ಪ್ರಯಾಣ ದರ ಏರಿಕೆ ಬೆನ್ನಲ್ಲೇ ಶೌಚಾಲಯ ಬಳಕೆಗೂ ಶುಲ್ಕ ವಿಧಿಸಿದ BMRLC: ಸಾರ್ವಜನಿಕರಿಂದ ತೀವ್ರ ವಿರೋಧ, ಸರ್ಕಾರದ ವಿರುದ್ಧ BJP ವಾಗ್ದಾಳಿ
ಬೆಂಗಳೂರು: ಮೆಟ್ರೋ ಟಿಕೆಟ್ ದರವನ್ನು ಶೇ.70ರಷ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಇದೀಗ ತನ್ನ ವ್ಯಾಪ್ತಿಯ ಶೌಚಾಲಯ ಬಳಕೆಗೂ ಶುಲ್ಕ ನಿಗದಿ ಪಡಿಸಿದೆ. ಬಿಎಂಆರ್ಸಿಎಲ್'ನ ಈ ನಡೆಯು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಮ್ಮ ಮೆಟ್ರೋ ಆರಂಭವಾದ 2011ರಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಶೌಚಾಲಯ ಸೌಲಭ್ಯ ಇತ್ತು. ಸದ್ಯ ಏಕಾಏಕಿ ದರ ನಿಗದಿ ಮಾಡಿದೆ.
ಬಿಎಂಆರ್ಸಿಎಲ್ ತನ್ನ ವ್ಯಾಪ್ತಿಯ ಶೌಚಾಲಯಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಆ ಸಂಸ್ಥೆಯೇ ಮೆಟ್ರೋ ನಿಲ್ದಾಣಗಳ ಶೌಚಾಲಯಗಳನ್ನು ನಿರ್ವಹಣೆ ಮಾಡಲಿದೆ. ಇದಕ್ಕಾಗಿ ಶೌಚಾಲಯ ಬಳಕೆಗೆ ಶುಲ್ಕ ನಿಗದಿಸಿದ್ದು, ಮೂತ್ರ ವಿಸರ್ಜನೆಗೆ ರೂ2, ಮಲ ವಿಸರ್ಜನೆಗೆ ರೂ.5 ನಿಗದಿಸಲಾಗಿದೆ.
ಬಿಎಂಆರ್ಸಿಎಲ್ ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಇನ್ನು ಮುಂದೆ ನ್ಯಾಷನಲ್ ಕಾಲೇಜು, ಲಾಲ್ಬಾಗ್, ಸೌಥ್ ಆ್ಯಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಯೆಲಚೇನಹಳ್ಳಿ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಡಾ.ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಮೆಜೆಸ್ಟಿಕ್ ನಿಲ್ದಾಣಗಳಲ್ಲಿನ ಶೌಚಾಲಯಗಳ ಬಳಕೆಗೂ ಮುನ್ನ ಪಾವತಿ ಮಾಡಬೇಕಾಗುತ್ತದೆ.
ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಈ ನಡುವೆ ಸರ್ಕಾರದ ಈ ನಡೆಗೆ ರಾಜ್ಯ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಪ್ರಯಾಣ ದರವನ್ನು ಶೇ.71ರಷ್ಟು ಏರಿಕೆ ಮಾಡಿದ್ದ ಸರ್ಕಾರ ಇದೀಗ ಶೌಚಾಲಯಗಳನ್ನು ಬಳಸಲು ಜನರಿಂದ ಹಣ ಕೀಳಲು ಮುಂದಾಗಿದೆ. ಕಾಂಗ್ರೆಸ್ ನಾಟಕ ಪುಸ್ತಕದಲ್ಲಿ ಶೌಚಾಲಯಗಳು ಸಹ ಆದಾಯದ ಮೂಲವಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ ಮಾಡಿದ್ದ ಸರ್ಕಾರ ಇದೀಗ ಬೆಂಗಳೂರಿನ 12 ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯಗಳ ಬಳಸಲು ಜನರಿಂದ ಶುಲ್ಕ ಪಡೆಯುವ ಹಂತಕ್ಕೆ ಬಂದಿದೆ . ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಕುಸಿಯುತ್ತಿರುವ ಮೂಲಸೌಕರ್ಯಗಳೊಂದಿಗೆ ಹೋರಾಡುತ್ತಿರುವ ನಗರದಲ್ಲಿ, ಕಾಂಗ್ರೆಸ್ ಈಗ ಮೂಲಭೂತ ಮಾನವ ಅಗತ್ಯಗಳನ್ನು ಪೂರೈಸುವಲ್ಲಿಯೂ ಹಣ ಮಾಡುವ ಮಾರ್ಗವನ್ನು ಕಂಡುಕೊಂಡಿದೆ ಎಂದು ಕಿಡಿಕಾರಿದ್ದಾರೆ
ಶೌಚಾಲಯ ಬಳಕೆಯು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು - ಘನತೆಯಿಂದ ಬದುಕುವ ಹಕ್ಕಿನ ಅತ್ಯಗತ್ಯ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ. ಇದನ್ನು ಕಾಂಗ್ರೆಸ್ ಸರ್ಕಾರ ತಿಳಿಯಬೇಕು. ಆದರೆ, ಕಾಂಗ್ರೆಸ್ ನಾಟಕ ಪುಸ್ತಕದಲ್ಲಿ ಶೌಚಾಲಯಗಳು ಕೂಡ ಆದಾಯದ ಮೂಲವಾಗಿದೆ.
ಬಡವರ ಮೇಲೆ ತೆರಿಗೆ ವಿಧಿಸುವುದರಿಂದ ಹಿಡಿದು ಈಗ ಸಾರ್ವಜನಿಕ ಶೌಚಾಲಯಗಳನ್ನು ವಾಣಿಜ್ಯೀಕರಣಗೊಳಿಸುವವರೆಗೆ ಸರ್ಕಾರವು ಪರಿಣಾಮಕಾರಿಯಾಗಿ ಕಾನೂನುಬದ್ಧ ಸುಲಿಗೆ ದಂಧೆಗೆ ಇಳಿದಿದೆ. ಇದು ನಾಚಿಯಿಲ್ಲದ ಸರ್ಕಾರ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಕಲ್ಪನೆಯಡಿಯಲ್ಲಿ, ಸಾರ್ವಜನಿಕ ಶೌಚಾಲಯಗಳು ಎಲ್ಲರಿಗೂ ಉಚಿತ ಮತ್ತು ಪ್ರವೇಶಿಸಬಹುದಾದ ರೀತಿಯಲ್ಲಿರಬೇಕು, ವಿಶೇಷವಾಗಿ ಮೆಟ್ರೋ ನಿಲ್ದಾಣಗಳಂತಹ ಜನದಟ್ಟಣೆಯ ಪ್ರದೇಶಗಳಲ್ಲಿ. ಆದರೆ ಕಾಂಗ್ರೆಸ್ ಈ ದೃಷ್ಟಿಕೋನವನ್ನು Pay-Per-Pee ರಾಜಕೀಯಕ್ಕೆ ಇಳಿಸಿದೆ. ಸರ್ಕಾರದ ಮುಂದಿನ ನಡೆಯೇನು? ಕಬ್ಬನ್ ಪಾರ್ಕ್ನಲ್ಲಿನ ಗಾಳಿ ಉಸಿರಾಡಲೂ ಪ್ರವೇಶ ಶುಲ್ಕ ವಿಧಿಸುವುದೇ? ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