'ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯದ ಆತ್ಮಕಥೆ ಬರುತ್ತಿದೆ': ಬಾಗಿನ ಕವನ ವಾಚಿಸಿದ ಬಾನು ಮುಷ್ತಾಕ್

ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಂ ಜನರಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ರಾಜ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು ಎಂದು ಖ್ಯಾತ ಸಾಹಿತಿ ಮೈಸೂರು ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್ ಸ್ಮರಿಸಿಕೊಂಡಿದ್ದಾರೆ.
Banu Mushtaq, CM Siddaramaiah and others in Mysuru Dasara inauguration
ಬಾನು ಮುಷ್ತಾಕ್ ಮತ್ತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಗಣ್ಯರು ಮೈಸೂರು ದಸರಾ ಉದ್ಘಾಟನೆ ವೇಳೆ
Updated on

ಮೈಸೂರು: ಸಂಬಂಧದಲ್ಲಿ ನನಗೆ ಮಾವ ಆಗಬೇಕು. ಇಲ್ಲಿ ಒಡೆಯರ್ ಕಾಲದಲ್ಲಿ ಸಿಪಾಯಿ ಮೊಹಮ್ಮದ್ ಗೌಸ್ ಎಂಬುವವರಿದ್ದರು, ಅವರು ಬೆಳಗೊಳದವರಾಗಿದ್ದರು, ಮೈಸೂರು ರಾಜಮನೆತನದ ಸೈನ್ಯದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು.

ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಂ ಜನರಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ರಾಜ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು ಎಂದು ಖ್ಯಾತ ಸಾಹಿತಿ ಮೈಸೂರು ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್ ಸ್ಮರಿಸಿಕೊಂಡಿದ್ದಾರೆ.

ಸಂಸ್ಕೃತಿಯು ಹೃದಯಗಳಿಗೆ ಸೇತುವೆಯಾಗಿದೆ, ಅದು ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತದೆ, ದ್ವೇಷವನ್ನಲ್ಲ. ಎಲ್ಲಾ ಜೀವಗಳನ್ನು ಗೌರವಿಸಬೇಕು ಎಂದು ಈ ಭೂಮಿ ನನಗೆ ಕಲಿಸಿದೆ. ಜಗತ್ತು ಯುದ್ಧದ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ ಮತ್ತು ಮಾನವೀಯತೆಯು ದ್ವೇಷ ಮತ್ತು ರಕ್ತಪಿಪಾಸೆಯಿಂದ ಉತ್ತೇಜಿಸಲ್ಪಟ್ಟಾಗ, ಮೈಸೂರು ದಸರಾ ಶಾಂತಿ ಮತ್ತು ಸೌಹಾರ್ದತೆಗೆ ಒಂದು ಸ್ಪಷ್ಟ ಕರೆಯಾಗಿದೆ ಎಂದರು.

Banu Mushtaq, CM Siddaramaiah and others in Mysuru Dasara inauguration
ನನಗೆ ಬೂಕರ್ ಪ್ರಶಸ್ತಿ ಬಂದಾಗ ನನ್ನ ಆಪ್ತ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ಹೇಳಿದ್ದಳು: ಬಾನು ಮುಷ್ತಾಕ್

ನಾವು ಸಾಂವಿಧಾನಿಕ ಮೌಲ್ಯಗಳನ್ನು ಹಾಗೂ ಪರಸ್ಪರರ ನಂಬಿಕೆ ವ್ಯವಸ್ಥೆಗಳು ಮತ್ತು ಮೌಲ್ಯಗಳನ್ನು ಗೌರವಿಸೋಣ. ಏಕತೆ ಮತ್ತು ಸಮಗ್ರತೆ ಈ ಭೂಮಿಯ ಸುಗಂಧವಾಗಲಿ. ಚಾಮುಂಡೇಶ್ವರಿ ದೇವಿಯ ಆಶೀರ್ವಾದಗಳು ನಮಗೆ ಮಾರ್ಗದರ್ಶನ ನೀಡಲಿ. ಅವರ ಶಕ್ತಿ, ಪ್ರೀತಿ ಮತ್ತು ಧೈರ್ಯವು ನಮ್ಮೊಳಗಿನ ದ್ವೇಷ ಮತ್ತು ಅಸಹಿಷ್ಣುತೆಯನ್ನು ಜಯಿಸಲು ನಮಗೆ ಸಹಾಯ ಮಾಡಲಿ.

