
ಬೆಂಗಳೂರು: ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನೀಡಿದ್ದ ಗಡುವು ಅಕ್ಟೋಬರ್ 7ಕ್ಕೆ ಮುಗಿಯುತ್ತಿದೆ. ಗಡುವು ಸಮೀಪಿಸುತ್ತಿದ್ದರೂ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಸಮೀಕ್ಷೆ ಕುರಿತು ಕಳವಳಗಳು ಹೆಚ್ಚಾಗತೊಡಗಿದೆ.
ರಾಜ್ಯ ಸರ್ಕಾರ ಪ್ರತಿಯೊಬ್ಬ ಗಣತಿದಾರರಿಗೆ 15 ದಿನಗಳಲ್ಲಿ 283 ರಿಂದ 300 ಮನೆಗಳ ಸಮೀಕ್ಷೆ ನಡೆಸುವ ಟಾಸ್ಕ್ ನೀಡಿದೆ. ಗಣತಿದಾರರು ಒಟ್ಟಾರೆ 32 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಸಮೀಕ್ಷ ನಡೆಸಬೇಕಿದೆ. ಗಣತಿದಾರರು ಪ್ರತಿ ಮನೆಗೆ ಸುಮಾರು 45 ನಿಮಿಷ ವ್ಯಯಿಸಬೇಕಿದ್ದು, ಈ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾದರೆ ಮತ್ತಷ್ಟು ಸಮಯ ತೆಗೆದುಕೊಳ್ಳುತ್ತಿದೆ.
ಇನ್ನು ನಗರದಲ್ಲಿ ಶನಿವಾರದಿಂದ ಸಮೀಕ್ಷೆ ಪ್ರಾರಂಭವಾಗಿದ್ದು, ಆರಂಭಿಕ ದಿನದಲ್ಲೇ ತಾಂತ್ರಿಕ ದೋಷ, ಗಣತಿದಾರರ ಪ್ರತಿಭಟನೆ, ಅಪ್ಲಿಕೇಶನ್ ಬಳಕೆ ಕುರಿತ ಸಮಸ್ಯೆಗಳು ಎದುರಾಗಿತ್ತು. ಇದರಿಂದಾಗಿ ನಗರದ 5 ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 22,141 ಮನೆಗಳಲ್ಲಷ್ಟೇ ಸಮೀಕ್ಷೆ ನಡೆದಿದೆ.
ಅಪ್ಲಿಕೇಶನ್ ಬಳಕೆ ಹೊಸದಾಗಿದ್ದರಿಂದ ಗಣತಿಗೆ ಮೊದಲ ದಿನ 35-45 ನಿಮಿಷ ಸಮಯ ತೆಗೆದುಕೊಳ್ಳುತ್ತಿದ್ದೆವು. ಆದರೆ, 2 ದಿನ ವೇಗ ಹೆಚ್ಚಾಗಿದೆ. ಏನೇ ಆದರೂ ಪ್ರತಿ ಮನೆಗೆ ಕನಿಷ್ಠ 30 ನಿಮಿಷಗಳಾದರೂ ಸಮಯ ಬೇಕಾಗುತ್ತಿದೆ. ಸಮೀಕ್ಷೆಯ ಸಮಯದಲ್ಲಿ ಯಾವುದೇ ತಾಂತ್ರಿಕ ಅಥವಾ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಗುರಿಯನ್ನು ತಲುಪಬಹುದು ಎಂದು ಗಣತಿದಾರರಾದ ಗಿರಿಜಾ ಎಂಬುವವರು ಹೇಳಿದ್ದಾರೆ.
