Vote Chori: SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ; ಹಗರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಶಂಕಿತರ ಪತ್ತೆ!

ಮತಗಳ್ಳತನವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರ, 'ವೋಟ್ ಚೋರಿ' ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತು. ಸಿಐಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಕೆ ಸಿಂಗ್ ಇದರ ನೇತೃತ್ವ ವಹಿಸಿದ್ದಾರೆ.
Representative Image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT), ಮತಗಳನ್ನು ಅಳಿಸಲು 'ಪ್ರಯತ್ನಗಳು' ನಡೆದಿರುವುದನ್ನು ಪತ್ತೆಹಚ್ಚಿದೆ ಮತ್ತು ಹಗರಣದಲ್ಲಿ ಭಾಗಿಯಾಗಿರುವ ಕನಿಷ್ಠ ಆರು ಶಂಕಿತರನ್ನು ಪತ್ತೆಹಚ್ಚಿದೆ.

ಯಶಸ್ವಿಯಾಗಿ ಅಳಿಸಲಾದ ಪ್ರತಿ ಮತಕ್ಕೂ ಶಂಕಿತರಿಗೆ 80 ರೂ.ಗಳನ್ನು ನೀಡಲಾಗಿದೆ ಎಂದು ಅಪರಾಧ ತನಿಖಾ ಇಲಾಖೆಯ ಉನ್ನತ ಮೂಲಗಳು ಪಿಟಿಐಗೆ ತಿಳಿಸಿವೆ.

6,994 ಮತಗಳನ್ನು ಅಳಿಸಲು ವಿನಂತಿಗಳು ಬಂದಿದ್ದವು. ಅವುಗಳಲ್ಲಿ ಕೆಲವನ್ನು ಹೊರತುಪಡಿಸಿ, ಬಹುತೇಕ ವಿನಂತಿಗಳು ನಕಲಿಯಾಗಿದ್ದವು.

ಆಳಂದ ಕ್ಷೇತ್ರವು ಕಲಬುರಗಿ ಜಿಲ್ಲೆಯಲ್ಲಿದ್ದು, ಹಿರಿಯ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ವಿಧಾನಸಭಾ ಕ್ಷೇತ್ರವಾಗಿದೆ. ಬಿಆರ್ ಪಾಟೀಲ್ ಮತ್ತು ಸಚಿವ ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮತ ಅಳಿಸುವಿಕೆ ಪ್ರಯತ್ನಗಳ ಬಗ್ಗೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ (CEO) ಗಮನಕ್ಕೆ ತಂದಿದ್ದರು.

ಪಾಟೀಲ್ ಅವರ ಪ್ರಕಾರ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ 6,994 'ಕಾಂಗ್ರೆಸ್ ಮತಗಳನ್ನು' ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸಿಇಒ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ ಮತ ಅಳಿಸುವಿಕೆಯನ್ನು ನಿಲ್ಲಿಸಲಾಯಿತು. ಈ ಮತಗಳನ್ನು ಅಳಿಸಿದ್ದರೆ ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಸೋಲುತ್ತಿದ್ದೆ ಎಂದಿದ್ದಾರೆ.

Representative Image
ಆಳಂದ ಮತಗಳ್ಳತನ ಪ್ರಕರಣ: ಮತದಾರರ ಹೆಸರು ಅಳಿಸಲು ಡೇಟಾ ಸೆಂಟರ್ ಅಪರೇಟರ್‌ಗೆ ಪ್ರತಿ ಅರ್ಜಿಗೆ 80 ರೂ ಪಾವತಿ; SIT ತನಿಖೆಯಿಂದ ಬಹಿರಂಗ!

ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಸುಭಾಷ್ ಗುತ್ತೇದಾರ್ (ಬಿಜೆಪಿ) ವಿರುದ್ಧ ಸುಮಾರು 10,000 ಮತಗಳ ಅಂತರದಿಂದ ಗೆದ್ದಿದ್ದರು.

ಇತ್ತೀಚೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ವೋಟ್ ಚೋರಿ' ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸಿದರು ಮತ್ತು ಆಳಂದ ಕ್ಷೇತ್ರದ ಉದಾಹರಣೆ ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರ, 'ಮತ ಕಳ್ಳತನ'ದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತು. ಸಿಐಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಕೆ ಸಿಂಗ್ ಇದರ ನೇತೃತ್ವ ವಹಿಸಿದ್ದಾರೆ.

