ಆಳಂದ ಮತಗಳ್ಳತನ ಪ್ರಕರಣ: ನಾಲ್ವರು ಡೇಟಾ ಸೆಂಟರ್ ನಿರ್ವಾಹಕರ ಬಂಧಿಸಿದ SIT, ವಿಚಾರಣೆ

ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು, 2023ರ ಫೆಬ್ರವರಿ ತಿಂಗಳಿನಲ್ಲಿ ಮೊಹಮ್ಮದ್ ಅಶ್ಫಾಕ್ ಎಂಬುವವರನ್ನು ವಿಚಾರಣೆ ನಡೆಸಿದ್ದರು.
file photo
ಸಂಗ್ರಹ ಚಿತ್ರ
Updated on

ಕಲಬುರಗಿ: 2023 ರ ಚುನಾವಣೆಗೂ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಅಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ). ನಾಲ್ವರು ಡೇಟಾ ಸೆಂಟರ್ ನಿರ್ವಾಹಕರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆಗೊಳಪಡಿಸಿದೆ ಎಂದು ತಿಳಿದುಬಂದಿದೆ.

ಒಂದು ವಾರದ ಹಿಂದೆ ಎಸ್‌ಐಟಿ ಅಧಿಕಾರಿಗಳು ಈ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿ, ಏಳು ಲ್ಯಾಪ್‌ಟಾಪ್‌ಗಳು ಮತ್ತು 15 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿತ್ತು.

ಡೇಟಾ ಸೆಂಟರ್ ನಿರ್ವಾಹಕರಿಗೆ ಪ್ರತಿ ಫಾರ್ಮ್ 7 ಅರ್ಜಿಗೆ (ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಲು) 80 ರೂ. ಪಾವತಿಸಲಾಗಿದೆ ಎಂಬ ಆರೋಪಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ.

ಡಿಸೆಂಬರ್ 2022 ಮತ್ತು ಫೆಬ್ರವರಿ 2023 ರ ನಡುವೆ ಒಟ್ಟು 6,018 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಒಟ್ಟು 4.8 ಲಕ್ಷ ರೂ. ಪಾವತಿಯಾಗಿದೆ ಎಂದು ತಿಳಿದುಬಂದಿದೆ.

ಆಳಂದ ಶಾಸಕ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ 2023 ರಲ್ಲಿ ದೂರು ನೀಡಿದ ನಂತರ ರಾಜ್ಯ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ವಹಿಸಿಕೊಂಡಿತು.

file photo
ಆಳಂದ ಮತಗಳ್ಳತನ ಪ್ರಕರಣ: ಮತದಾರರ ಹೆಸರು ಅಳಿಸಲು ಡೇಟಾ ಸೆಂಟರ್ ಅಪರೇಟರ್‌ಗೆ ಪ್ರತಿ ಅರ್ಜಿಗೆ 80 ರೂ ಪಾವತಿ; SIT ತನಿಖೆಯಿಂದ ಬಹಿರಂಗ!

ಈ ನಡುವೆ ಎಸ್‌ಐಟಿ ತನಿಖೆಯನ್ನು ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಿವಾಸದ ಬಳಿ ಮತದಾರರ ಸುಟ್ಟ ದಾಖಲೆಗಳ ರಾಶಿ ಪತ್ತೆಯಾಗಿತ್ತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐಟಿ ಅಧಿಕಾರಿಗಳು, ಅರ್ಧ ಸುಟ್ಟ ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಕಲಬುರಗಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಇದರ ಬೆನ್ನಲ್ಲೇ ಕಳೆದ ವಾರ, ಆಳಂದದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಪುತ್ರರಾದ ಹರ್ಷಾನಂದ್ ಮತ್ತು ಸಂತೋಷ್ ಗುತ್ತೇದಾರ್ ಅವರ ಮನೆಗಳ ಮೇಲೆ ಎಸ್‌ಐಟಿ ದಾಳಿ ನಡೆಸಿತ್ತು.

ಏತನ್ಮಧ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ಸಿಐಡಿ ಸಹಾಯವನ್ನು ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು, 2023ರ ಫೆಬ್ರವರಿ ತಿಂಗಳಿನಲ್ಲಿ ಮೊಹಮ್ಮದ್ ಅಶ್ಫಾಕ್ ಎಂಬುವವರನ್ನು ವಿಚಾರಣೆ ನಡೆಸಿದ್ದರು. ಅಶ್ಫಾಕ್ ತನ್ನ ಬಳಿ ಇರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಒಪ್ಪಿಸುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದರೆ, ನಂತರ ದುಬೈಗೆ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಅಶ್ಫಾಕ್ ತನ್ನ ಸಹಚರರಾದ ಮೊಹಮ್ಮದ್ ಅಕ್ರಂ ಮತ್ತು ಇತರ ಮೂವರೊಂದಿಗೆ ಸಂಪರ್ಕದಲ್ಲಿದ್ದಾನೆಂಬುದನ್ನು ಎಸ್‌ಐಟಿ ಪತ್ತೆ ಮಾಡಿದ್ದು, ಈ ಕುರಿತು ತನಿಖೆ ನಡೆಸಲು ಎಸ್‌ಐಟಿ ಸಿಐಡಿಯ ಸಹಾಯವನ್ನು ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಎಸ್‌ಐಟಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com