ವಿಜಯಪುರ SBI ಬ್ಯಾಂಕ್ ದರೋಡೆ: ಮಹಾರಾಷ್ಟ್ರದ ಮನೆ ಛಾವಣಿ ಮೇಲಿಟ್ಟಿದ್ದ ಚಿನ್ನ, ನಗದು ವಶಪಡಿಸಿಕೊಂಡ ಪೊಲೀಸರು!
ವಿಜಯಪುರ: ಸೆಪ್ಟೆಂಬರ್ 16 ರಂದು ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದ್ದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಧ ತಾಲ್ಲೂಕಿನ ಹುಲಜಂತಿ ಗ್ರಾಮದ ಮನೆಯ ಛಾವಣಿ ಮೇಲೆ ಇಟ್ಟಿದ್ದ ಚಿನ್ನ ಮತ್ತು ನಗದು ತುಂಬಿದ ಚೀಲವನ್ನು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎಸ್ಪಿ ಲಕ್ಷ್ಮಣ್ ನಿಂಬರಗಿ, 136 ಪ್ಯಾಕೆಟ್ಗಳಲ್ಲಿದ್ದ 6.55 ಕೆಜಿ ತೂಕದ ಚಿನ್ನಾಭರಣಗಳು ಮತ್ತು 41.4 ಲಕ್ಷ ರೂ. ನಗದು ಇದ್ದ ಬ್ಯಾಗ್ ಮನೆಯ ಛಾವಣಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು, ದರೋಡೆ ನಡೆದ ದಿನ, ದರೋಡೆಕೋರರಲ್ಲಿ ಒಬ್ಬ ಲೂಟಿ ಮಾಡಿದ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನ ಹುಲಜಂತಿ ಗ್ರಾಮದಲ್ಲಿ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದೆ. ನಂತರ, ಸ್ಥಳೀಯರು ಮತ್ತು ಆರೋಪಿಗಳ ನಡುವೆ ವಾಗ್ವಾದ ಆರಂಭವಾದಾಗ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಕದ್ದ ವಸ್ತುಗಳ ಪೈಕಿ ಕೆಲವನ್ನು ವಾಹನದಲ್ಲಿಯೇ ಬಿಟ್ಟು ಹೋಗಿದ್ದ. ನಂತರ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು.
ಮೋಟಾರ್ ಸೈಕಲ್ ವಶಪಡಿಸಿಕೊಂಡ ಕೂಡಲೇ, ವಿಜಯಪುರ ಮತ್ತು ಮಹಾರಾಷ್ಟ್ರದ ಸೋಲಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಶೋಧ ನಡೆಸಲು ಇಡೀ ಗ್ರಾಮವನ್ನು ಸುತ್ತುವರಿಯಲಾಯಿತು ಎಂದು ಎಸ್ಪಿ ಹೇಳಿದರು.
'ಶೋಧದ ಸಮಯದಲ್ಲಿ, ಪೊಲೀಸರು ಗ್ರಾಮದ ಮನೆಯೊಂದರ ಛಾವಣಿಯಲ್ಲಿ ಚಿನ್ನ ಮತ್ತು ನಗದು ತುಂಬಿದ ಚೀಲವನ್ನು ಕಂಡುಕೊಂಡರು' ಎಂದು ಅವರು ಹೇಳಿದರು.
ಎಂಟು ವಿಶೇಷ ತಂಡಗಳು ಪ್ರಕರಣವನ್ನು ಬಹು ಆಯಾಮಗಳಿಂದ ತನಿಖೆ ನಡೆಸುತ್ತಿವೆ. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಇದು ಅಂತರರಾಜ್ಯ ವಿಷಯವಾಗಿರುವುದರಿಂದ ವಿಜಯಪುರ ಪೊಲೀಸರು ಮಹಾರಾಷ್ಟ್ರ ಪೊಲೀಸರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಿಂಬರಗಿ ಹೇಳಿದರು.
ದುಷ್ಕರ್ಮಿಗಳು ಬ್ಯಾಂಕಿನಿಂದ 1.04 ಕೋಟಿ ರೂ. ನಗದು ಮತ್ತು 20 ಕೆಜಿ ಚಿನ್ನಾಭರಣಗಳು ಸೇರಿ ಒಟ್ಟು 21 ಕೋಟಿ ರೂ. ದೋಚಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