KSWAN 3.0 ಟೆಂಡರ್ ಅಕ್ರಮ ಆರೋಪ: ರಾಜ್ಯ ಸರ್ಕಾರಕ್ಕೆ 90 ಕೋಟಿ ರೂ. ಹೆಚ್ಚುವರಿ ಹೊರೆ..?

ಈ ಯೋಜನೆಯ ಮುಖ್ಯ ಉದ್ದೇಶ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಡಿಜಿಟಲ್ ಸಂಪರ್ಕದ ಮೂಲಕ ಮತ್ತಷ್ಟು ಬಲಪಡಿಸುವುದಾಗಿದೆ. ಈಗಾಗಲೇ ಕಾರ್ಯನಿರ್ವಹಣೆಯಲ್ಲಿರುವ ಜಾಲತಾಣವನ್ನು ಸುಧಾರಿಸುವುದು ಮತ್ತು ವಿಸ್ತರಿಸುವುದು ಇದರ ಭಾಗವಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಕರ್ನಾಟಕದಾದ್ಯಂತ ಇರುವ ಎಲ್ಲಾ ಸರ್ಕಾರಿ ಕಚೇರಿಗಳ ನಡುವೆ ಡಿಜಿಟಲ್ ಸಂಪರ್ಕವನ್ನು ಸುಧಾರಿಸುವುದು ಮತ್ತು ವಿಸ್ತರಿಸುವ ಯೋಜನೆಯಾದ KSWAN 3.0 ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪ ಕೇಳಿಬಂದಿದ್ದು, ಇದರಿಂದಾಗಿ ರಾಜ್ಯ ಸರ್ಕಾರಕ್ಕೆ 90 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಇ-ಆಡಳಿತ ಇಲಾಖೆ ಈ ಯೋಜನೆಗಾಗಿ ಟೆಂಡರ್ ನೀಡುವಾಗ ನಿಗದಿತ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಡಿಜಿಟಲ್ ಸಂಪರ್ಕದ ಮೂಲಕ ಮತ್ತಷ್ಟು ಬಲಪಡಿಸುವುದಾಗಿದೆ. ಈಗಾಗಲೇ ಕಾರ್ಯನಿರ್ವಹಣೆಯಲ್ಲಿರುವ ಜಾಲತಾಣವನ್ನು ಸುಧಾರಿಸುವುದು ಮತ್ತು ವಿಸ್ತರಿಸುವುದು ಇದರ ಭಾಗವಾಗಿದೆ.

2022ರಿಂದಲೇ ಈ ಯೋಜನೆಗೆ ತಯಾರಿ ಆರಂಭಗೊಂಡಿದ್ದು, ಜಾಗತಿಕ ಮಟ್ಟದ ಕಂಪನಿಗಳ ಸಲಹೆ ಪಡೆದು ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸಲು PricewaterhouseCoopers ಸಂಸ್ಥೆಯನ್ನು ನಿಯೋಜಿಸಲಾಗಿತ್ತು.

ಮೊದಲ ಟೆಂಡರ್ 2025 ಜುಲೈ 11ರಂದು ನಡೆದಿದ್ದು, ಅದರಲ್ಲಿ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ, ಆರೆಂಜ್ ಬ್ಯುಸಿನೆಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ, ಬೇಕಾದ ದಾಖಲೆಗಳು ಸಲ್ಲಿಸಲಿಲ್ಲ ಎಂಬ ಕಾರಣ ನೀಡಿ ಟೆಂಡರ್ ರದ್ದುಪಡಿಸಲಾಯಿತು.

File photo
ಅಕ್ರಮ ಆರೋಪ: KSOU ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ; ಬ್ಯಾಂಕ್ ಖಾತೆ ಫ್ರೀಜ್'ಗೆ ಆದೇಶ

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸ್ಪಷ್ಟನೆ ಕೇಳುವುದು ರೂಢಿಯಾಗಿದ್ದರೂ, ಈ ಟೆಂಡರ್ ಅನ್ನು ನೇರವಾಗಿ ರದ್ದುಪಡಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ನಂತರ ತಾಂತ್ರಿಕ ವೈಶಿಷ್ಟ್ಯಗಳು ಹಳೆಯದಾಗಿದೆ ಎಂದು ಹೇಳಿ ಡಿಸೆಂಬರ್ 8, 2025ರಂದು ಟೆಂಡರ್ ಪುನಃ ಹೊರಡಿಸಲಾಯಿತು. ಆದರೆ, ನಿಯಮಾನುಸಾರ ಮಹತ್ವದ ಬದಲಾವಣೆಗಳಿದ್ದರೆ ಹೊಸ ಟೆಂಡರ್ ಕರೆದಿರಬೇಕು. ಅದರ ಬದಲು “ಸೆಕೆಂಡ್ ಕಾಲ್” ಮೂಲಕವೇ ಮತ್ತೆ ಪ್ರಕಟಿಸಿರುವುದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.