ಈ ದಸರಾ ಹಬ್ಬವು ಈ ರಾಜ್ಯ ಮತ್ತು ರಾಷ್ಟ್ರದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಶಾಂತಿ, ಸಾಮರಸ್ಯ ಮತ್ತು ನ್ಯಾಯದ ಬೆಂಕಿಯನ್ನು ಹೊತ್ತಿಸಲಿ. ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾರ್ಧ ನಮ್ಮ ಶಕ್ತಿ, ಆರ್ಥಿಕತೆಯೇ ನಮ್ಮ ರೆಕ್ಕೆ, ವಿಶ್ವಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಚಿಗುರು ನಮ್ಮ ಎದೆಯಲ್ಲಿ ಒಡೆಯಲಿ ಎಂದು ಹೇಳಿದರು.

ಚಾಮುಂಡಿ ಶಕ್ತಿಯ ಪ್ರತೀಕ

ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಕೇವಲ ಮೃದುತ್ವ, ತಾಳ್ಮೆ ಎಂದಲ್ಲ ಅಪಾರ ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ. ಮೈಸೂರಿನ ಇಡೀ ಒಡೆಯರ್ ಅರಸೊತ್ತಿಗೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿದ್ದರು. ಸಂಪತ್ತು ಹಂಚಿಕೊಂಡರೆ ವೃದ್ಧಿಯಾಗುತ್ತದೆ, ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ ಎಂದು ಹೇಳಿದ್ದರು. ನಾನು ಒಬ್ಬ ಸಾಹಿತಿ, ಕವಯಿತ್ರಿ ನನ್ನ ಕವನದ ಮೂಲಕ ಒಂದು ಸಂದೇಶ ನಿಮ್ಮ ಮುಂದೆ ಇಡುತ್ತೇನೆ ಎಂದರು.

ನಾನು ಇದುವರೆಗೂ ಸುಮಾರು ಕಾರ್ಯಕ್ರಮ ನಡೆಸಿದ್ದೇನೆ, ಆಹ್ವಾನಿತಳಾಗಿದ್ದೇನೆ ನೂರಾರು ಸಾರಿ ದೀಪಗಳನ್ನು ಬೆಳಗಿಸಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಮಾಡಿದ್ದೇನೆ, ಮಂಗಳಾರತಿ ಕೂಡ ಸ್ವೀಕರಿಸಿದ್ದೇನೆ. ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬುಕರ್ ಬಾನು ಬದುಕು ಬರಹ ಎಂಬ ಪುಸ್ತಕ ಪ್ರಕಟವಾಗುತ್ತಿದೆ. ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಪ್ರಕಟವಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು.

ಬಾಗಿನ ಕವನ ವಾಚನ

ಒಬ್ಬ ಮುಸ್ಲಿಂ ಹೆಣ್ಣುಮಗಳು ಬಾಗಿನ ಪಡೆದಾಗ ಅವರ ಮನಸ್ಸಿನಲ್ಲಿ ಉತ್ಪನ್ನವಾಗುವ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಈ ಕವನ ವಾಚನ ಮಾಡಿದರು.

ಎಷ್ಟೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ನಿಂತು ನನ್ನನ್ನು ಆಹ್ವಾನಿಸಿ, ಈ ಕಾರ್ಯಕ್ರಮದಲ್ಲೊ ನಾನು ಭಾಗವಹಿಸಲಿಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ನನಗೆ ಆಹ್ವಾನವನ್ನು ನೀಡಿ, ನೈತಿಕವಾದಂತಹ ಬೆಂಬಲವನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎನ್ನುವ ಮೂಲಕ ತಮ್ಮ ಭಾಷಣ ಮುಗಿಸಿದರು.

ಮೈಸೂರಿನ ಉರ್ದು ಭಾಷಿಕರು ದಸರಾವನ್ನು ಸ್ವೀಕರಿಸಿದ್ದಾರೆ

ಮೈಸೂರಿನ ಉರ್ದು ಭಾಷಿಕರು ದಸರಾವನ್ನು ತಮ್ಮದಾಗಿಸಿಕೊಂಡಿದ್ದಾರೆ. ನನಗೆ ತಿಳಿದ ಮಟ್ಟಿಗೆ, ಅವರು ವಿಜಯದಶಮಿಯನ್ನು ತಮ್ಮ ಭಾಷೆಯಲ್ಲಿ ‘ಸಿಲಿಂಗನ್’ ಎಂದು ಕರೆಯುತ್ತಾರೆ, ಹೀಗಾಗಿ ಅದನ್ನು ತಮ್ಮ ಜೀವನ ಮತ್ತು ಪ್ರಜ್ಞೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ನಾವೆಲ್ಲರೂ ಒಂದಾಗಿದ್ದೇವೆ, ದಸರಾವನ್ನು ಸಂಸ್ಕೃತಿಯ ಆಚರಣೆಯಾಗಿ ಆಚರಿಸುತ್ತೇವೆ ಎಂದು ಬಾನು ಮುಷ್ತಾಕ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com