

ಬೆಂಗಳೂರು: ಇತ್ತೀಚೆಗೆ ಕರ್ನೂಲ್ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 20 ಜನರು ಸಜೀವ ದಹನಗೊಂಡ ಹಿನ್ನೆಲೆಯಲ್ಲಿ, ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಎಲ್ಲ ಬಸ್ಗಳ ಸುರಕ್ಷತೆ ಕುರಿತು ಪರಿಶೀಲನೆ ನಡೆಸುವಂತೆ ಸಚಿವ ರಾಮಲಿಂಗಾ ರೆಡ್ಡಿ ಆಯಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಿದ್ದಾರೆ.
ಎಲ್ಲ ಬಸ್ಗಳ ನವೀಕರಣ ಮತ್ತು ನಿರ್ವಹಣೆಯ ಪರಿಶೀಲನೆಯನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ನಿರ್ವಹಿಸುವ ಬಸ್ಗಳ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 28 ರಂದು ಪತ್ರ ಬರೆದಿದ್ದು, ಕರ್ನೂಲ್ ಬಸ್ ದುರಂತವನ್ನು ದುರದೃಷ್ಟಕರ ಎಂದು ಸಚಿವರು ಬಣ್ಣಿಸಿದ್ದು, ರಾಜ್ಯದ್ಯಂತ ಎಲ್ಲ ಸಾರಿಗೆ ನಿಗಮದ ಬಸ್ಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದಿದ್ದಾರೆ.
ತಾವು ಸಾರಿಗೆ ಸಚಿವರಾಗಿದ್ದಾಗ ಹಾವೇರಿ ಜಿಲ್ಲೆಯ ಬಳಿ ನಡೆದ ಇದೇ ರೀತಿಯ ಅಪಘಾತದಲ್ಲಿ, ಖಾಸಗಿ ಬಸ್ಗೆ ಬೆಂಕಿ ತಗುಲಿ ಹಲವಾರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ನೆನಪಿಸಿಕೊಂಡ ರೆಡ್ಡಿ, ಈ ಘಟನೆಯು ರಾಜ್ಯಾದ್ಯಂತ ಸುರಕ್ಷತಾ ಅಭಿಯಾನಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಸಾರಿಗೆ ನಿಗಮದ ಬಸ್ಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳು, ಖಾಸಗಿ ಪ್ರವಾಸಿ ಬಸ್ಗಳು, ಟೆಂಪೋ ಟ್ರಾವೆಲರ್ಗಳು ಮತ್ತು ಶಾಲಾ ವಾಹನಗಳು ಸೇರಿದಂತೆ ಸುಮಾರು 50,000 ವಾಹನಗಳಲ್ಲಿ ಕ್ರಿಯಾತ್ಮಕ ತುರ್ತು ನಿರ್ಗಮನ ಬಾಗಿಲುಗಳನ್ನು ಅಳವಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಸಮಯದಲ್ಲಿ, ಹಲವಾರು ನ್ಯೂನತೆಗಳನ್ನು ಪತ್ತೆಯಾಗಿದ್ದು, ತುರ್ತು ನಿರ್ಗಮನ ಬಾಗಿಲುಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಯಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಸ್ಗಳಲ್ಲಿ ವಾಣಿಜ್ಯ ಸರಕುಗಳು ಅಥವಾ ಸಾಮಾನುಗಳ ಜೊತೆಗೆ ಸುಲಭವಾಗಿ ಉರಿಯುವ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಎಲ್ಲ ಹವಾನಿಯಂತ್ರಿತ ಬಸ್ಗಳಲ್ಲಿ ಸುತ್ತಿಗೆಗಳನ್ನು ಅಳವಡಿಸಬೇಕು ಮತ್ತು ಲಗೇಜ್ ವಿಭಾಗದ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಮಲಗಲು ಅಥವಾ ವಿಶ್ರಾಂತಿ ಪಡೆಯಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಬಸ್ಸುಗಳ ನವೀಕರಣ ಮತ್ತು ನಿರ್ವಹಣೆಯ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಈ ಅಂಶಗಳಲ್ಲಿ ಯಾವುದೇ ಲೋಪಗಳು ಕಂಡುಬಂದರೆ, ಜವಾಬ್ದಾರರ ವಿರುದ್ಧ ದಯೆ ತೋರದೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ಮಾನವ ಜೀವಹಾನಿಗೆ ಯಾವುದೇ ಪರಿಹಾರವನ್ನು ಸರಿದೂಗಿಸಲು ಸಾಧ್ಯವಿಲ್ಲ. ಆದ್ದರಿಂದ, ಬಸ್ಗಳ ಸುರಕ್ಷತೆ ಪರಿಶೀಲನೆ ನಡೆಸಲು ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲು ತಂಡಗಳನ್ನು ತಕ್ಷಣವೇ ರಚಿಸುವಂತೆ ನಾನು ನಿರ್ದೇಶಿಸಿದ್ದೇನೆ ಎಂದು ಹೇಳಿದರು.
Advertisement