

ಬೆಂಗಳೂರು: ಬೆಂಗಳೂರು 'ನಿರಂತರವಾಗಿ ವಿಕಸನಗೊಳ್ಳುತ್ತಿರುವ ಪರಿವರ್ತನೆಯ ಎಂಜಿನ್' ಎಂದು ಬಣ್ಣಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಸರ್ಕಾರವು 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡುವ ಮೂಲಕ ನಗರದ ಮೂಲಸೌಕರ್ಯವನ್ನು ಸುಧಾರಿಸುತ್ತಿದೆ ಎಂದು ಮಂಗಳವಾರ ಹೇಳಿದ್ದಾರೆ.
ಐಟಿ-ಬಿಟಿ ಇಲಾಖೆ ವತಿಯಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಇಐಸಿ) ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಕಾರ್ಯಕ್ರಮವಾಗಿರುವ 'ಬೆಂಗಳೂರು ಟೆಕ್ ಸಮ್ಮಿಟ್ 2025'ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
'ತಂತ್ರಜ್ಞಾನ, ನಾವೀನ್ಯತೆ ಮತ್ತು ಹೂಡಿಕೆಯ ಅಡಿಪಾಯಗಳು ಬಲವಾಗಿದ್ದಾಗ ಮಾತ್ರ ಅಭಿವೃದ್ಧಿ ಹೊಂದುತ್ತವೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ನಮ್ಮ ಸರ್ಕಾರವು ಅಭೂತಪೂರ್ವ ವೇಗದಲ್ಲಿ ಮೂಲಸೌಕರ್ಯ ಕೆಲಸಗಳನ್ನು ವೇಗಗೊಳಿಸುತ್ತಿದೆ' ಎಂದು ಶಿವಕುಮಾರ್ ಹೇಳಿದರು.
'ಸರ್ಕಾರವು ಬೆಂಗಳೂರಿನಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಿದೆ. ₹42,500 ಕೋಟಿ ವೆಚ್ಚದಲ್ಲಿ 40 ಕಿಮೀ ಉದ್ದದ ಅವಳಿ ಸುರಂಗ ಯೋಜನೆ, ₹18,000 ಕೋಟಿ ವೆಚ್ಚದಲ್ಲಿ 41 ಕಿಮೀ ಉದ್ದದ ಡಬಲ್ ಡೆಕ್ಕರ್ ಮೆಟ್ರೋ, ₹15,000 ಕೋಟಿ ವೆಚ್ಚದಲ್ಲಿ 110 ಕಿಮೀ ಎಲಿವೇಟೆಡ್ ಕಾರಿಡಾರ್, ₹5,000 ಕೋಟಿ ವೆಚ್ಚದಲ್ಲಿ 320 ಕಿಮೀ ಬಫರ್ ರಸ್ತೆಗಳು, ₹500 ಕೋಟಿ ವೆಚ್ಚದಲ್ಲಿ ಸ್ಕೈಡೆಕ್ ಮತ್ತು ₹27,000 ಕೋಟಿಯಲ್ಲಿ 74 ಕಿಮೀ ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ' ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಸುಧಾರಿಸಲು ನಾವು ₹1 ಲಕ್ಷ ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣವನ್ನು ಯೋಜಿಸಲಾಗುತ್ತಿದೆ. ಅನಿವಾಸಿ ಭಾರತೀಯರಿಗೆ ಸಹಾಯ ಮಾಡಲು ಮತ್ತು ಸಂಘಟಿಸಲು ಕರ್ನಾಟಕ ಸರ್ಕಾರವು ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು.
'ನಾವು ಅನಿವಾಸಿ ಭಾರತೀಯರಿಗಾಗಿ ವಸತಿ ಲೇಔಟ್ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ; ಬಿಡದಿ ಬಳಿ 9,000 ಎಕರೆಯಲ್ಲಿ ವಿಶ್ವ ದರ್ಜೆಯ ನಗರ - AI ಸಿಟಿ ನಿರ್ಮಿಸುತ್ತೇವೆ. ಎಲ್ಲ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳಿಗೆ ವಸತಿ ಕಲ್ಪಿಸಲು ನಾವು ಅಂತರರಾಷ್ಟ್ರೀಯ ಸಂಕೀರ್ಣವನ್ನು ನಿರ್ಮಿಸುತ್ತಿದ್ದೇವೆ. ಬೆಂಗಳೂರಿನ ಹವಾಮಾನ ಮತ್ತು ಸಂಸ್ಕೃತಿಗೆ ಬೇರೆ ಯಾವುದೇ ನಗರಗಳು ಹೊಂದಿಕೆಯಾಗುವುದಿಲ್ಲ' ಎಂದರು.
ತಂತ್ರಜ್ಞಾನ ಮತ್ತು ಪ್ರತಿಭೆ ಬೆಂಗಳೂರಿನ ಅವಳಿ ಸ್ತಂಭಗಳು. ಬೆಂಗಳೂರಿನ ಶಕ್ತಿ ಅದರ ಮೂಲಸೌಕರ್ಯ ಅಥವಾ ನೀತಿ ಪ್ರೋತ್ಸಾಹಗಳಲ್ಲಿ ಮಾತ್ರವಲ್ಲ- ಅದು ಇಲ್ಲಿನ ಜನರಲ್ಲಿದೆ ಎಂದು ಹೇಳಿದರು.
ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವಲ್ಲಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಉದ್ಯಮದ ನಾಯಕರಿಗೆ ಮನವಿ ಮಾಡಿದ ಉಪ ಮುಖ್ಯಮಂತ್ರಿ, ಈ ನಿಟ್ಟಿನಲ್ಲಿ ಅಗತ್ಯ ನೀತಿಗಳನ್ನು ತರಲಾಗುತ್ತಿದೆ. ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮಶೀಲತೆ ನಮ್ಮ ರಾಜ್ಯ ಅಥವಾ ನಮ್ಮ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅವಕಾಶಗಳನ್ನು ಸೃಷ್ಟಿಸುವ ಭವಿಷ್ಯವನ್ನು ನಾವೆಲ್ಲರೂ ಒಟ್ಟಾಗಿ ನಿರ್ಮಿಸೋಣ. ಪರಸ್ಪರ ಬೆಳವಣಿಗೆಗೆ ನಾವು ಸಹಕರಿಸುತ್ತೇವೆ ಮತ್ತು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಎಂದು ಕರ್ನಾಟಕದ ಪರವಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
Advertisement