

ಬೆಂಗಳೂರು: ಕರ್ನಾಟಕದ ಅರಣ್ಯಗಳ ನಿರ್ವಹಣೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ ಎನ್ನಲಾದ ಕ್ರಿಕೆಟ್ ಪಂದ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅರಣ್ಯ ಇಲಾಖೆ ಮತ್ತೊಮ್ಮೆ ತೀವ್ರ ಪರಿಶೀಲನೆಗೆ ಒಳಗಾಗಿದೆ.
ಈ ದೃಶ್ಯಗಳು ಸಂರಕ್ಷಣಾವಾದಿಗಳು ಮತ್ತು ವನ್ಯಜೀವಿ ಕಾರ್ಯಕರ್ತರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ, ನಾಗರಹೊಳೆ ಹುಲಿ ಸಂರಕ್ಷಣಾ ಅಭಯಾರಣ್ಯದ (ಎನ್ಟಿಆರ್) ಅರಣ್ಯಾಧಿಕಾರಿಗಳನ್ನು, ಬೆಂಗಳೂರಿನ ಪ್ರಧಾನ ಕಚೇರಿಯ ಉನ್ನತ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಾಗೂ ಬುಡಕಟ್ಟು ಮತ್ತು ಅರಣ್ಯವಾಸಿಗಳ ಸ್ಥಳಾಂತರ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.
ನಾಗರಹೊಳೆ ವ್ಯಾಪ್ತಿಯೊಳಗಿನ ನಾನಾಚ್ಚಿ ಗೇಟ್ ಬಳಿ ಜನರ ಗುಂಪೊಂದು ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುತ್ತಿರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಬುಧವಾರ ಮತ್ತು ಗುರುವಾರ ಪಂದ್ಯಾವಳಿ ನಡೆದಿದ್ದು, ಇದಕ್ಕಾಗಿ ಹೆಚ್ಚಿನ ಪ್ರಮಾಣದ ಗಿಡಗಳನ್ನು ತೆರವುಗೊಳಿಸಲಾಗಿದೆ. ಪಂದ್ಯವನ್ನು ವೀಕ್ಷಿಸಲು ಆಗಮಿಸಿದ ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಾಹನಗಳನ್ನು ಮೈದಾನದ ಸುತ್ತಲೂ ನಿಲ್ಲಿಸಿ ತೆರೆದ ಸ್ಥಳದಲ್ಲಿ ಊಟ ಮಾಡುತ್ತಿರುವುದು ಕಂಡುಬಂದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮಾತ್ರವಲ್ಲದೆ ಅರಣ್ಯ ಸಂರಕ್ಷಣಾ ಕಾಯ್ದೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ನಿಯಮಗಳು ಮತ್ತು ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲಂಘನೆ ಯಾಗಿದೆ ಎಂದು ಅರಣ್ಯ ಸಂರಕ್ಷಣವಾದಿಗಳು ವಿವಕಿಸಿದದಿಕೃ
ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಅರಣ್ಯ ಇಲಾಖೆಗಳಿಗೆ ಯಾವುದೇ ಅರಣ್ಯೇತರ ಚಟುವಟಿಕೆಗಳು ಮತ್ತು ಹಸಿರು ಹೊದಿಕೆಯನ್ನು ತೆರವುಗೊಳಿಸಲು ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿತ್ತು.
"2011 ರ ಉಪಗ್ರಹ ಚಿತ್ರಗಳು ಆ ಸ್ಥಳದಲ್ಲಿ ದಟ್ಟವಾದ ಹಸಿರು ಕಾಡಿನ ಪ್ರದೇಶವನ್ನು ತೋರಿಸಿದವು, ಆದರೆ ಈಗ ಖಾಲಿಮೈದಾನವಾಗಿ ಪರಿವರ್ತಿಸಲಾಗಿದೆ" ಎಂದು ಸಂರಕ್ಷಣಾ ತಜ್ಞರು ಆರೋಪಿಸಿದ್ದಾರೆ,
ಆಟದ ವೀಡಿಯೊ ಮತ್ತು ಛಾಯಾಚಿತ್ರಗಳು ವೈರಲ್ ಆದ ಕೂಡಲೇ, ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವ ಈಶ್ವರ್ ಬಿ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿಸಿ ರೈ ಅವರಿಗೆ ಪತ್ರ ಬರೆದಿದ್ದಾರೆ, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ನಾಗರಹೊಳೆ ಹುಲಿ ಮೀಸಲು ನಿರ್ದೇಶಕಿ ಪಿಎ ಸೀಮಾ ಮಾತನಾಡಿ, ಕಾಡಿನೊಳಗಿನ ಕುಗ್ರಾಮಗಳಲ್ಲಿ ವಾಸಿಸುವ ಅರಣ್ಯ ಬುಡಕಟ್ಟು ಜನಾಂಗದ ಮಕ್ಕಳು ಈ ಪಂದ್ಯವನ್ನು ಆಯೋಜಿಸಿದ್ದಾರೆ ಎಂದು ಹೇಳಿದರು.
ಸ್ಥಳವು ಸಫಾರಿ ಪಾಯಿಂಟ್ ಬಳಿ ಇತ್ತು ಮತ್ತು ಅವರು ಕಳೆದ 10 ವರ್ಷಗಳಿಂದ ಅಲ್ಲಿ ಕ್ರಿಕೆಟ್ ಆಡುತ್ತಿದ್ದರು. 2015 ರಿಂದ ಈ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯಲಾಗಿಲ್ಲ ಮತ್ತು ಮರ ಕಡಿಯಲು ಯಾವುದೇ ಅನುಮತಿ ನೀಡಲಾಗಿಲ್ಲ" ಎಂದು ಅವರು ಹೇಳಿದರು.
Advertisement