
ಬೆಂಗಳೂರು: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳಗಳನ್ನು ಇತ್ತೀಚೆಗೆ ಪರಿಶೀಲಿಸಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತಜ್ಞರ ತಂಡವು ಎರಡ್ಮೂರು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಗುರುವಾರ ಹೇಳಿದ್ದಾರೆ.
ವರದಿ ಬಂದ ನಂತರ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. AAI ತಂಡ ಪರಿಶೀಲಿಸಿದ ಎರಡೂ ಸ್ಥಳಗಳನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ವಿಮಾನ ನಿಲ್ದಾಣದ ನಿರ್ಮಾಣ ಕಂಪನಿಗಳು ಉದ್ದೇಶಿತ ಸ್ಥಳಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಮೌಲ್ಯ ಮಾಪನ ಮಾಡಲಿವೆ. ಸರ್ಕಾರ ಎಲ್ಲೆಲ್ಲಿ ಭೂಮಿ ಮಂಜೂರು ಮಾಡುತ್ತದೋ ಅಲ್ಲೆಲ್ಲ ವಿಮಾನ ನಿಲ್ದಾಣ ನಿರ್ಮಿಸುತ್ತೇವೆ ಎಂದರ್ಥವಲ್ಲಾ ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
2033 ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) 150 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದನ್ನು ನಿಷೇಧಿಸುವ ಷರತ್ತನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ನಾವು ಈಗ ತಳಹದಿಯನ್ನು ಪ್ರಾರಂಭಿಸಿದರೆ ತದನಂತರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಿದ್ಧವಾಗಲಿದೆ. ಈ ಯೋಜನೆಯು ಸಾಮಾನ್ಯವಾಗಿ ಪೂರ್ಣಗೊಳ್ಳಲು ಕನಿಷ್ಠ ಐದರಿಂದ ಆರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ, ಭಾರತದಲ್ಲಿ ಕೇವಲ ಎರಡು ನಗರಗಳು, ನವದೆಹಲಿ (ನೋಯ್ಡಾ) ಮತ್ತು ಮುಂಬೈ (ನವಿ ಮುಂಬೈ) ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿವೆ. ಆ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಕಂಪನಿಗಳೊಂದಿಗೆ ಸಹ ಸಮಾಲೋಚನೆ ನಡೆಸುತ್ತೇವೆ. ಕರ್ನಾಟಕದ ಗಡಿಯ ಸಮೀಪವಿರುವ ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವ ತಮಿಳುನಾಡು ಯೋಜನೆಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ಪ್ರಸ್ತಾವಿತ ಸ್ಥಳದ ಕುರಿತು ಉತ್ತರ ಕರ್ನಾಟಕದ ಶಾಸಕರು ತುಮಕೂರಿಗೆ ನೀಡುವಂತೆ ಸೂಚಿಸಿದ್ದರೆ, ಇನ್ನು ಕೆಲವರು ದಕ್ಷಿಣ ಬೆಂಗಳೂರಿಗೆ ಶಿಫಾರಸು ಮಾಡಿದ್ದಾರೆ ಎಂದರು.
"ಆದಾಗ್ಯೂ, ಪ್ರಯಾಣಿಕರ ಸಾಂದ್ರತೆ, ಕೈಗಾರಿಕಾ ಅಗತ್ಯತೆಗಳು ಮತ್ತು ಇತರ ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಅಂತಿಮವಾಗಿ, ಅನುಕೂಲ ಮತ್ತು ಭವಿಷ್ಯದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಪಾಟೀಲ್ ಹೇಳಿದ್ದಾರೆ.
Advertisement