ವಾರ್ಡ್ ಅನ್ನು ಮೇಲ್ವಿಚಾರಣೆ ಮಾಡುವ ಕೆಲ ಕ್ಷೇತ್ರ ಅಧಿಕಾರಿಗಳು ಗಣತಿದಾರಿಗೆ ಲಾಗಿನ್ ನೀಡಿಲ್ಲ. ಇದು ಕೆಲಸ ನಿಧಾನ ಮಾಡುತ್ತಿದೆ. ಜನರು ಮನೆಯಲ್ಲಿ ಲಭ್ಯವಿದ್ದರೆ ಮತ್ತು ಉತ್ತರಿಸಲು ಸಿದ್ಧರಿದ್ದರೆ ನಮ್ಮ ಗುರಿಯನ್ನು ಸಾಧಿಸಬಹುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ISEC)ಯ ಮಾಜಿ ನಿರ್ದೇಶಕ ಡಿ ರಾಜಶೇಖರ್ ಅವರು ಮಾತನಾಡಿ, ಸಮೀಕ್ಷೆ ಮುಂದುವರೆದಂತೆ ಗಣತಿದಾರರು "ಕ್ರಮೇಣ ಪರಿಣತಿಯನ್ನು ಬೆಳೆಸಿಕೊಳ್ಳುತ್ತಾರೆ. ಆರಂಭದಲ್ಲಿ ಸಮೀಕ್ಷೆಗೆ ಪ್ರತಿ ಮನೆಗೆ 45 ನಿಮಿಷಗಳನ್ನು ತೆಗೆದುಕೊಳ್ಳಬಹುದು, ಆದರೆ ಅನುಭವ ಹೆಚ್ಚಾದಂತೆ ಆ ಸಮಯ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಸಮೀಕ್ಷೆ ವೇಳೆ ಗಣತಿದಾರರಿಗೆ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಸವಾಲುಗಳು ಮುಂದುವರೆದಿದ್ದೇ ಆಧರೆ, ದತ್ತಾಂಶದ ಗುಣಮಟ್ಟದಲ್ಲಿ ವ್ಯತ್ಯಾಸಗಳಾಗಬಹುದು ಎಂದೂ ಎಚ್ಚರಿಸಿದ್ದಾರೆ.
ಪ್ರಶ್ನಾವಳಿ ಕುರಿತು ಮಾತನಾಡಿ, ಪ್ರಶ್ನಾವಳಿಯನ್ನು ವಿನ್ಯಾಸಗೊಳಿಸುವುದು ಒಂದು ಕಲಾತ್ಮಕ ಪ್ರಕ್ರಿಯೆ. ಇದು ನಾಲ್ಕು ಅಗತ್ಯ ಅಂಶಗಳನ್ನು ಹೊಂದಿರಬೇಕು: ತರ್ಕ, ಅನುಕ್ರಮ, ಸುಲಭವಾಗಿ ಅರ್ಥವಾಗುವ ಪ್ರಶ್ನೆಗಳು ಮತ್ತು ಪ್ರತಿಕ್ರಿಯಿಸುವವರು ಗ್ರಹಿಸುವ ರೀತಿಯಲ್ಲಿ ಪ್ರಶ್ನೆಗಳನ್ನು ವಿನ್ಯಾಸಗೊಳಿಸಬೇಕು. ಈ ಪ್ರಶ್ನೆಗಳನ್ನು ಭಾಷಾಂತರಿಸುವ ತರಬೇತಿಯನ್ನೂ ಗಣತಿದಾರರಿಗೆ ನೀಡಿರಬೇಕು ಎಂದು ತಿಳಿಸಿದ್ದಾರೆ.
ಈ ಪ್ರಶ್ನಾವಳಿಗಳಲ್ಲಿ ಮುಖ್ಯ ಹಾಗೂ ನಿರ್ಣಾಯಕ ಎಂದು ವರ್ಗೀಕರಿಸಲಾಗಿರುತ್ತದೆ. ಸಮಯಕ್ಕೆ ಅನುಗುಣವಾಗಿ ಕೆಲ ಪ್ರಶ್ನೆಗಳನ್ನು ಕೈಬಿಡಲಾಗುತ್ತದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಮೀಕ್ಷೆ ನಡೆಸಲು ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಯಾವುದೇ ದೃಢೀಕರಣದ ಮಾಹಿತಿಗಳು ತಿಳಿದುಬಂದಿಲ್ಲ.
Advertisement