

ಅಮ್ರೋಹಾ: ಅಕ್ರಮ ಸಂಬಂಧ ವಿರೋಧಿಸಿದ ಪತಿಯನ್ನು ಮಹಿಳೆಯೊಬ್ಬಳು ಕೊಂದು ಬಳಿಕ ದರೋಡೆ ಕಥೆ ಕಟ್ಟಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪತಿಗೆ ಊಟದಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕೊಟ್ಟ ಮಹಿಳೆ, ಆತ ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಪ್ರಿಯಕರನೊಂದಿಗೆ ಸೇರಿ ಕೊಂದು ಹಾಕಿದ್ದಾಳೆ.
ಆಘಾತಕಾರಿ ಅಂಶವೆಂದರೆ ಪತಿಯ ಸಾವಿನ ಬಳಿಕ ಮಹಿಳೆ ಏನೂ ಆಗಿಲ್ಲವೇನೋ ಎಂಬಂತೆ ಗಂಡನ ಶವದ ಪಕ್ಕದಲ್ಲೇ ಮಕ್ಕಳೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ. ಬಳಿಕ ಮಾರನೇ ದಿನ ಬೆಳಗ್ಗೆ ದರೋಡೆ ಕಥೆ ಕಟ್ಟಿದ್ದಾಳೆ.
ಪ್ರಸ್ತುತ ಪತಿಯನ್ನು ಕೊಲೆ ಮಾಡಿದ್ದಕ್ಕಾಗಿ ಮಹಿಳೆ, ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ.
ಆಗಿದ್ದೇನು?
ಕೊಲೆಯಾದ ಪತಿ ಮೆಹ್ರಾಜ್, ಅಮ್ರೋಹಾದ ಪಿಪ್ಲೋಟಿ ಕಲಾ ಗ್ರಾಮದ ನಿವಾಸಿಯಾಗಿದ್ದು, ಮೇಸ್ತ್ರಿ ಕೆಲಸ ಮಾಡುತ್ತಿದ್ದ. ಅವನ ಪತ್ನಿ ರುಹಿ, ತನ್ನ ಸ್ವಂತ ಸಹೋದರಿಯ ಸೋದರ ಮಾವ ಫರ್ಮಾನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಮತ್ತು ಇಬ್ಬರೂ ಒಟ್ಟಿಗೆ ವಾಸಿಸಲು ಬಯಸಿದ್ದರು.
ಆದರೆ ಒಂದು ದಿನ ಇಬ್ಬರ ಅಕ್ರಮ ಸಂಬಂಧ ಪತಿ ಮುಂದೆ ಬಟಾ ಬಯಲಾಗಿದೆ. ಕೂಡಲೇ ಪತಿ ಮೆಹ್ರಾಜ್ ಅದಕ್ಕೆ ತೀವ್ರ ವಿರೋಧಿಸಿ ದೊಡ್ಡ ಗಲಾಟೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ರುಹಿ ತನ್ನ ಪ್ರೀತಿ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ದೂರ ಮಾಡಬೇಕು ಎಂದು ಯೋಚಿಸಿ ಆತನ ಕೊಲೆಗೆ ಸಂಚು ರೂಪಿಸಿದ್ದಾಳೆ.
