ಶಿವಮೊಗ್ಗ: ನೆಟ್‌ವರ್ಕ್ ಟವರ್ ಅಳವಡಿಸುವವರೆಗೆ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಗ್ರಾಮಸ್ಥರ ನಿರ್ಧಾರ

ಜಾತಿ ಸಮೀಕ್ಷೆ ಎಂದೇ ಕರೆಯಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯದಲ್ಲಿ ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7 (ಮಂಗಳವಾರ) ರಂದು ಮುಕ್ತಾಯಗೊಳ್ಳಬೇಕಿದೆ.
Network Tower (Representative Image)
ನೆಟ್‌ವರ್ಕ್ ಟವರ್ (ಪ್ರಾತಿನಿಧಿಕ ಚಿತ್ರ)
Updated on

ಶಿವಮೊಗ್ಗ: ಜಿಲ್ಲೆಯ ಗ್ರಾಮಸ್ಥರು ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಮೊದಲು ಈ ಪ್ರದೇಶದಲ್ಲಿ ನೆಟ್‌ವರ್ಕ್ ಟವರ್ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.

ಜಾತಿ ಸಮೀಕ್ಷೆ ಎಂದೇ ಕರೆಯಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯದಲ್ಲಿ ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7 (ಮಂಗಳವಾರ) ರಂದು ಮುಕ್ತಾಯಗೊಳ್ಳಬೇಕಿದೆ.

ಬರೂರು ಗ್ರಾಮ ಪಂಚಾಯಿತಿ ಪ್ರದೇಶದ ನಿವಾಸಿ ಶಶಿಕುಮಾರ್, ಸಮೀಕ್ಷೆಯನ್ನು ವಿರೋಧಿಸದಿದ್ದರೂ, ನೆಟ್‌ವರ್ಕ್ ಟವರ್ ಪಡೆಯುವುದು ಇಂದಿನ ಅಗತ್ಯವಾಗಿದೆ. ಹಿಂದಿನ ಮೂರು ವರ್ಷಗಳಿಗೂ ಹೆಚ್ಚು ಕಾಲ ಟವರ್‌ಗಾಗಿ ಮಾಡಿದ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.

ವರದಿಯ ಪ್ರಕಾರ, ಸಾಗರ ತಾಲ್ಲೂಕಿನ ತಹಶೀಲ್ದಾರ್ ಗ್ರಾಮಸ್ಥರ ಬೇಡಿಕೆಗಳನ್ನು ಮೂರು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

'ನಮ್ಮ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಅಥವಾ ನಾಲ್ಕು ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ನಾವು ನೆಟ್‌ವರ್ಕ್‌ಗಾಗಿ ಹೋರಾಡುತ್ತಿದ್ದೇವೆ. ಇದಕ್ಕೂ ಮೊದಲು ಚುನಾವಣೆಗಳನ್ನು ಬಹಿಷ್ಕರಿಸಲಾಗಿತ್ತು. ಆ ಸಮಯದಲ್ಲಿ, ತಾಲ್ಲೂಕು ಪಂಚಾಯಿತಿಯ ಇಒ ಬಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಮೂರು ವರ್ಷಗಳಿಂದ ನಮ್ಮ ನೆಟ್‌ವರ್ಕ್ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ನಮ್ಮ ಆಕ್ಷೇಪವಿಲ್ಲ' ಎಂದು ಅವರು ಎಎನ್‌ಐಗೆ ತಿಳಿಸಿದರು.

Network Tower (Representative Image)
ಜಾತಿ ಗಣತಿ ಕುರಿತು ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿ, ಜೆಡಿಎಸ್

ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಿಷ್ಠ ನಾಲ್ಕು ಗ್ರಾಮಗಳಾದ ಬರೂರು, ಕಲ್ಲುಕೊಪ್ಪ, ತೆಪ್ಪಗೋಡು ಮತ್ತು ಮುಳುಕೇರಿ ಜನರು ಬ್ಯಾನರ್‌ಗಳನ್ನು ಹಿಡಿದು ಗ್ರಾಮ ಪಂಚಾಯಿತಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು.

ಸಮೀಕ್ಷೆಗಾಗಿ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮನೆ ಮನೆಗೆ ಹೋಗಬೇಕಾಗಿದ್ದರೂ, ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಬಂದು ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ಕೇಳಲಾಗಿದೆ ಎಂದು ಶಶಿಕುಮಾರ್ ಹೇಳಿದರು.

'ಸರ್ಕಾರ ಅಧಿಕಾರಿಗಳಿಗೆ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದೆ. ಆದರೆ, ಅವರು ಗ್ರಾಮ ಪಂಚಾಯಿತಿಗೆ ಬಂದು ಮಾಹಿತಿ ನೀಡಬೇಕು ಎಂದು ಹೇಳುತ್ತಿದ್ದಾರೆ. ನಾವು ಅದನ್ನು ವಿರೋಧಿಸುತ್ತೇವೆ. ನಾವು ಈಗಾಗಲೇ ನೆಟ್ ಸಮಿತಿಯನ್ನು ರಚಿಸಿದ್ದೇವೆ ಮತ್ತು ಅದಕ್ಕಾಗಿ ಹೋರಾಡುತ್ತಿದ್ದೇವೆ. ನಾವು ಗ್ರಾಮ ಪಂಚಾಯಿತಿ ಆವರಣದಲ್ಲಿ ಧರಣಿಯನ್ನೂ ನಡೆಸುತ್ತಿದ್ದೇವೆ' ಎಂದು ಅವರು ಹೇಳಿದರು.

ತಹಸಿಲ್ ಅಧಿಕಾರಿಯೊಬ್ಬರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಭೇಟಿಯಾಗಿ, ತಮ್ಮ ಬೇಡಿಕೆಗಳನ್ನು ಮೂರು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಸ್ಥಳೀಯರು ತಾತ್ಕಾಲಿಕವಾಗಿ ಧರಣಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಶಶಿಕುಮಾರ್ ಹೇಳಿದರು.

'ಸಾಗರ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ, ನಿಮ್ಮ ಸಮಸ್ಯೆಯ ಕುರಿತು ಮೂರು ದಿನಗಳಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವುದಾಗಿ ತಿಳಿಸಿದ್ದಾರೆ. ನಾವು ತಾತ್ಕಾಲಿಕವಾಗಿ ಧರಣಿಯನ್ನು ಹಿಂತೆಗೆದುಕೊಂಡಿದ್ದೇವೆ. ಸಮಸ್ಯೆ ಬಗೆಹರಿಯದಿದ್ದರೆ, ಉಗ್ರ ಹೋರಾಟ ಆರಂಭಿಸಲಾಗುವುದು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com