Operation Abhyasa: KRS ಬಳಿ ಸೈರನ್ ಶಬ್ಧ ಕೇಳಿ ಸ್ಥಳೀಯರು ದಿಗ್ಭ್ರಮೆ, ಮಾಕ್ ಡ್ರಿಲ್ ಎಂದು ತಿಳಿದ ಬಳಿಕ ನಿಟ್ಟುಸಿರು!
ಮೈಸೂರು: ಕೆಆರ್ಎಸ್ ಅಣೆಕಟ್ಟಿನಲ್ಲಿರುವ ಬೃಂದಾವನ ಉದ್ಯಾನದ ಸೌಂದರ್ಯವನ್ನು ಆನಂದಿಸಲು ನೆರೆದಿದ್ದ ಪ್ರವಾಸಿಗರು ಜೋರಾಗಿ ಕೇಳಿಬಂದ ಸೈರನ್ಗಳು, ಹೊಗೆ ಮತ್ತು ಸುತ್ತಲೂ ಕಂಡುಬಂದ ಅವ್ಯವಸ್ಥೆಯ ದೃಶ್ಯಗಳ ಕಂಡು ದಿಗ್ಭ್ರಮೆಗೊಂಡ ಬೆಳವಣಿಗೆ ಭಾನುವಾರ ಕಂಡು ಬಂದಿತು.
ಇದೇನು ಭಯೋತ್ಪಾದಕ ದಾಳಿಯೇ ಅಥವಾ ಸಿನಿಮಾದ ಚಿತ್ರೀಕರಣವೇ ಎಂಬುದನ್ನು ತಿಳಿಯಲು ಸಾಧ್ಯವಾಗದೆ ಹಲವರು ಆತಂಕಗೊಂಡಿದ್ದರು. ಕೆಲ ಕಾಲದ ನಂತರ ಇದು ಗೃಹ ಸಚಿವಾಲಯದ ನಿರ್ದೇಶನಗಳ ಪ್ರಕಾರ ಮಂಡ್ಯ ಜಿಲ್ಲಾಡಳಿತ ನಡೆಸಿದ ಅಣಕು ಪ್ರದರ್ಶನವೆಂದು ತಿಳಿದು ನಿಟ್ಟುಸಿರು ಬಿಟ್ಟರು.
ಜಿಲ್ಲಾಧಿಕಾರಿ ಕುಮಾರ ಅವರ ನೇತೃತ್ವದಲ್ಲಿ ಬೃಂದಾವನದ ಆವರಣದಲ್ಲಿ ಎರಡು ತಾಸುಗಳಿಗೂ ಹೆಚ್ಚು ಕಾಲ ಅಣಕು ಪ್ರದರ್ಶನ ನಡೆಯಿತು.
ಮೂರು ಹಂತಗಳಲ್ಲಿ ನಡೆದ ಈ ಅಣಕು ಪ್ರದರ್ಶನದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಎನ್ಸಿಸಿ ಕೆಡೆಟ್ಗಳು ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮೊದಲನೇ ಹಂತದಲ್ಲಿ ಬೃಂದಾವನ ಉದ್ಯಾನದ ದೋಣಿ ವಿಹಾರ ಕೇಂದ್ರದಲ್ಲಿ ನಡೆಸಲಾಯಿತು. ನೀರಿನಲ್ಲಿ ಬಿದ್ದವರ ರಕ್ಷಣೆಗೆ ಧಾವಿಸುವ ಸನ್ನಿವೇಶವನ್ನು ಜಲಾಶಯದ ತಗ್ಗಿನಲ್ಲಿರುವ ಕೊಳದಲ್ಲಿ ಸೃಷ್ಟಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ದೋಣಿಯಲ್ಲಿ ಧಾವಿಸಿ ನೀರಿನಲ್ಲಿ ಮುಳುಗಿದ್ದವರನ್ನು ದಡಕ್ಕೆ ತಂದರು. ಅಸ್ವಸ್ಥರಾಗಿದ್ದವರಿಗೆ ವೈದ್ಯಕೀಯ ಸಿಬ್ಬಂದಿ ತಾತ್ಕಾಲಿಕ ಶಿಬಿರಗಳಲ್ಲಿ ತುರ್ತು ಚಿಕಿತ್ಸೆ ನೀಡಿದರು.
2ನೇ ಹಂತದಲ್ಲಿ ಕಟ್ಟಡ ಕುಸಿತ ಅಥವಾ ಬೆಂಕಿ ಅವಘಡದಿಂದ ಉಂಟಾಗುವ ಅಪಾಯದ ಸನ್ನಿವೇಶವನ್ನು ಬೃಂದಾವನ ಪಕ್ಕದ ಹೋಟೆಲ್ ಮಯೂರ ಕಾವೇರಿ ಕಟ್ಟಡದಲ್ಲಿ ಸೃಷ್ಟಿಸಲಾಗಿತ್ತು. ಅವಘಡ ನಡೆದ ಸ್ಥಳದಿಂದ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ಠಾಣೆಗಳಿಗೆ ಮಾಹಿತಿ ರವಾನಿಸುವುದು ಮತ್ತು ಕಟ್ಟಡದ ಒಳಗೆ ಸಿಲುಕಿದವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುವ ಬಗೆ ಗಮನ ಸೆಳೆಯಿತು. ರಕ್ಷಣಾ ತಂಡ ಶರವೇಗದಲ್ಲಿ ಕಟ್ಟಡ ಏರುವುದು, ಪರಿಕರಗಳ ಬಳಕೆ, ಬೆಂಕಿ ನಂದಿಸುವುದು, ಸಂತ್ರಸ್ತರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ವಿಧಾನವನ್ನು ನೆರೆದಿದ್ದವರು ಕುತೂಹಲದಿಂದ ವೀಕ್ಷಿಸಿದರು. ರಕ್ಷಣಾ ಸಿಬ್ಬಂದಿಯ ಚಾಕಚಕ್ಯತೆಗೆ ಸ್ಥಳದಲ್ಲಿದ್ದವರು ಬೆರಗಾದರು.
ನೀರು, ಬೆಂಕಿ ಮತ್ತು ಕಟ್ಟಡ ಕುಸಿತದಂತಹ ಅವಘಡಗಳಿಂದ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ಶಿಬಿರಗಳನ್ನು ಸೃಷ್ಟಿಸಲಾಗಿತ್ತು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಗಂಭೀರ ಸ್ಥಿತಿಯಲ್ಲಿರುವವರು ಮತ್ತು ಸಣ್ಣ ಪ್ರಮಾಣದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಶಿಬಿರಗಳಿದ್ದವು.
ಅಂತಿಮ ಹಂತದಲ್ಲಿ, 10 ನಿಮಿಷಗಳ ಕಾಲ ಬ್ಲ್ಯಾಕ್-ಔಟ್ ಮಾಡಲಾಯಿತು. ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಉಪ ಆಯುಕ್ತ ಡಾ.ಕುಮಾರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಜರಿದ್ದರು.