ಈ ವೇಳೆ ತನ್ನ ಪ್ರಿಯಕರನೊಂದಿಗೆ ಚರ್ಚಿಸಿ ಮೆಹ್ರಾಜ್ನ ಆಹಾರದಲ್ಲಿ ರಹಸ್ಯವಾಗಿ ಮತ್ತು ಬರುವ ಔಷಧ ಬೆರೆಸಿ ಕೊಟ್ಟಿದ್ದಾಳೆ. ಅದನ್ನು ತಿಂದ ಮೆಹ್ರಾಜ್ ಪ್ರಜ್ಞೆ ತಪ್ಪಿದ್ದು, ಈ ವೇಳೆ ರುಹಿ ರಾತ್ರಿ ವೇಳೆ ಪ್ರಿಯಕರ ಫರ್ಮಾನ್ ಮತ್ತು ಆತನ ಸ್ನೇಹಿತ ಅದ್ನಾನ್ ಅವರನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಪತಿಯ ಗಂಟಲು ಸೀಳಿ ಹತ್ಯೆ
ಈ ಮೂವರು ಅಂದು ರಾತ್ರಿ ಪ್ರಜ್ಞೆ ತಪ್ಪಿದ್ದ ಮೆಹ್ರಾಜ್ನ ಪಾದಗಳನ್ನು ಹಗ್ಗದಿಂದ ಕಟ್ಟಿದ್ದು, ಬಳಿಕ ಹರಿತವಾದ ಚಾಕುವಿನಿಂದ ಅವನ ಗಂಟಲು ಸೀಳಿ ಸಾಮೂಹಿಕವಾಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಫರ್ಮಾನ್ ಮತ್ತು ಆತನ ಸ್ನೇಹಿತ ಅದ್ನಾನ್ ಹೊರಟು ಹೋಗಿದ್ದು, ಪತ್ನಿ ರುಹಿ ಮಾತ್ರ ರಾತ್ರಿಯಿಡೀ ತನ್ನ ಗಂಡನ ಶವದ ಪಕ್ಕದಲ್ಲೇ ಇದ್ದ ಹಾಸಿಗೆಯ ಮೇಲೆ ಮಲಗಿದ್ದಳು, ಅವಳ ಇಬ್ಬರು ಮಕ್ಕಳು ಕೂಡ ಪಕ್ಕದಲ್ಲಿ ಮಲಗಿದ್ದರು.
ಬೆಳಗ್ಗೆ ದರೋಡೆ ಕಥೆ ಕಟ್ಟಿದ ರುಹಿ
ಮೆಹ್ರಾಜ್ ತಂದೆ ಮರುದಿನ ಬೆಳಿಗ್ಗೆ ತನ್ನ ಮಗನ ಮನೆಗೆ ಬಂದಾಗ, ಅವನ ಮಗ ವರಾಂಡಾದಲ್ಲಿ ಹಾಸಿಗೆಯ ಮೇಲೆ ಮಲಗಿದ್ದ, ಅವನ ಕೈಕಾಲುಗಳು ಕಟ್ಟಲ್ಪಟ್ಟಿರುವುದನ್ನು ನೋಡಿ ಆಘಾತದಿಂದ ರುಹಿಯನ್ನು ಕೇಳಿದಾಗ ಆಕೆ ದರೋಡೆ ಕಥೆ ಕಟ್ಟಿದ್ದಾಳೆ. ದರೋಡೆ ಕೋರರು ಮೆಹ್ರಾಜ್ ಕೈಕಾಲು ಕಟ್ಟಿ ಆತನನ್ನು ಕೊಂದು ಮನೆ ದರೋಡೆ ಮಾಡಿದರು ಎಂದು ಹೇಳಿದ್ದಾಳೆ.
ಆಕೆಯ ಮಾತುಗಳಿಂದ ಅನುಮಾನಗೊಂಡ ತಂದೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಶಂಕೆ ಮೇರೆಗೆ ರುಹಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆಯ ಹಿಂದಿನ ಸತ್ಯ ಬಯಲಾಗಿದೆ.
ಬಳಿಕ ಪೊಲೀಸರು ಆಕೆಗೆ ನೆರವು ನೀಡಿದ ಪ್ರಿಯಕರ ಫರ್ಮಾನ್ ಮತ್ತು ಆತನ ಸ್ನೇಹಿತ ಅದ್ನಾನ್ ನನ್ನೂ ಕೂಡ ಬಂಧಿಸಿ ಕೊಲೆಗೆ ಬಳಸಿದ ಎರಡು ಚಾಕುಗಳು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement