
ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತಷ್ಟು ಚುರುಕು ಪಡೆದುಕೊಂಡಿದೆ. ಎರಡು ದಿನಗಳಿಂದ ಸುರಿದ ಮಳೆ ನಗರದಲ್ಲಿ ತಂಪೆರೆದಿದ್ದರೆ, ಮತ್ತೊಂದೆಡೆ ಭಾರಿ ಅವಾಂತರವನ್ನೂ ಸೃಷ್ಟಿ ಮಾಡಿದೆ. ನಗರದ ಸಾಯಿ ಲೇಔಟ್ಗೆ ಜಲ ಕಂಟಕ ಎದುರಾಗಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ.
ಮಳೆಯಿಂದಾಗಿ ಬೆಂಗಳೂರಿನ ಸಾಯಿಲೇಔಟ್ ಜಲಾವೃತಗೊಂಡಿದ್ದು, ಇದೇ ವರ್ಷದಲ್ಲಿ 2ನೇ ಬಾರಿ ಸಮಸ್ಯೆ ಎದುರಾಗಿದೆ. ಸಾಯಿ ಮಂದಿರಕ್ಕೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಹಿಳೆಯೊಬ್ಬರು ಆಯಕ್ತರನ್ನು ತರಾಟೆಗೆ ತೆಗೆದುಕೊಂಡರು.
ಆಯುಕ್ತರನ್ನು ಇಂಗ್ಲೀಷ್ ನಲ್ಲಿ ನಿಮ್ಮ ಹೆಸರೇನು, ನೀವು ಬಿಬಿಎಂಪಿ ಆಯುಕ್ತರೇ ಎಂದು ಪ್ರಶ್ನಿಸಿದರು. ಮಳೆ ಬಂದರೆ ಭಾರೀ ಪ್ರಮಾಣದ ನೀರು ಶೇಖರಣೆಯಾಗುತ್ತಿದೆ. ಬಿಬಿಎಂಪಿಗೆ ಫೋನ್ ಮಾಡಿದರೆ ಸ್ಪಂದಿಸುವುದಿಲ್ಲ. ಪ್ರತಿ ಮಳೆಗೂ ಇದೇ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ಅಧಿಕಾರಿಗಳು ಭೇಟಿ ನೀಡಿದಾಗ ಈ ಬಾರಿ ಸಮಸ್ಯೆ ಪರಿಹರಿಸುತ್ತೇವೆಂದು ಭರವಸೆ ನೀಡಿ ಹೋಗುತ್ತಾರೆ. ಪ್ರತೀ ವರ್ಷವೂ 10 ಸಾವಿರ ಆಸ್ತಿ ತೆರಿಗೆ ಪಾವತಿ ಮಾಡುತ್ತೇವೆ. ಚುನಾವಣೆ ಬಂದರೆ ಮತ ಹಾಕುತ್ತೇವೆ. ಈ ಬಾರಿ ಕಸ ಶುಲ್ಕ ಬೇರೆ ಪಾವತಿ ಮಾಡುತ್ತಿದ್ದೇವೆ. ಆಧರೆ, ನಮ್ಮ ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಎಂದು ಆಖ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ಪ್ರತಿ ವರ್ಷವೂ ಇದೇ ರೀತಿಯ ಪರಿಸ್ಥಿತಿ ಎದುರಾಗುವುದರಿಂದ ಕೆಲವು ಬಾಡಿಗೆದಾರರು ಲೇಔಟ್ ಖಾಲಿ ಮಾಡಿದ್ದಾರೆ. ನಾವು ಕಟ್ಟಡದ ಮಾಲೀಕರು ಆಗಿರುವುದರಿಂದ ಅವರಂತೆ ಖಾಲಿ ಮಾಡಲು ನಮಗೆ ಸಾಧ್ಯವಿಲ್ಲ. ಆಸ್ತಿ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳನ್ನು ಪಾವತಿಸಿದ್ದರೂ, ನಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ ಎಂದು ಹೇಳಿದರು.
ಮತ್ತೊಬ್ಬ ನಿವಾಸಿ ಮಾತನಾಡಿ, ಪ್ರವಾಹ ಪರಿಸ್ಥಿತಿಯಿಂದಾಗಿ ಇಲ್ಲಿನ ಆಸ್ತಿ ಮೌಲ್ಯಗಳೂ ಕೂಡ ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಇರಲೂ ಆಗದೆ, ಮಾರಾಟ ಮಾಡಲೂ ಆಗದೆ ಸಂಕಷ್ಟ ಪಡುತ್ತಿದ್ದೇವೆಂದು ಬೇಸರ ವ್ಯಕ್ತಪಡಿಸಿದರು.
ಎನ್ ಸಿ ಕಾಲೋನಿಯ ಗೃಹಿಣಿ ಭಾರತಿ ಎಂಬುವವರು ಮಾತನಾಡಿ, ಚರಂಡಿಗಳಲ್ಲಿ ಹೂಳು ತೆಗೆಯುವ ಕೆಲಸ ನಡೆದಿಲ್ಲ. ನಂತರ ಮಳೆನೀರು ಎಲ್ಲಿಗೆ ಹೋಗುತ್ತದೆ? ಪ್ರಶ್ನಿಸಿದರು.
