

ಬೆಂಗಳೂರು: ನಗರಗಳ ಜನಸಂಖ್ಯೆಯು ತ್ವರಿತಯಾಗಿ ಹೆಚ್ಚುತ್ತಿರುವುದರಿಂದ ನಗರೀಕರಣವು ಪ್ರಮುಖ ಸಮಸ್ಯೆಯಾಗಿದೆ. ಹೀಗಾಗಿ ಕೇಂದ್ರವು ನಗರಾಭಿವೃದ್ಧಿ ಕಾಳಜಿಗಳನ್ನು ಪರಿಹರಿಸಲು ಪ್ರಾದೇಶಿಕ ಸಭೆಗಳನ್ನು ನಡೆಸಲು ಆರಂಭಿಸಿದೆ ಎಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಗುರುವಾರ ಹೇಳಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ನಗರೀಕರಣವು ಪ್ರಮುಖ ಸಮಸ್ಯೆಯಾಗಿದೆ ಏಕೆಂದರೆ, ನಮ್ಮ ನಗರಗಳ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ" ಎಂದು ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಲಕ್ಷದ್ವೀಪಗಳನ್ನು ಒಳಗೊಂಡ ಪ್ರಾದೇಶಿಕ ಸಭೆಯ ನಂತರ ಖಟ್ಟರ್ ತಿಳಿಸಿದ್ದಾರೆ.
"ರಸ್ತೆ, ಚರಂಡಿಗಳು, ಸಂಚಾರ, ಮೆಟ್ರೋ ರೈಲು" ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಮತ್ತು ಭಾಗವಹಿಸಿದ ರಾಜ್ಯಗಳಿಂದ "ಬೇಡಿಕೆ ಮತ್ತು ಸಲಹೆಗಳು" ಪಡೆಯಲಾಯಿತು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಹೇಳಿದರು.
"ಇದು ಉತ್ತಮ ಸಭೆಯಾಗಿತ್ತು" ಎಂದ ಕೇಂದ್ರ ಸಚಿವರು, ಕೇಂದ್ರವು ಶೀಘ್ರದಲ್ಲೇ ನವದೆಹಲಿಯಲ್ಲಿ ನಗರ ಸಮಾವೇಶವನ್ನು ನಡೆಸಲು ಯೋಜಿಸಿದೆ. ಅಲ್ಲಿ ಸಚಿವರು, ಕಾರ್ಯದರ್ಶಿಗಳು ಮತ್ತು ಕೆಲವು ಪ್ರಮುಖ ಮಹಾನಗರ ಪಾಲಿಕೆಗಳ ಮೇಯರ್ಗಳಿಗೆ ಆಹ್ವಾನಿಸಲಾಗುತ್ತದೆ ಎಂದರು.
ಸಹಕಾರಿ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಒತ್ತಿ ಹೇಳಿದ ಖಟ್ಟರ್, "ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿ ಇರಬಹುದು. ಆದರೆ ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿರಲು, ನಾವು ಪರಸ್ಪರ ಸಹಕರಿಸಬೇಕು. ಇದರಿಂದ ನಾವು ಒಟ್ಟಿಗೆ ಹೋಗಬಹುದು. ನಾವು ನಮ್ಮ ದೇಶವನ್ನು ಬಲಪಡಿಸಬೇಕು ಮತ್ತು ಯಾವುದೇ ರಾಜ್ಯ ಹಿಂದೂಳಿಯಲು ಬಿಡಬಾರದು" ಎಂದರು.
ಇದೇ ವೇಳೆ ಟನಲ್ ರಸ್ತೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಖಟ್ಟರ್, ನಗರದ ಸಮಸ್ಯೆಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಭಿನ್ನವಾಗಿರುತ್ತವೆ ಮತ್ತು ಎಲ್ಲದ್ದಕ್ಕೂ ಸಾಮಾನ್ಯ ಪರಿಹಾರವಿಲ್ಲ ಎಂದು ಹೇಳಿದರು.
"ಪ್ರತಿಯೊಂದು ನಗರವು ವಿಭಿನ್ನ ಸನ್ನಿವೇಶಗಳನ್ನು ಹೊಂದಿರುತ್ತವೆ. ಮೆಟ್ರೋ ಮಾರ್ಗವನ್ನು ಸುರಂಗದಲ್ಲಿ ಮತ್ತು ಭೂಮಿ ಮೇಲೆ ನಿರ್ಮಿಸಬಹುದು" ಎಂದು ಅವರು ಹೇಳಿದರು.
ಭಾರತದ ಮೆಟ್ರೋ ಜಾಲವು ಅತೀ ವೇಗವಾಗಿ ವಿಸ್ತರಿಸುತ್ತಿದೆ. ಈಗಾಗಲೇ 1,100 ಕಿ.ಮೀ ಕಾರ್ಯಾಚರಣೆಯಲ್ಲಿದೆ ಮತ್ತು ಇನ್ನೂ 900 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಖಟ್ಟರ್ ಎತ್ತಿ ತೋರಿಸಿದರು.
"ಇಂದು ನಾವು ಮೆಟ್ರೋ ರೈಲು ಜಾಲದ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ನಾವು 2,000 ಕಿ.ಮೀ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸಿದರೇ ಅಮೆರಿಕನ್ನೂ ಮೀರಿಸುತ್ತೇವೆ" ಎಂದು ಅವರು ಹೇಳಿದರು.
ಟನಲ್ ರಸ್ತೆಗೆ ಖಟ್ಟರ್ ಮೆಚ್ಚುಗೆ
"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನಾವು ರಾಜ್ಯದ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ. ಯಾವುದೇ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
Advertisement