
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.
ಇಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ, ಸಮೀಕ್ಷೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ನ್ಯಾಯಾಲಯವು ಆರಂಭದಲ್ಲಿ ದಸರಾ ರಜೆಯ ನಂತರ ಈ ವಿಷಯವನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಿತು.
ಆದರೆ ಅರ್ಜಿದಾರರ ಪರ ವಕೀಲರು ಈ ವಿಷಯವು ತುರ್ತು ಇದೆ ಮತ್ತು ತಡೆ ನೀಡಬೇಕು ಎಂದು ಕೋರಿದರು. ಈ ಸಮೀಕ್ಷೆಯು ನಿವಾಸಿಗಳನ್ನು ಜಿಯೋ-ಟ್ಯಾಗಿಂಗ್ ಮಾಡುವುದು ಮತ್ತು ಅವರ ವಿವರಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಒಳಗೊಂಡಿರುತ್ತದೆ. ಇದು ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಆಧಾರ್ ಕಾಯ್ದೆ, 2016 ಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ರಜೆಯ ನಂತರ ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅಕ್ಟೋಬರ್ 6 ರೊಳಗೆ ದತ್ತಾಂಶ ಸಂಗ್ರಹ ಪೂರ್ಣಗೊಳ್ಳುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದ್ದರಿಂದ ನ್ಯಾಯಾಲಯವು ಈಗ ಮಧ್ಯಪ್ರವೇಶಿಸಬೇಕು ಎಂದರು.
ಈ ವೇಳೆ ನ್ಯಾಯಾಲಯವು ದಸರಾ ರಜೆಯ ನಂತರ ಅರ್ಜಿಗಳನ್ನು ತೀರ್ಮಾನಿಸುವವರೆಗೆ ದತ್ತಾಂಶ ಸಂಗ್ರಹವನ್ನು ಮುಂದೂಡಬಹುದೇ ಎಂದು ಸರ್ಕಾರವನ್ನು ಪ್ರತಿನಿಧಿಸುವ ವಕೀಲರನ್ನು ಪ್ರಶ್ನಿಸಿತು.
ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಸ್ತುತ ಸಮೀಕ್ಷೆಯು ಹಿಂದಿನ ಸಮೀಕ್ಷೆಯ ನವೀಕರಣವಾಗಿದೆ ಮತ್ತು ನ್ಯಾಯಾಲಯವು ಅದಕ್ಕೆ ತಡೆ ನೀಡಬಾರದು ಎಂದು ಹೇಳಿದರು.
2014 ರಲ್ಲಿಯೇ ಸಮೀಕ್ಷೆ ಆರಂಭಿಸಿ, 2016 ರಲ್ಲಿ ಸಮೀಕ್ಷೆ ಮುಗಿಸಿ, 2024 ರಲ್ಲಿ ವರದಿ ನೀಡಿತ್ತು. ಹಿಂದಿನ ದತ್ತಾಂಶವನ್ನು ಅಪ್ಡೇಟ್ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ. ದಸರಾ ರಜೆಯಾಗಿರುವುದರಿಂದ ಸರ್ಕಾರದವು ಆಶಾ ಕಾರ್ಯಕರ್ತೆಯರು, ಶಿಕ್ಷಕರನ್ನು ಬಳಕೆ ಮಾಡಿಕೊಂಡು ದತ್ತಾಂಶ ಸಂಗ್ರಹಿಸಲು ಮುಂದಾಗಿದೆ ಎಂದು ಸರ್ಕಾರದ ಪರ ವಕೀಲ ಅಭಿಷೇಕ್ ಮನುಸಂಘ್ವಿ ತಿಳಿಸಿದರು.
ವಾದ, ಪ್ರತಿವಾದ ಆಲಿಸಿದ ಕೋರ್ಟ್, ಅರ್ಜಿದಾರರು ಹಾಗೂ ಸರ್ಕಾರಿ ವಕೀಲರಿಗೆ ನಾಳೆ ವಾದಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಸೂಚಿಸಿ, ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕೆ ಮುಂದೂಡಿದೆ.
ರಾಜ್ಯ ಒಕ್ಕಲಿಗ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಉದಯ್ ಶಂಕರ್ ಬಿ.ಆರ್., ಅಖಿಲ ಕರ್ನಾಟಕ ವೀರಶೈವ-ಲಿಂಗಾಯತ ಮಹಾಸಭಾದ ಎಂಟು ಸದಸ್ಯರು, ವಕೀಲ ಕೆ.ಎನ್. ಸುಬ್ಬಾ ರೆಡ್ಡಿ ಮತ್ತು ಒಕ್ಕಲಿಗ ಸಮುದಾಯದ ಹಲವಾರು ಜನ ಜಾತಿ ಗಣತಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
Advertisement