
ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಪ್ರಾಧಿಕಾರಕ್ಕೆ (ಎನ್ಐಎ) ಹಸ್ತಾಂತರಿಸಬೇಕೆ ಅಥವಾ ಬೇಡವೇ ಎಂಬುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು, ಯಾವುದೇ ತನಿಖೆಗೆ ತಮ್ಮ ಆಕ್ಷೇಪವಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ವಿರೋಧ ಪಕ್ಷ ಬಿಜೆಪಿಯು ಪ್ರಕರಣವನ್ನು ಎನ್ಐಎ ತನಿಖೆಗೆ ಒತ್ತಾಯಿಸುತ್ತಿದೆ ಮತ್ತು ಸ್ಥಳೀಯ ಪೊಲೀಸರಿಂದ ನಡೆಯುತ್ತಿರುವ ತನಿಖೆಯ ಟೀಕೆಗಳ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, ಪ್ರಕರಣದ ಎಲ್ಲಾ ಅಪರಾಧಿಗಳನ್ನು ಮತ್ತು ಅಪರಾಧದ ನಂತರ ಹಲ್ಲೆಗಳಲ್ಲಿ ಭಾಗಿಯಾಗಿರುವವರನ್ನು ಬಂಧಿಸುವಂತೆ ನಾನು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯಾರಿಗೂ ಯಾರನ್ನೂ ಕೊಲ್ಲುವ ಹಕ್ಕಿಲ್ಲ ಎಂದು ಹೇಳಿದರು.
ಕೊಲೆ ನಡೆದಾಗ ಉದ್ವಿಗ್ನ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ನನ್ನ ಆದ್ಯತೆಯೆಂದರೆ ನನ್ನ ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡುವುದು. ಆದ್ದರಿಂದ, ನನಗೆ ಯಾವುದೇ ಮಾಹಿತಿ ಬಂದರೂ, ನಾನು ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ತನಿಖೆ ಮಾಡಲಿ. ರಾಜಕೀಯವಾಗಿ ಒಂದು ವಿಚಾರ ಸಿಕ್ಕರೆ ಸಾಕು ಮಾತನಾಡುತ್ತಾರೆ. ನನ್ನ ವಿರುದ್ಧ ಮಾತ ನಾಡುವವರ ವಿರುದ್ಧ ನಾನೇನೂ ಮಾತನಾಡಲ್ಲ. ದೇವರು ಹಾಗೂ ದೇವರಂತಹ ನನ್ನ ಕ್ಷೇತ್ರದ ಜನರು ಇರುವಾಗ ಇದ್ಯಾವುದರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ನನಗೆ ಮದುವೆ, ಕ್ರಿಕೆಟ್ ಪಂದ್ಯಾವಳಿಗಳು ಮತ್ತು ಸ್ಥಳೀಯ ಕಾರ್ಯಕ್ರಮಗಳಿಗೆ ಆಹ್ವಾನಗಳು ಬರುತ್ತಿವೆ. ಆದರೆ ನಾನು ಕಾರ್ಯನಿರತವಾಗಿದ್ದರಿಂದ ಈ ನಿರ್ದಿಷ್ಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ. ಕೆಲವರು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ನನಗೆ ರಾಜಕೀಯ ಮುಖ್ಯವಲ್ಲ, ಆದರೆ ನನ್ನ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಮತ್ತು ಭ್ರಾತೃತ್ವ ಮುಖ್ಯ. ನಮ್ಮ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಕೆಲಸ ಮತ್ತು ಹೂಡಿಕೆಗಳು ಸಿಗಬೇಕು. ನಮ್ಮ ಜಿಲ್ಲೆ ಅಭಿವೃದ್ಧಿಯನ್ನು ಯಾರೂ ಹಳಿತಪ್ಪಿಸಬಾರದು ಎಂದು ಅವರು ಹೇಳಿದರು.
Advertisement