
ಬೆಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿಗರು ಅಕ್ಷರಶಃ ಕಂಗೆಟ್ಟು ಹೋಗಿದ್ದಾರೆ. ನೀರಿನ ಹರಿವು, ನಿರ್ಮಾಣ ಕಾರ್ಯಗಳ ಮಧ್ಯೆ, ಉರುಳಿದ ಮರಗಳು ಮತ್ತು ಕೊಂಬೆಗಳು ನಗರದಾದ್ಯಂತ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದರ ಪರಿಣಾಮವಾಗಿ ಸಂಚಾರ ದಟ್ಟಣೆ ಮತ್ತು ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ವಾರಾಂತ್ಯದಲ್ಲಿ ಮಳೆಯಿಂದಾಗಿ ಸಂಚಾರಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲದಿದ್ದರೂ, ನಿನ್ನೆ ಮತ್ತು ಇಂದು ಕಚೇರಿ, ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೀವ್ರ ತೊಂದರೆಯಾಗಿದೆ.
ಜಲಾವೃತಗೊಂಡ ರಸ್ತೆಗಳು, ಮನೆಗಳಿಗೆ ನೀರು ನುಗ್ಗಿರುವುದು ಮತ್ತು ಪ್ರಯಾಣಿಕರು ಓಡಾಡಲು ಹೆಣಗಾಡುತ್ತಿರುವ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವು ಪ್ರದೇಶಗಳಲ್ಲಿ, ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿದ್ದವು ಮತ್ತು ಪ್ರಯಾಣಿಕರು ತಮ್ಮ ವಾಹನಗಳನ್ನು ಮೊಣಕಾಲು ಆಳದ ನೀರಿನಲ್ಲಿ ತಳ್ಳುತ್ತಿರುವುದು ಕಂಡುಬಂದಿದೆ. ಗಾಳಿಯಿಂದಾಗಿ ಬಿದ್ದ ಮರಗಳು ಮತ್ತು ಕೊಂಬೆಗಳು ಅನೇಕ ಸ್ಥಳಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಿವೆ. ಬೆಂಗಳೂರು ಸಂಚಾರ ಪೊಲೀಸರು (BTP) ರೂಪೇನ ಅಗ್ರಹಾರದಲ್ಲಿ ನೀರು ನಿಂತ ಕಾರಣ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ನ್ನು ಮುಚ್ಚಲಾಗಿದೆ. ನಗರದಾದ್ಯಂತ ಹಲವಾರು ಅಂಡರ್ಪಾಸ್ಗಳನ್ನು ಮುಚ್ಚಲಾಗಿದೆ.
ನಿನ್ನೆ ಬೆಳಗ್ಗೆ ಬೆಂಗಳೂರಿನ ಹೊರ ವರ್ತುಲ ರಸ್ತೆ (ಬಿಟಿಎಂ ಲೇಔಟ್), ಸಿಲ್ಕ್ ಬೋರ್ಡ್ ಜಂಕ್ಷನ್ನ ಎರಡೂ ಬದಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ವಿದ್ಯಾಶಿಲ್ಪ್ ರೈಲ್ವೆ ಅಂಡರ್ಪಾಸ್, ಎಚ್ಎಸ್ಆರ್ ಲೇಔಟ್ (ಹಲವು ಸ್ಥಳಗಳು), ನೈಸ್ ರಸ್ತೆ, ಕನಕಪುರ ಮುಖ್ಯ ರಸ್ತೆ, ಮುತ್ತನಲ್ಲೂರು ಜಂಕ್ಷನ್, ಸೋನಿ ವರ್ಲ್ಡ್ ಸಿಗ್ನಲ್, ಮಹದೇವಪುರ ಕಡೆಗೆ ಲೌರಿ ರೈಲ್ವೆ ಅಂಡರ್ಪಾಸ್, ಸರ್ಜಾಪುರದ ಕಾರ್ಮೆಲಾರಾಮ್ ರಸ್ತೆ, ಹೆಣ್ಣೂರು ಅಂಡರ್ಪಾಸ್, ಬಾಲಗೆರೆ ಐ ಕ್ರಾಸ್, ಆನಂದ ರಾವ್ ವೃತ್ತ, ಇಂದಿರಾನಗರ, ಆರ್ಆರ್ ನಗರ, ಭಾಷ್ಯಂ ವೃತ್ತ, ಅಲ್ಲಾಳಸಂದ್ರ ಮತ್ತು ಕಸ್ತೂರಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಮತ್ತು ನಿಧಾನವಾಗಿ ಚಲಿಸುವ ವಾಹನಗಳು ಕಂಡುಬಂದವು.
