
ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಬಹುತೇಕ ರಸ್ತೆಗಳು ಹೊಂಡ ಗುಂಡಿ ಬಿದ್ದು ತೀವ್ರ ಹದಗೆಟ್ಟು ಹೋಗಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯಲು ವಿರೋಧ ಪಕ್ಷ ಬಿಜೆಪಿ ಬುಧವಾರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ರಾಜ್ಯದಾದ್ಯಂತದ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳ ಹಾವಳಿಯ ಕುರಿತು ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಿತು.
ಬೆಂಗಳೂರಿನಲ್ಲಿ, ಬಿಜೆಪಿ ನಾಯಕರು ಗುಂಡಿಗಳನ್ನು ಮುಚ್ಚುವ ಮೂಲಕ ಪ್ರದರ್ಶನಗಳನ್ನು ನಡೆಸಿದರೆ, ರಾಜ್ಯದ ಇತರ ಭಾಗಗಳಲ್ಲಿ 'ರಸ್ತೆ ತಡೆ' ಪ್ರತಿಭಟನೆಗಳು ನಡೆದವು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಬೆಂಗಳೂರಿನ ಯಲಹಂಕದಲ್ಲಿ ನಡೆದ ಪ್ರತಿಭಟನೆಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ನೇತೃತ್ವ ವಹಿಸಿದ್ದರು. ಮಾಜಿ ಶಾಸಕರು ಮತ್ತು ನಾಯಕರು ಪಕ್ಷದ ಉತ್ತರ ಬೆಂಗಳೂರು ಪ್ರದೇಶದಲ್ಲಿ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರದರ್ಶನ ನಡೆಸಿದರು.
ರಸ್ತೆ ರಿಪೇರಿಗೆ ಒಂದು ತಿಂಗಳ ಗಡುವು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ರಸ್ತೆಗಳು ತೀರಾ ಹದಗೆಟ್ಟಿರುವುದಕ್ಕೆ ಕಾಂಗ್ರೆಸ್ ಸರ್ಕಾರವು ವಿವಿಧ ವರ್ಗಗಳಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಗುಂಡಿಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಮತ್ತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರಂತಹ ಉದ್ಯಮಿಗಳು ಸೇರಿದಂತೆ ಹಲವರು ರಾಜ್ಯ ಸರ್ಕಾರವನ್ನು ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು.
ಪ್ರಯಾಣ ಮತ್ತು ರಸ್ತೆ ಮೂಲಸೌಕರ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಆನ್ಲೈನ್ ಟ್ರಕ್ಕಿಂಗ್ ಪ್ಲಾಟ್ಫಾರ್ಮ್ ಬ್ಲ್ಯಾಕ್ಬಕ್ ಬೆಂಗಳೂರಿನ ಹೊರ ವರ್ತುಲ ರಸ್ತೆಯ (ಒಆರ್ಆರ್) ಬೆಳ್ಳಂದೂರಿನಲ್ಲಿರುವ ಕಂಪನಿಯನ್ನು ಸ್ಥಳಾಂತರಿಸುವುದಾಗಿ ಎಚ್ಚರಿಕೆ ನೀಡಿತ್ತು.
ಡಿ ಕೆ ಶಿವಕುಮಾರ್ ಏನೆಂದರು?
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರು ಕೂಡ ಹೌದು. ಈ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದಾಗ, ದೆಹಲಿಯಲ್ಲಿ ಪ್ರಧಾನಿ ನಿವಾಸಕ್ಕೆ ಹೋಗುವ ರಸ್ತೆ ಸೇರಿದಂತೆ ದೇಶಾದ್ಯಂತ ಗುಂಡಿಗಳ ಸಮಸ್ಯೆ ಇದೆ. ಈ ಸಮಸ್ಯೆ ಕರ್ನಾಟಕದಲ್ಲಿ ಮಾತ್ರ ಇದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ ಎಂದಿದ್ದರು.
ಸಮಸ್ಯೆಯನ್ನು ಸರಿಪಡಿಸುವ ಕರ್ತವ್ಯ ಮತ್ತು ಜವಾಬ್ದಾರಿ ಸರ್ಕಾರಕ್ಕೆ ಇದೆ, ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದರು. ಗ್ರೇಟರ್ ಬೆಂಗಳೂರಿನ ಪ್ರತಿಯೊಂದು ನಿಗಮದಲ್ಲಿಯೂ ಸುಮಾರು ಸಾವಿರ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರತಿದಿನ ನಡೆಯುತ್ತಿದೆ. ಅಧಿಕಾರದಲ್ಲಿದ್ದಾಗ ರಸ್ತೆಗಳನ್ನು ನಿರ್ವಹಿಸದ ಬಿಜೆಪಿಯವರು ಈಗ ಈ ವಿಷಯವನ್ನು ಏಕೆ ಎತ್ತುತ್ತಿದ್ದಾರೆ, ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಂದು ಕೇಳಿದರು.
ಬೆಂಗಳೂರು ನಗರದ ರಸ್ತೆ ಅಭಿವೃದ್ಧಿ ಮತ್ತು ರಿಪೇರಿಗೆ 1,100 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದರು.
Advertisement