

ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟರ್ ಚಾಲನೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಬೈಕ್ ಸವಾರನಿಗೆ ಮಹಿಳಾ ಟೆಕ್ಕಿಯೊಬ್ಬರು ಚಾಕುವಿನಿಂದ ಇರಿದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ವಾಪಸಂದ್ರ ಬ್ರಿಡ್ಜ್ ಬಳಿ ಈ ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡು ಮೂಲದ ರಿಂಬಿಕಾ ಎಂಬ ಮಹಿಳಾ ಟೆಕ್ಕಿ ಬೈಕ್ ಸವಾರ ನರಸಿಂಹ ಮೂರ್ತಿಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ. ಇದರಿಂದ ನರಸಿಂಹ ಮೂರ್ತಿ ಅವರ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆರೋಪಿ ಮಹಿಳೆ ರಿಂಬಿಕಾ ಇಂದು ತಮ್ಮ ತಮಿಳುನಾಡು ನೊಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದರು. ಈ ವೇಳೆ ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಓಡಿಸುತ್ತಿದ್ದರು.
ಈ ವೇಳೆ ಹಿಂದೆ ಬರುತ್ತಿದ್ದ ವಾಹನಗಳಿಗೆ ಅಡಚಣೆಯಾಗಿತ್ತು. ಇದೇ ವೇಳೆ ಹಿಂದೆ ಬರುತ್ತಿದ್ದ ಬೈಕ್ ಸವಾರ ನಿಖಿಲ್ ಹಾಗೂ ನರಸಿಂಹಮೂರ್ತಿ ಚಿಕ್ಕಬಳ್ಳಾಪುರದ ಸೇತುವೆ ಕೆಳಗಡೆ ಸ್ಕೂಟಿ ನಿಲ್ಲಿಸಿ ನಿಂತಿದ್ದ ರಿಂಬಿಕಾರನ್ನು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಮಹಿಳೆ ಆಕೆ ಬಳಿ ಇದ್ದ ಫೋಲ್ಡೆಡ್ ಚಾಕುವಿನಿಂದ ನರಸಿಂಹ ಮೂರ್ತಿ ಮೇಲೆ ದಾಳಿ ಮಾಡಿಮಾಡಿದ್ದಾರೆ. ಈ ವೇಳೆ ಬೈಕ್ ಸವಾರ ನಿಖಿಲ್ ಕೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಹಿಂಬದಿ ಸವಾರ ನರಸಿಂಹಮೂರ್ತಿಗೂ ಗಾಯವಾಗಿದೆ.
ರಿಂಬಿಕಾ ಚಾಕುವಿನಿಂದ ಅಟ್ಯಾಕ್ ಮಾಡ್ತಿದ್ದಂತೆ ನಿಖಿಲ್ ಸಹ ವಾಪಸ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಹೋಟೆಲ್ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಿಳೆಯ ಹಿಡಿದ ಸ್ಥಳೀಯರು
ಇನ್ನು ಘಟನೆ ನಡೆಯುತ್ತಿದ್ದಂತೆ ಇತರೆ ವಾಹನ ಸವಾರರು, ಸ್ಥಳೀಯರು ಜಮಾಯಿಸಿ ಪೊಲೀಸರನ್ನ ಕರೆಸಿ ಆಕೆಯನ್ನ ವಶಕ್ಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಯುವಕ ನಿಖಿಲ್ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ರಿಂಬಿಕಾರನ್ನ ವಿಚಾರಣೆ ನಡೆಸಿದ್ದಾರೆ.
ಯುವಕರಿಂದಲೇ ಅನುಚಿತ ವರ್ತನೆ, ಮಹಿಳೆ ಪ್ರತ್ಯಾರೋಪ
ಅಂತೆಯೇ ಮಹಿಳೆ ಕೂಡ ಯುವಕರ ವಿರುದ್ಧ ಪ್ರತ್ಯಾರೋಪ ಮಾಡಿದ್ದು, 'ಯುವಕರು ನನ್ನನ್ನ ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ವರ್ತನೆ ಮಾಡಿದರು. ಅದಕ್ಕೆ ನಾನು ಚಾಕುವಿನಿಂದ ಅಟ್ಯಾಕ್ ಮಾಡಿದೆ ಎಂದು ರಿಂಬಿಕಾ ಹೇಳಿದ್ದಾರೆ.
ಠಾಣೆಯಿಂದ ತಪ್ಪಿಸಿಕೊಂಡು ಹೋಗಲು ಯತ್ನ
ಇದೇ ಸಂದರ್ಭದಲ್ಲಿ ಮಹಿಳೆ ಪೊಲೀಸ್ ಠಾಣೆಯಲ್ಲೇ ಹೈಡ್ರಾಮಾ ಮಾಡಿದ್ದು, ಪೊಲೀಸರ ತನಿಖೆಗೆ ಸಹಕರಿಸದೆ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಮಾನಸಿಕವಾಗಿ ಸದೃಢವಾಗಿರದ ರಿಂಬಿಕಾ, ಪೊಲೀಸರಿಗೆ ಸಹಕರಿಸದೆ ಚಿತ್ರವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಬುದ್ಧಿವಾದ ಹೇಳಿದಕ್ಕೆ ಚಾಕು ತೆಗೆದು ಹಲ್ಲೆ ಮಾಡುವ ಮೂಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
Advertisement