
ಬೆಂಗಳೂರು: ನೆರೆಯ ಆಂಧ್ರಪ್ರದೇಶದೊಂದಿಗಿನ ನದಿ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ, ವಿಶೇಷವಾಗಿ ತುಂಗಭದ್ರಾ ನದಿಯಲ್ಲಿ ಹೂಳು ಸಂಗ್ರಹವಾಗುವುದರಿಂದ ನೀರಿನ ಮುಕ್ತ ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಹೇಳಿದರು.
ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ತರಬೇತಿ ಪಡೆದ ಶಿಬಿರದ ಆನೆಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ತುಂಗಭದ್ರಾದಲ್ಲಿ ಹೂಳು ಸಂಗ್ರಹವಾಗುತ್ತಿರುವ ಬಗ್ಗೆ ವಿವರವಾದ ಚರ್ಚೆ ನಡೆಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸಮಯ ನಿಗದಿಪಡಿಸಲು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬೆಂಬಲವನ್ನು ಕೋರಿದರು.
ನದಿ ದಂಡೆಯಲ್ಲಿ ಹೂಳು ಸಂಗ್ರಹವಾಗುತ್ತಿರುವುದರಿಂದ ಸುಮಾರು 24 ಟಿಎಂಸಿ ಅಡಿ ನೀರಿನ ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ, ಇದನ್ನು ಪರಿಹರಿಸಬೇಕಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿಗಳು ಸಮಯ ನೀಡಿದ ಕೂಡಲೇ ನಾನು ಮತ್ತು ರಾಜ್ಯದ ತಂಡ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ಚರ್ಚೆ ನಡೆಸಲಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್ ಅವರು, ನೀರಿನ ಮುಕ್ತ ಹರಿವು ಎಲ್ಲರಿಗೂ ಮುಖ್ಯವಾಗಿದೆ. ಸಮಸ್ಯೆಯನ್ನು ಆದಷ್ಟು ಬೇಗ ಪರಿಶೀಲಿಸಿ ಪರಿಹರಿಸಲಾಗುವುದು ಎಂದು ಹೇಳಿದರು.
ಏತನ್ಮಧ್ಯೆ, ಕಾರ್ಯಕ್ರಮದ ವೇಳೆ ಪವನ್ ಕಲ್ಯಾಣ್ ಅವರು, ಕರ್ನಾಟಕದ ನಾಡ ಗೀತೆಯ ಮೊದಲ ಎರಡು ಸಾಲುಗಳನ್ನು ಪಠಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ. ಶಿವಕುಮಾರ್ ಅವರೂ ಕೂಡ ಅಚ್ಚರಿಗೊಂಡರು.
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಪವನ್ ಕಲ್ಯಾಣ್ ಅವರು ನಿರರ್ಗಳವಾಗಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. ಅರಣ್ಯ ಸಂರಕ್ಷಣೆಯ ಕುರಿತು ಕುವೆಂಪು ಅವರ ಕವಿತೆಗಳನ್ನೂ ಹೇಳಿದರು. ಇದು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
Advertisement