ನಾವು ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆದಿದ್ದೇವೆ, ನೀರನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದೆವು. ಇದೀಗ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಹಣವನ್ನು ಖರ್ಚು ಮಾಡಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಆಯುಕ್ತ ಮಹೇಶ್ವರ್ ರಾವ್ ಅವರು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಸಮಾಧಾನ ಪಡಿಸಿದರು.
ಇನ್ನು ಸಾಯಿ ಲೇಔಟ್ ರಸ್ತೆಯ ತುಂಬಾ ನೀರು ನಿಂತಿಕೊಂಡಿದ್ದ ಹಿನ್ನೆಲೆಯಲ್ಲಿ ಆಯುಕ್ತರು ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಪರಿಶೀಲನೆ ನಡೆಸಿ, ಎಲ್ಲೆಲ್ಲಿ ನೀರು ನಿಂತಿದೆಯೇ ಅದನ್ನೆಲ್ಲಾ ಪಂಪ್ ಗಳ ಮೂಲಕ ತ್ವರಿತವಾಗಿ ನೀರು ಹೊರ ಹಾಕುವಂತೆ ಸೂಚಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಬಳಿಯ ಮಾನ್ಫೋ ಹತ್ತಿರ ರಾಜಕಾಲುವೆ ಸಂಪರ್ಕ ಸರಿಯಾಗಿಲ್ಲದ ಕಾರಣ ಜಲಾವೃತವಾಗುತ್ತದೆ. ಹೊಸದಾಗಿ ಕಾಲುವೆ ನಿರ್ಮಾಣಕ್ಕೆ ಮಾನ್ಯತಾ, ಇಬಿಎಸ್ ಐಟಿ ಪಾರ್ಕ್, ಮ್ಯಾನ್ಫೋ, ಕಾರ್ಲೆ ಇನ್ಫಾಟೆಕ್ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಯಿ ಲೇಔಟ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಲೇಔಟ್ ರಾಜಕಾಲುವೆಗಿಂತ ತುಂಬ ತಗ್ಗಿನಲ್ಲಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಮಳೆ ಬಂದಾಗ ಜಲಾವೃತವಾಗುತ್ತಿದೆ. ಜೊತೆಗೆ ರಾಜಕಾಲುವೆ ಹಾದುಹೋಗುವ ಜಾಗದಲ್ಲಿರುವ ರೈಲ್ವೆ ವೆಂಟ್ ಸಣ್ಣದಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಈಗಾಗಲೇ ರೈಲ್ವೆ ಇಲಾಖೆ ಜೊತೆ ಸಮನ್ವಯ ಸಾಧಿಸಿ ರೈಲ್ವೆವೆಂಟ್ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಬಳಿ ತಪಾಸಣೆ
ಮಾನ್ಯತಾ ಟೆಕ್ ಬಳಿ ಬರುವ ಮಾನ್ಫೋ ಹತ್ತಿರದ ರಾಜಕಾಲುವೆ ಸಂಪರ್ಕ ಸರಿಯಾಗಿಲ್ಲದ ಕಾರಣ ಜಲಾವೃತವಾಗುತ್ತದೆ. ಈ ಸಂಬಂಧ ಹೊಸದಾಗಿ ಮಳೆ ನೀರುಗಾಲುವೆ ನಿರ್ಮಾಣ ಮಾಡಲು ಮಾನ್ಯತಾ ಇ.ಬಿ.ಸ್ ಐಟಿ ಪಾರ್ಕ್ ಮ್ಯಾನ್ಫೊ ಕಾರ್ಲೆ ಇನ್ಫಾಟೆಕ್ ಕಂಪನಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮಹೇಶ್ವರರಾವ್ ಸೂಚಿಸಿದರು.
ನಾಗವಾರ ಜಂಕ್ಷನ್ ಪರಿಶೀಲನೆ
ಮೆಟ್ರೊ ಕಾಮಗಾರಿ ನಡೆಯುತ್ತಿರುವ ನಾಗವಾರ ಜಂಕ್ಷನ್ ಜಲಾವೃತವಾಗುವುದನ್ನು ತಪ್ಪಿಸಲು ಮಳೆ ನೀರುಗಾಲುವೆಯಲ್ಲಿ ನಿರಂತರವಾಗಿ ಸ್ವಚ್ಛತೆ ಕಾಪಾಡಲು ಮೆಟ್ರೊ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಕ್ರಾಸ್ ಕಲ್ವರ್ಟ್ ಕಾಮಗಾರಿ ಮಾಡುವಂತೆ ಸೂಚಿಸಿದರು.
ಥಣಿಸಂದ್ರ ಬಳಿ, ಮಳೆನೀರು ಚರಂಡಿಗಳ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದ್ದು, ಸುಮಾರು 20 ಟ್ರಕ್ ಲೋಡ್ಗಳಷ್ಟು ಹೂಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಹೂಳನ್ನು ತೆಗೆದುಹಾಕಬೇಕು ಮತ್ತು SWD ಯ ಮೇಲ್ಭಾಗದಲ್ಲಿರುವ ಸ್ಲ್ಯಾಬ್ ಅಳತೆಗಳನ್ನು ತೆಗೆದುಕೊಳ್ಳಬೇಕು ಎಂದು ರಾವ್ ಹೇಳಿದರು.
Advertisement