

ಹೊಸಪೇಟೆ: ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಬೇಕು ಎಂಬ ಉದ್ದೇಶದಿಂದ ಎಲ್ಲ ಮದರಸ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಆರಂಭಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯಂತೆ ಮದರಸಗಳಲ್ಲಿ 90 ದಿನದಲ್ಲಿ ಕನ್ನಡ ಕಲಿಸುವ ಯೋಜನೆ ಆರಂಭವಾಗಿದೆ. ಉರ್ದು ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ, ಇಂಗ್ಲಿಷ್ ಭಾಷೆ ಕಲಿಸಲು ಆದೇಶಿಸಿದೆ’ ಎಂದರು.
ಕರ್ನಾಟಕದಲ್ಲಿದ್ದು, ಕನ್ನಡ ಕಲಿಯದಿದ್ದರೆ ಇಷ್ಟು ವರ್ಷಗಳಿಂದ ಇಲ್ಲಿಯೇ ಇದ್ದರೂ ಉಪಯೋಗವಿಲ್ಲ. ಹಾಗಾಗಿ ಎಲ್ಲ ಮದರಸಾಗಳಲ್ಲಿಯೂ ಕನ್ನಡ ಕಲಿಸುವ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉರ್ದು ಶಾಲೆಗಳಲ್ಲಿ ಮೂರು ಭಾಷೆಗಳು ಕಡ್ಡಾಯ ಇದ್ದವು. ಅದೇ ರೀತಿ ಈಗ ಮೊದಲ ಭಾಷೆಯಾಗಿ ಕನ್ನಡ ತೆಗೆದುಕೊಳ್ಳಬೇಕು. ಎರಡನೇ ಭಾಷೆಯಾಗಿ ಉರ್ದು ಹಾಗೂ ಮೂರನೇ ಭಾಷೆಯಾಗಿ ಇಂಗ್ಲೀಷ್ ಭಾಷೆ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು
Advertisement