ಇದಲ್ಲದೆ, ಬಿಬಿಎಂಪಿ ವೈಟ್-ಟಾಪಿಂಗ್ ಕೆಲಸ, ಬಿಎಂಆರ್ಸಿಎಲ್ ಮೆಟ್ರೋ ನಿರ್ಮಾಣ ಮತ್ತು ರಸ್ತೆ ಮುಚ್ಚುವಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಪರ್ಯಾಯ ಮಾರ್ಗಗಳಲ್ಲಿ ತೀವ್ರ ದಟ್ಟಣೆ ಮತ್ತು ನಿಧಾನಗತಿಯ ಸಂಚಾರ ಕಂಡುಬಂದಿದೆ.
ಇಂದು ಕೂಡ ಮುಂದುವರಿದ ಮಳೆ:ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ ಮುಂದುವರಿದಿದೆ. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಜಯನಗರ, ಚಾಮರಾಜಪೇಟೆ, ಬನಶಂಕರಿ, ಶಾಂತಿನಗರ, ವಿಜಯನಗರ, ಚಂದ್ರಾಲೇಔಟ್, ರಾಜಾಜಿನಗರ, ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್ ಸೇರಿ ಹಲವೆಡೆ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಪೈಕಿ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಮಳೆ ಜೋರಾಗಿದೆ. ಪರಿಣಾಮವಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆಯಾಗಿದೆ.
ಮಡಿವಾಳ ಅಯ್ಯಪ್ಪ ಅಂಡರ್ ಪಾಸ್ ನಿರ್ಬಂಧ
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದ್ದು, ಹೊಸೂರು ಮುಖ್ಯರಸ್ತೆಯಲ್ಲಿ ನಗರದಿಂದ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ವಾಹನ ಸವಾರರು ಬದಲಿ ರಸ್ತೆ ಬಳಸುವುದು ಒಳಿತು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹೊಸೂರು ಮುಖ್ಯರಸ್ತೆ, ರಿಂಗ್ ರೋಡ್ ಜಲಾವೃತ
ಹೊಸೂರು ಮುಖ್ಯರಸ್ತೆ ಮತ್ತು ಹೊರ ವರ್ತುಲ ರಸ್ತೆ ಜಲಾವೃತಗೊಂಡಿದ್ದು, ಪರ್ಯಾಯ ಮಾರ್ಗಗಳ ಬಳಕೆಗೆ ಪೊಲೀಸರು ಸಲಹೆ ನೀಡಿದ್ದಾರೆ. ಬನಶಂಕರಿ ಕಡೆಯಿಂದ ಬರುವ ವಾಹನಗಳನ್ನು ಈಸ್ಟ್ ಎಂಡ್ ಸರ್ಕಲ್ ಬಳಿ ಎಡ ತಿರುವು ಮಾಡಿಸಿ ಸಾಗರ್ ಜಂಕ್ಷನ್ ಗೆ ಬಂದು ಬಲ ತಿರುವು ಮಾಡಿಸಿ ಬನ್ನೇರಘಟ್ಟ ರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.
ಜಯದೇವ ಜಂಕ್ಷನ್ನಲ್ಲಿ ಎಡ ತಿರುವು ಮಾಡಿಸಿ ಬನ್ನೇರುಘಟ್ಟ ಮುಖ್ಯರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಬಿ.ಟಿ.ಎಂ ಲೇಔಟ್ ಒಳಭಾಗದಿಂದ ಬರುವ ವಾಹನಗಳನ್ನು 16ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ಮಾಡಿಸಿ ತಾವರೆಕೆರೆ ಮುಖ್ಯರಸ್ತೆ ಮೂಲಕ ಡಾ. ಮರಿಗೌಡ ರಸ್ತೆ, ಡೈರಿ ಸರ್ಕಲ್ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪುಟ್ಟೇನಹಳ್ಳಿ ಮುಖ್ಯರಸ್ತೆ ಕಡೆಯಿಂದ ಕೊತ್ತನೂರು ದಿನ್ನೆ ಜಂಕ್ಷನ್ ಕಡೆಗೆ ಹಾಗೂ ಹೊಸಗುಡ್ಡದಹಳ್ಳಿ ಜಂಕ್ಷನ್ ಕಡೆಯಿಂದ ಮೈಸೂರು ರಸ್ತೆ ಟೋಲ್ ಗೇಟ್ ಕಡೆಗೆ ಮಳೆನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
Advertisement