

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್(The New Indian Express) ಇಂದು ಶನಿವಾರ ಸಾಯಂಕಾಲ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ದೇವಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಧೈರ್ಯ, ಸೃಜನಶೀಲತೆ ಮತ್ತು ಪ್ರಭಾವವನ್ನು ಗುರುತಿಸಿ ಸಂಭ್ರಮಿಸುವ ಸಮಯ ಇದಾಗಿದೆ.
ದೇವಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 35ನೇ ಆವೃತ್ತಿ ಇದಾಗಿದ್ದು, ಪ್ರಶಸ್ತಿಗೆ ಆಯ್ಕೆಯಾದ 11 ಮಹಿಳಾ ಸಾಧಕಿಯರು ವಿವಿಧ ಕ್ಷೇತ್ರಗಳಿಂದ ಬಂದಿದ್ದಾರೆ, ಕ್ರೀಡಾ ಕ್ಷೇತ್ರದಿಂದ, ಬಹುಭಾಷಾ ನಟಿ, ಸಾಮಾಜಿಕ ಉದ್ಯಮಿ, ಕರಕುಶಲ ನಾವೀನ್ಯಕಾರ, ಶಿಕ್ಷಣ ತಜ್ಞರಿಂದ ನಿರ್ವಹಣಾ ವೃತ್ತಿಪರ, ಸುಸ್ಥಿರ ಉದ್ಯಮ ನಾಯಕಿ ಮತ್ತು ಪ್ರಸಿದ್ಧ ಲೇಖಕಿ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದು, ಅವರ ಅತ್ಯುತ್ತಮ ಕೆಲಸ, ಸಮುದಾಯಗಳನ್ನು ರೂಪಿಸುವುದು, ಅಡೆತಡೆಗಳನ್ನು ನಿವಾರಿಸಿ ಸಮಾಜದಲ್ಲಿ ಮುನ್ನುಗ್ಗಿರುವುದು, ಚೈತನ್ಯ, ಧೈರ್ಯ ಮತ್ತು ನವೀನ ಕೌಶಲ್ಯಗಳ ಮೂಲಕ ಬದಲಾವಣೆಗೆ ಪ್ರೇರಣೆ ನೀಡಿರುವುದನ್ನು ಮನಗಂಡು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದವರು
ಕ್ರೀಡಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಮಾಜಿ ಕ್ರಿಕೆಟರ್ ಮತ್ತು ಪ್ರಸಾರಕಿ ವೇದಾ ಕೃಷ್ಣಮೂರ್ತಿ, ಜೀವನದಲ್ಲಿ ಜನರು ಶೂನ್ಯ ತ್ಯಾಜ್ಯ ಜೀವನವನ್ನು ನಡೆಸಲು ಪ್ರೇರಣೆ ನೀಡಿದ ಬೇರ್ ನೆಸೆಸಿಟೀಸ್ನ ಸಂಸ್ಥಾಪಕಿ ಸಹರ್ ಮನ್ಸೂರ್; ಮನರಂಜನೆಯಲ್ಲಿ ಶ್ರೇಷ್ಠತೆಗಾಗಿ ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್; ಬಟ್ಟೆ ಉದ್ಯಮದಲ್ಲಿ ಸಾಧನೆಗೈದ ಜವಳಿ ಕಲಾವಿದೆ ಮತ್ತು ಕೈಮಗ್ಗ ನಾವೀನ್ಯಕಾರ್ತಿ ಪ್ರಗತಿ ಮಾಥುರ್; ವಿವಿಧ ಪ್ರಕಾರಗಳಲ್ಲಿ ತಮ್ಮ ಅದ್ಭುತ ಬರವಣಿಗೆಗಾಗಿ ಮೆಚ್ಚುಗೆ ಪಡೆದ ಲೇಖಕಿ ಅನಿತಾ ನಾಯರ್; ಗುಣಮಟ್ಟದ ಶಿಕ್ಷಣಕ್ಕಾಗಿ ಮಾನದಂಡವನ್ನು ಹೆಚ್ಚಿಸುವಲ್ಲಿನ ಕೆಲಸ ಮಾಡಿರುವ ಇನ್ವೆಂಚರ್ ಅಕಾಡೆಮಿಯ ಶಿಕ್ಷಣ ತಜ್ಞೆ ಮತ್ತು ಸಿಇಒ ನೂರೈನ್ ಫಜಲ್; ಸಬಲೀಕರಣಕ್ಕಾಗಿ ಕರಕುಶಲತೆಯನ್ನು ಸಾಧನವನ್ನಾಗಿ ಮಾಡಿಕೊಂಡಿದ್ದಕ್ಕಾಗಿ ಕ್ರಾಫ್ಟಿಜನ್ ಫೌಂಡೇಶನ್ನ ಸಂಸ್ಥಾಪಕಿ ಮಯೂರ ಬಾಲಸುಬ್ರಮಣಿಯನ್; ಕ್ರೀಡೆಗಳಲ್ಲಿ ವ್ಯವಸ್ಥಿತ ಬದಲಾವಣೆಗೆ ಚಾಲನೆ ನೀಡಿದಕ್ಕಾಗಿ ಕ್ರೀಡಾ ಆಡಳಿತಾಧಿಕಾರಿ ದೀಪ್ತಿ ಬೋಪಯ್ಯ; ಬಿಕ್ಕಟ್ಟುಗಳ ನಿರ್ವಹಣೆಗಾಗಿ ನಿರ್ವಹಣಾ ವೃತ್ತಿಪರೆ ಹೇಮಾ ರವಿಚಂದರ್; ಭಾರತದ ಅತ್ಯಂತ ಪ್ರಸಿದ್ಧ ಆಹಾರ ಬ್ರ್ಯಾಂಡ್ಗಳಲ್ಲಿ ಒಂದನ್ನಾಗಿ ಪರಿವರ್ತಿಸುವಾಗ ಅಧಿಕೃತ ಮತ್ತು ಆರೋಗ್ಯಕರ ಆಹಾರವನ್ನು ತರುವಲ್ಲಿ ಅವರ ದಾರ್ಶನಿಕ ಪಾತ್ರಕ್ಕಾಗಿ ರಾಮೇಶ್ವರಂ ಕೆಫೆಯ ಸಹ-ಸಂಸ್ಥಾಪಕಿ ದಿವ್ಯಾ ರಾಘವೇಂದ್ರ ರಾವ್; ಮತ್ತು ಸಾಮಾಜಿಕ ಉದ್ಯಮಿ ಮತ್ತು ನೆಕ್ಟರ್ ಫ್ರೆಶ್ನ ಸಂಸ್ಥಾಪಕಿ ಛಾಯಾ ನಂಜಪ್ಪ ಈ ವರ್ಷ ದೇವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೊಟೇಲ್ ನಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಆಕ್ಸಿಲರ್ ವೆಂಚರ್ಸ್ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರತಿಷ್ಠಿತ ದೇವಿ ಪ್ರಶಸ್ತಿಗಳನ್ನು 2014ರಲ್ಲಿ ದೆಹಲಿಯಲ್ಲಿ ನೀಡಲು ಆರಂಭಿಸಲಾಯಿತು. ಅಂದಿನಿಂದ ವಿವಿಧ ನಗರಗಳಲ್ಲಿ ನಡೆದ ಹಿಂದಿನ 34 ಆವೃತ್ತಿಗಳಲ್ಲಿ ದೇಶಾದ್ಯಂತ 300 ಕ್ಕೂ ಹೆಚ್ಚು ಅಪರೂಪದ ಮಹಿಳಾ ಸಾಧಕರಿಗೆ ಗೌರವ ಸಲ್ಲಿಸಲಾಗಿದೆ.
ಬೆಂಗಳೂರಿನಲ್ಲಿ ದೇವಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ಹಿಂದಿನ ಎರಡು ಆವೃತ್ತಿಗಳನ್ನು 2015 ಮತ್ತು 2024 ರಲ್ಲಿ ಆಯೋಜಿಸಲಾಗಿತ್ತು.
Advertisement