ಪುನರ್‌ ಪ್ರಕಟಿತ ಟೆಂಡರ್‌ನಲ್ಲಿ ಕೆಲವು ತಾಂತ್ರಿಕ ಷರತ್ತುಗಳು ಒಂದೇ ಕಂಪನಿಯ ಉಪಕರಣಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸ್ಪರ್ಧೆ ಕಡಿಮೆಯಾಗಿದ್ದು, ಎರಡನೇ ಹಂತದಲ್ಲಿ ಕೇವಲ ರೈಲ್‌ಟೆಲ್ ಮತ್ತು ಟಿಸಿಐಎಲ್ ಮಾತ್ರ ಭಾಗವಹಿಸಿದ್ದವು.

ಈ ವಿಚಾರವವಾಗಿ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷವು ಮಾರ್ಚ್ 25, 2026ರಂದು ಧ್ವನಿ ಎತ್ತಿತ್ತು. ಟೆಂಡರ್ ರದ್ದುಪಡಿಸುವಂತೆ ಹಾಗೂ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಆದಾಗ್ಯೂ, ಮಾರ್ಚ್ 27ರಂದು ರೈಲ್‌ಟೆಲ್ ಸಂಸ್ಥೆಗೆ ಒಪ್ಪಂದದ ನೀಡಲಾಗಿದೆ.

ಪಕ್ಷವು ಹಲವು ಪ್ರಶ್ನೆಗಳನ್ನು ಎತ್ತಿದೆ — ಮೊದಲ ಟೆಂಡರ್ ಏಕೆ ರದ್ದುಪಡಿಸಲಾಯಿತು? ದೋಷಗಳಿಗೆ ಯಾರು ಹೊಣೆ? ಸಲಹೆಗಾರ ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡಿದೆಯೇ? ಎಂಬ ಪ್ರಶ್ನೆಗಳನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೇಳಿದ್ದು, ಸರ್ಕಾರದಿಂದ ಇದಕ್ಕೆ ಯಾವುದೇ ಉತ್ತರಗಳೂ ಸಿಕ್ಕಿಲ್ಲ.

ತಾಂತ್ರಿಕವಾಗಿ ಕೂಡ ಸಮಸ್ಯೆಗಳಿವೆ ಎಂಬ ಮಾತು ಕೇಳಿಬಂದಿದ್ದು, ಮೂಲ ರೌಟರ್ ಸಾಮರ್ಥ್ಯ ಕಡಿಮೆ ಮಾಡಿ, ಟರ್ಮಿನಲ್ ರೌಟರ್ ಸಾಮರ್ಥ್ಯ ಹೆಚ್ಚಿಸಿರುವುದು ಭವಿಷ್ಯದಲ್ಲಿ ಸರ್ವರ್ ಕಾರ್ಯಕ್ಷಮತೆಯ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಯೋಜನೆಯನ್ನು “ದೋಷಪೂರಿತ” ಎಂದು ಕರೆದಿರುವ ಪಕ್ಷ, ತಕ್ಷಣ ಟೆಂಡರ್ ರದ್ದುಪಡಿಸಬೇಕೆಂದು ಒತ್ತಾಯಿಸಿದೆ. ಇಲ್ಲದಿದ್ದರೆ ರಾಜ್ಯಕ್ಕೆ ದೀರ್ಘಾವಧಿಯಲ್ಲಿ ಹೆಚ್ಚಿನ ವೆಚ್ಚವಾಗುವ ಸಾಧ್ಯತೆ ಇದೆ ಮತ್ತು ಒಂದೇ ಕಂಪನಿಗೆ ಲಾಭವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದೂ ಎಚ್ಚರಿಸಿದೆ. ಈ ಆರೋಪಗಳ ಬಗ್ಗೆ ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com