
ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರ.. ಎಂಬ ಹಾಡಿನಂತೆ ಜಂಬೂಸವಾರಿಯಲ್ಲಿ ಅಂಬಾರಿ ನೋಡಲು ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ಒಂದೆಡೆಯಾದರೆ, ದಸರಾದ ದೀಪಾಲಂಕಾರದಲ್ಲಿ ಪಾರಂಪರಿಕ ನಗರದ ದರ್ಶನ ಪಡೆಯಲು ಬರುವ ಪ್ರವಾಸಿಗರು ಮತ್ತೊಂದೆಡೆ. ಹೀಗಾಗಿ ಸಂಜೆ ವೇಳೆ ದೀಪಾಲಂಕಾರ ದರ್ಶನ ಮಾಡಿಸಲು ಅಂಬಾರಿ ಡಬಲ್ ಡೆಕ್ಕರ್ ಬಸ್ಗಳ ವ್ಯವಸ್ಥೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಡಿದೆ.
ಸದ್ಯ ನಗರದಲ್ಲಿ 5 ಬಸ್ಗಳು ಸೇವೆಗೆ ಸಿದ್ದವಾಗಿದ್ದು, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 21ರ ವರೆಗೆ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಮೈಸೂರಿನಲ್ಲಿ ಸಿಗಲಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆರಂಭಿಸಿರುವ ಡಬಲ್ ಡೆಕ್ಕರ್ ಪ್ರತಿ ಬಸ್ನಲ್ಲಿ 50 ಆಸನಗಳಿದ್ದು, ಕೆಳಗಿನ ಡೆಕ್ಕರ್ನಲ್ಲಿ 30 ಆಸನಗಳು ಹಾಗೂ ಮೇಲಿನ ಡೆಕ್ಕರ್ನಲ್ಲಿ 20 ಆಸನಗಳಿವೆ.
ಪ್ರತಿ ಟ್ರಿಪ್ಗೆ ಕೆಳಗಿನ ಡೆಕ್ಕರ್ ಆಸನಕ್ಕೆ ತಲಾ 250 ರೂ ಹಾಗೂ ಮೇಲಿನ ಡೆಕ್ಕರ್ ಆಸನಕ್ಕೆ ತಲಾ 500 ರೂ ನಿಗದಿಪಡಿಸಲಾಗಿದೆ. ಈ ಬಸ್ನಲ್ಲಿ ಮೈಸೂರು ನಗರವನ್ನು 1 ಗಂಟೆಗಳ ಕಾಲ ಸುತ್ತಬಹುದು. ಸೆಪ್ಟೆಂಬರ್ 22ರಿಂದ ಪ್ರತಿ ದಿನ ಸಂಜೆ 6.30, ರಾತ್ರಿ 8, ಮತ್ತು 9.30ಕ್ಕೆ ಮೂರು ಟ್ರಿಪ್ ಗಳಂತೆ ಕಾರ್ಯನಿರ್ವಹಿಸಲಿವೆ. ವಿಜಯದಶಮಿಯಂದು ಸೇವೆಗಳು ಲಭ್ಯವಿರುವುದಿಲ್ಲ.
ಸೆಪ್ಟೆಂಬರ್ 12 ರಿಂದಲೇ ಮುಂಗಡ ಬುಕಿಂಗ್ ತೆರೆಯಲಾಗಿದ್ದು, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 10 ರವರೆಗಿನ ಮೇಲಿನ ಆಸನಗಳು ಸಂಪೂರ್ಣ ಬುಕ್ ಆಗಿವೆ ಎಂದು ಕೆಎಸ್ಟಿಡಿಸಿ ವ್ಯವಸ್ಥಾಪಕ ಕೆ.ಆರ್. ಮಧು ಅವರು ಮಾಹಿತಿ ನೀಡಿದ್ದಾರೆ.
ನಮ್ಮಲ್ಲಿ ಆರು ಬಸ್ಗಳಿವೆ, ಆದರೆ ಒಂದನ್ನು ದಸರಾ ಉತ್ವವಕ್ಕಾಗಿ ತುಮಕೂರಿಗೆ ಕಳುಹಿಸಲಾಗಿದೆ. ಎಲ್ಲಾ ಮೇಲಿನ ಆಸನದ ಟಿಕೆಟ್ಗಳು ಅಕ್ಟೋಬರ್ 10 ರವರೆಗೆ ಮಾರಾಟವಾಗಿವೆ, ಕೆಳಗಿನ ಸೀಟುಗಳಲ್ಲಿ ಸುಮಾರು ಶೇ.75ರಷ್ಟು ಈಗಾಗಲೇ ಬುಕ್ ಆಗಿವೆ. ಟಿಕೆಟ್ ಗಾಗಿ ಹೆಚ್ಚಿನ ಬೇಡಿಕೆಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಬಸ್'ಗೆ 6 ಪ್ರವಾಸಿಗರು, ಪ್ರಮುಖವಾಗಿ ಯುವಕರಿಗೆ ಮೇಲಿನ ಡೆಕ್ಕರ್ ನಲ್ಲಿ ನಿಂತು ಪ್ರಯಾಣಿಸುವ ಅವಕಾಶವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಹುತೇಕ ಪ್ರವಾಸಿಗರು, ಬೆಂಗಳೂರು, ಕೇರಳ ಮತ್ತು ತಮಿಳುನಾಡಿನವರಾಗಿದ್ದಾರೆ. ಭಾರೀ ದಟ್ಟಣೆಯ ಹೊರತಾಗಿಯು ಅಂಬಾರಿ ಬಸ್ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಸ್ ಸಂಚರಿಸುವ ಮಾರ್ಗಗಳು ಹೀಗಿವೆ..
ಮೈಸೂರಿನ ಹೋಟೆಲ್ ಮಯೂರ ಹೊಯ್ಸಳ ಹೊರಡುವ ಬಸ್ಗಳು ನಗರದ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಾಂಸ್ಕೃತಿಕ ಪಠಶಾಲಾ, ಮೈಸೂರು ಅರಮನೆ (ದಕ್ಷಿಣ ದ್ವಾರ), ಜಯಮಾರ್ತಾಂಡ ವೃತ್ತ ದ್ವಾರ, ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಗೆ ವೃತ್ತ), ಕೆಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ವೈದ್ಯಕೀಯ ಕಾಲೇಜು, ನಗರ ರೈಲ್ವೆ ನಿಲ್ದಾಣ ಮತ್ತು ಮಯೂರ ಹೊಯ್ಸಳಕ್ಕೆ ಹಿಂತಿರಗಲಿದೆ.
Advertisement