
ಹುಬ್ಭಳ್ಳಿ: ನಾನೇಕೆ ಆಗಬಾರದು? ನಾನೂ ಕೂಡ ರಾಜ್ಯ ಮುಖ್ಯಮಂತ್ರಿಯಾಗಲು ಬಯಸುತ್ತೇನೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಸಿಎಂಗೆ ಬಿಟ್ಟ ವಿಷಯಗಳು. ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಎಲ್ಲಾ ಶಾಸಕರು ಸಚಿವರಾಗುವ ಬಯಕೆಯನ್ನು ಹೊಂದಿದ್ದಾರೆಂದು ಹೇಳಿದರು.
ಸಂಪುಟ ಪುನಾರಚನೆ ಮತ್ತು ಮೂರು ಉಪ ಮುಖ್ಯಮಂತ್ರಿ ಹುದ್ದೆಗಳ ರಚನೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಔತಣಕೂಟಗಳಿಗೆ ಕರೆಯುವುದು ಸಾಮಾನ್ಯ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸಿಎಂ ಭೋಜನಕೂಟಕ್ಕೆ ಆಹ್ವಾನಿಸಿರುವುದು ಇದೇ ಮೊದಲೇನಲ್ಲ. ಅಧಿವೇಶನದ ಸಂದರ್ಭದಲ್ಲೂ ಡಿನ್ನರ್ ಮೀಟಿಂಗ್ ಕರೆಯುತ್ತಾರೆಂದು ತಿಳಿಸಿದರು.
ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಕುರಿತು ಮಾತನಾಡಿದ ಅವರು, "ಪೊಲೀಸ್ ಇಲಾಖೆಯಲ್ಲಿ 15,000 ಹುದ್ದೆಗಳು ಖಾಲಿ ಇದ್ದು, 4,600 ಕಾನ್ಸ್ಟೆಬಲ್ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, 545 ಪಿಎಸ್ಐಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗುತ್ತಿದೆ. 402 ಹೊಸ ಪಿಎಸ್ಐಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಇದಲ್ಲದೆ, ಇನ್ನೂ 600 ಪಿಎಸ್ಐಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಒಳ ಮೀಸಲಾತಿ ಜಾರಿಯಿಂದಾಗಿ ನೇಮಕಾತಿ ನಡೆದಿಲ್ಲ. ಈಗ, ಎಲ್ಲಾ ಇಲಾಖೆಗಳಲ್ಲಿ ಮತ್ತೆ ನೇಮಕಾತಿ ಆರಂಭವಾಗಲಿದೆ. ವಯಸ್ಸಿನ ಮಿತಿಯನ್ನು ಸಡಿಲಿಸಲಾಗಿದೆ. ಎರಡು ವರ್ಷಗಳಿಗೊಮ್ಮೆ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
Advertisement