'ಆಳಂದದಲ್ಲಿ ಮತಗಳನ್ನು ಅಳಿಸಲು ಪ್ರಯತ್ನಗಳು ನಡೆದಿವೆ. ನಾವು ಸುಮಾರು 30 ಜನರನ್ನು ಪ್ರಶ್ನಿಸಿದ್ದೇವೆ ಮತ್ತು ಅವರಲ್ಲಿ ಐದರಿಂದ ಆರು ಮಂದಿ ಶಂಕಿತರಾಗಿದ್ದಾರೆ. ಅವರನ್ನು ಬಂಧಿಸಬಹುದು. ಬೇರೆಡೆ ಇದೇ ರೀತಿಯ ಪ್ರಯತ್ನಗಳು ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕದಿದ್ದರೂ, 'ದೂರು ಆ ಕ್ಷೇತ್ರಕ್ಕೆ ಸಂಬಂಧಿಸಿರುವುದರಿಂದ ನಾವು ಆಳಂದದ ಮೇಲೆ ಮಾತ್ರ ಗಮನಹರಿಸುತ್ತಿದ್ದೇವೆ' ಎಂದು ಸಿಐಡಿಯ ಉನ್ನತ ಅಧಿಕಾರಿಯೊಬ್ಬರು ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

ಸಿಐಡಿ ಮೂಲಗಳ ಪ್ರಕಾರ, ಆರು ಶಂಕಿತರು ಡೇಟಾ ಸೆಂಟರ್‌ನೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಮತಗಳನ್ನು ಅಳಿಸಲು VoIP (voice over internet protocol) ತಂತ್ರಜ್ಞಾನವನ್ನು ಬಳಸಿದ್ದಾರೆ.

Representative Image
'ಮತಗಳ್ಳತನ' ಪ್ರಕರಣ: ಆಳಂದ ಮಾಜಿ ಬಿಜೆಪಿ ಶಾಸಕ ಗುತ್ತೇದಾರ್ ಮನೆ ಬಳಿ ಸುಟ್ಟ ದಾಖಲೆಗಳು ಪತ್ತೆ!

ಈ ವಿವರಗಳ ಆಧಾರದ ಮೇಲೆ, ಶಂಕಿತರಿಗೆ ಸಂಬಂಧಿಸಿದ ಆವರಣದ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಸುಭಾಷ್ ಗುತ್ತೇದಾರ್, ಅವರ ಪುತ್ರರಾದ ಹರ್ಷಾನಂದ ಮತ್ತು ಸಂತೋಷ್ ಗುತ್ತೇದಾರ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್‌ಗೆ ಸಂಬಂಧಿಸಿದ ಸ್ಥಳದ ಮೇಲೂ ದಾಳಿ ನಡೆಸಿದ್ದಾರೆ.

ಈ ಮಧ್ಯೆ, ಸುಭಾಷ್ ಗುತ್ತೇದಾರ್ ಅವರ ಮನೆಯ ಬಳಿ ಸುಟ್ಟುಹೋದ ಮತದಾರರ ದಾಖಲೆಗಳನ್ನು ಎಸ್‌ಐಟಿ ಪತ್ತೆ ಮಾಡಿದೆ.

ದೀಪಾವಳಿ ಹಬ್ಬದ ದೃಷ್ಟಿಯಿಂದಾಗಿ, ಮನೆಗೆಲಸದ ಸಿಬ್ಬಂದಿ ಮನೆಯಲ್ಲಿದ್ದ ಎಲ್ಲ ತ್ಯಾಜ್ಯ ವಸ್ತುಗಳನ್ನು ಸುಟ್ಟುಹಾಕಿದ್ದಾರೆ ಎಂದು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಆಳಂದ ಶಾಸಕ ಪಾಟೀಲ್, ಎಸ್‌ಐಟಿ ತನಿಖೆಯಲ್ಲಿನ ಪ್ರಗತಿ ಬಗ್ಗೆ ತನಗೆ ತಿಳಿದಿಲ್ಲ. ತನಿಖೆಯ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com