುಂತಾದ ಪ್ರಮುಖ ಸ್ಥಳಗಳ ರಕ್ಷಣೆಗಾಗಿ ನಾವು ಕೈಗಾರಿಕಾ ಭದ್ರತಾ ಪಡೆಗಳನ್ನು ನಿಯೋಜಿಸುತ್ತೇವೆ. ಅವರೆಲ್ಲರೂ ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಕಮಾಂಡೋ ತರಬೇತಿಯನ್ನು ಪಡೆದಿದ್ದಾರೆ" ಎಂದು ಪರಮೇಶ್ವರ ಹೇಳಿದರು.
ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆ ಸಾಕಷ್ಟಿದೆ. ಇರುವವರನ್ನೇ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹೆಚ್ಚುವರಿಯಾಗಿ ಮತ್ತಷ್ಟು ಸಿಬ್ಬಂದಿ ಬೇಕಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಏಕಾಏಕಿ ನೇಮಕಾತಿ ಮಾಡಿ ಭದ್ರತೆಗೆ ನಿಯೋಜಿಸಲಾಗುವುದಿಲ್ಲ. ಸುಮಾರು ಒಂದು ವರ್ಷಗಳ ಕಾಲ ಕಾಲಾವಕಾಶವಾದರೂ ಬೇಕಾಗುತ್ತದೆ ಎಂದು ತಿಳಿಸಿದರು.
Advertisement