

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ನ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರ ಜಾಮಿನಿಗೆ ವಿಧಿಸಲಾಗಿದ್ದ ಪ್ರಮುಖ ಷರತ್ತನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಸಡಿಲಿಸಿದೆ.
ಕಾಲ್ತುಳಿತ ಪ್ರಕರಣದಲ್ಲಿ ಜೂನ್ 6 ರಂದು ಸೋಸಲೆ ಅವರನ್ನು ಬಂಧಿಸಲಾಗಿತ್ತು. ಅದಾದ ಆರು ದಿನಗಳ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ವೇಳೆ ಸೋಸಲೆ ಅವರಿಗೆ ಬೆಂಗಳೂರು ಬಿಟ್ಟು ಹೋಗದಂತೆ ನಿರ್ಬಂಧ ಹೇರಲಾಗಿತ್ತು.
ಈ ಆದೇಶವನ್ನು ಮಾರ್ಪಡಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಸೋಸಲೆ, ತಮ್ಮ ವೃತ್ತಿಪರ ಕರ್ತವ್ಯಗಳ ಕಾರಣದಿಂದಾಗಿ ದೇಶದಾದ್ಯಂತ ಪ್ರಯಾಣಿಸುವುದು ಕಡ್ಡಾಯವಾಗಿದೆ ಎಂದು ವಾದಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸೋಸಲೆ ಅವರ ಕೆಲಸವು ಭಾರತದಾದ್ಯಂತ ಆಗಾಗ್ಗೆ ಪ್ರಯಾಣಿಸುವುದನ್ನು ಬೇಡುತ್ತದೆ ಮತ್ತು ಅವರು ಪ್ರತಿ ಬಾರಿ ಪ್ರಯಾಣಿಸಿದಾಗ ಅಥವಾ ಸ್ಥಳ ಬದಲಾಯಿಸಿದಾಗ ತನಿಖಾ ಅಧಿಕಾರಿಗೆ ತಿಳಿಸಲು ಒಪ್ಪಿಕೊಂಡಿದ್ದಾರೆ ಎಂದು ಗಮನಿಸಿದೆ.
ಈ ಭರವಸೆಯನ್ನು ಒಪ್ಪಿಕೊಂಡ ಪೀಠವು, ಸೋಸಲೆ ಅವರಿಗೆ ಪರಿಹಾರ ನೀಡುವುದು ಸಮಂಜಸವಾಗಿದೆ. ಅರ್ಜಿದಾರರು ನಗರದಿಂದ ಹೊರಡುವ ಮೊದಲು ಮತ್ತು ಅವರು ಹಿಂದಿರುಗಿದ ನಂತರ ತನಿಖಾ ಅಧಿಕಾರಿಗೆ ತಿಳಿಸಿದರೆ ಷರತ್ತು ಸಡಿಲಿಸಲಾಗುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಸಂದೇಶ್ ಜೆ ಚೌಟ, ಸಹ-ಆರೋಪಿಗಳ ಮೇಲೆ ವಿಧಿಸಲಾಗಿದ್ದ ಇದೇ ರೀತಿಯ ನಿರ್ಬಂಧಗಳನ್ನು ಈಗಾಗಲೇ ಸಡಿಲಿಸಲಾಗಿದೆ ಎಂದು ಗಮನಸೆಳೆದರು.
ಆದಾಗ್ಯೂ, ಸೋಸಲೆ ಅವರಿಗೆ ಜಾಮೀನು ನೀಡಿದಾಗ ಆರಂಭಿಕವಾಗಿ ವಿಧಿಸಲಾಗಿದ್ದ ಷರತ್ತುಗಳ ಭಾಗವಾಗಿದ ಪಾಸ್ಪೋರ್ಟ್ ಅನ್ನು ಒಪ್ಪಿಸುವ ಷರತ್ತನ್ನು ಬದಲಿಸಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರರ್ಥ ಅವರು ಇನ್ನೂ ವಿದೇಶ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ.
ಜೂನ್ 4 ರಂದು ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿತ್ತು. ಅಲ್ಲಿ ಆರ್ಸಿಬಿ ತಂಡದ ಐಪಿಎಲ್ ವಿಜಯೋತ್ಸವದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಘಟನೆಯಲ್ಲಿ ಹನ್ನೊಂದು ಜನರು ಸಾವಿಗೀಡಾಗಿದ್ದರು ಮತ್ತು ಹಲವಾರು ಜನರು ಗಾಯಗೊಂಡರು.
Advertisement