

ಮಂಡ್ಯ: ಮಳವಳ್ಳಿಯ ಜೆಡಿಎಸ್ ಮಾಜಿ ಶಾಸಕ ಡಾ.ಕೆ. ಅನ್ನದಾನಿ ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದೆ.ಮಳವಳ್ಳಿ ಮೂಲದ ಪ್ರಸನ್ನ ಎಂಬುವವರು ಈ ರೀತಿಯ ಆರೋಪ ಮಾಡಿದ್ದು, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಬಳಿ ಗೋಳು ತೋಡಿಕೊಂಡಿದ್ದಾರೆ.
ಹೌದು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ದಿಶಾ ಸಭೆ ನಡೆಯತಿತ್ತು. ಇಲ್ಲಿಗೆ ಬಂದ ಪ್ರಸನ್ನಕುಮಾರ್, ನನ್ನ ಹೆಂಡತಿ ಮತ್ತು ಮಾಜಿ ಶಾಸಕ ಅನ್ನದಾನಿ ನಡುವೆ ಕಳೆದ 10 ವರ್ಷಗಳಿಂದ ಅಕ್ರಮ ಸಂಬಂಧವಿದೆ. ಇದರಿಂದ ನನ್ನ ಸಂಸಾರ ಬೀದಿಗೆ ಬಂದಿದೆ. ನನಗೆ ನ್ಯಾಯ ಕೊಡಿಸಿ ಎಂದು ಕುಮಾರಸ್ವಾಮಿ ಕಾಲಿಗೆ ಬಿದ್ದು ಗೋಳಾಡಿದರು.
ಅನ್ನದಾನಿ, ನನ್ನ ಹೆಂಡತಿಗೆ ಮೈಸೂರಿನಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಕೊಡಿಸಿದ್ದಾರೆ ಎಂದು ಆರೋಪಿಸಿದರು. ಇದು ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಜನರಲ್ಲಿ ಅಚ್ಚರಿ ಮೂಡಿಸಿತು.
ನನ್ನ ಹೆಂಡತಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅನ್ನದಾನಿ ನನಗೆ ಹೆದರಿಸುತ್ತಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ. ನನ್ನ ಹೆಂಡತಿ ಅನ್ನದಾನಿ ಜೊತೆಯೇ ಇರಲಿ, ನನಗೆ ಅಭ್ಯಂತರವಿಲ್ಲ. ಆದರೆ ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ. ವಿಚ್ಛೇದನ ನೀಡಲು ಆಕೆ 30 ಲಕ್ಷ ರೂಪಾಯಿ ಹಣ ಕೇಳುತ್ತಿದ್ದಾಳೆ ಎಂದು ಪ್ರಸನ್ನ ಕಣ್ಣೀರಿಟ್ಟಿದ್ದಾರೆ.
ನನ್ನ ಹೆಂಡತಿ ಇನ್ನೊಬ್ಬನ ಜೊತೆ ಇರುವುದನ್ನು ನಾನು ಹೇಗೆ ಸಹಿಸಿಕೊಳ್ಳಲಿ? ನನಗೆ ಆಕೆಯಿಂದ ಮುಕ್ತಿ ಕೊಡಿಸಿ, ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.
ದೂರು ಸ್ವೀಕರಿಸಿದ ಹೆಚ್.ಡಿ. ಕುಮಾರಸ್ವಾಮಿ, ಸಭೆ ಮುಗಿದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ, ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸದ್ಯ ಮಂಡ್ಯದಲ್ಲಿ ಇದು ಭಾರಿ ಸಂಚಲನ ಮೂಡಿಸಿದ್ದು, ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
Advertisement