

ಏಪ್ರಿಲ್ 2 ರಂದು ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ ಅವರನ್ನು ಅರಣ್ಯ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದಾಗ ಶರಣ್ಯ ಸಿಕ್ಕಿದ್ದಾರೆ. ದಟ್ಟಾರಣ್ಯದಲ್ಲಿ ಕೇವಲ ಒಂದು ಬಾಟಲಿ ನೀರಿನಲ್ಲಿ ನಾಲ್ಕು ದಿನ ಹೇಗೆ ಬದುಕುಳಿದರು ಎಂಬ ಅಚ್ಚರಿ ಎಲ್ಲರಿಗೂ ಉಂಟಾಗಿದೆ.
ಶರಣ್ಯ ಏನು ಮಾಡಿದ್ದರು?
ಶರಣ್ಯ ತಮ್ಮ ಸಮಯಪ್ರಜ್ಞೆಯಿಂದ ಡ್ರೋಣ್ ಕಣ್ಣಿಗೆ ಬೀಳುವಂತೆ ಬಯಲು ಜಾಗದಲ್ಲಿ ಉಳಿದುಕೊಂಡಿದ್ದರು. ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ.
ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.
ಡ್ರೋನ್ ಕ್ಯಾಮೆರಾ ಬರುತ್ತೆಂದು ನಿರೀಕ್ಷಿಸಿದ್ದ ಶರಣ್ಯ
ಕಾಡಿನಲ್ಲಿ ಡ್ರೋನ್ ಹಾರಾಟ ಮಾಡುತ್ತಿದ್ದಂತೆ, ಎತ್ತರದ ಮತ್ತು ಸ್ವಲ್ಪ ಬಯಲಾದ ಜಾಗದಲ್ಲಿಯೇ ನಿಂತುಕೊಂಡಿದ್ದ ಶರಣ್ಯ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾಗೆ ಕಂಡ ಕೂಡಲೇ ಅವರನ್ನು ರಕ್ಷಣೆ ಮಾಡಲಾಗಿದೆ. ಇದಾದ ನಂತರ ಶರಣ್ಯ ಇದ್ದ ದುರ್ಗಮ ಹಾದಿಯತ್ತ ಸಾಗಿದ ಅರಣ್ಯ ಇಲಾಖೆ ಸಿಬ್ಬಂದಿ ನಂತರ ಆಕೆಯನ್ನು ರಕ್ಷಣೆ ಕರೆತರಲಾಯಿತು. ಒಂದು ವೇಳೆ ಅರಣ್ಯದಲ್ಲಿ ಕಾಡು ಪ್ರಾಣಿಗಳ ಭಯದಿಂದ ಎಲ್ಲಿಯಾದಗೂ ಮರದ ಪೊಟರೆಗಳು ಅಥವಾ ಕಲ್ಲಿನ ಬಂಡೆಗಳ ಪಕ್ಕದಲ್ಲಿ ಅಡಗಿ ಕುಳಿತಿದ್ದರೆ ಅರಣ್ಯ ಇಲಾಖೆಯ ಡ್ರೋನ್ ಕ್ಯಾಮೆರಾಗೂ ಸಿಗುತ್ತಿರಲಿಲ್ಲ.
ಕೊಡಗಿನಲ್ಲಿ ಟ್ರೆಕ್ಕಿಂಗ್ಗೆ ಹೋಗಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಕೇರಳದ ಕೋಯಿಕ್ಕೋಡ್ನ ನಾಡಾಪುರಂ ನಿವಾಸಿ ಟೆಕ್ಕಿ ಶರಣ್ಯ, ಬರೋಬ್ಬರಿ 4ನೇ ದಿನ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಶೋಧ ತಂಡದವರು ಶರಣ್ಯರನ್ನು ಪತ್ತೆ ಮಾಡಿದ ತಕ್ಷಣ, ಅವರು ತಮ್ಮ ತಾಯಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಮಗಳು ಸಿಕ್ಕ ಖುಷಿಯಲ್ಲಿ ತಾಯಿ ಆನಂದಭಾಷ್ಪ ಸುರಿಸಿದ್ದಾರೆ.
ಕೋಟಿ ನಮಸ್ಕಾರ ಎಂದ ತಾಯಿ
ಶರಣ್ಯಳನ್ನು ಫೋನ್ ಸಿಗ್ನಲ್ ಸಿಗುವ ಪ್ರದೇಶಕ್ಕೆ ಕರೆತಂದ ಕೂಡಲೇ ಆಕೆಯ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಶರಣ್ಯ ಸಿಕ್ಕಿರುವ ಮಾಹಿತಿ ಕೇಳುತ್ತಿದ್ದಂತೆ ಕಣ್ಣಾಲಿಗಳನ್ನು ತುಂಬಿಕೊಂಡ ಅವರ ತಾಯಿ, ನನಗೆ ಸಂತೋಷವನ್ನ ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೆ ತುಂಬಾ ಧನ್ಯವಾದ, ನಿಮಗೆ ಇಲ್ಲಿಂದಲೇ ಕೋಟಿ ನಮಸ್ಕಾರ ಮಾಡ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಶರಣ್ಯ ಕೂಡ ಅಮ್ಮನೊಂದಿಗೆ ಮಾತನಾಡಿ, 'ಆರೋಗ್ಯವಾಗಿದ್ದೇನೆ ನಾನು ಚಿಂತೆ ಬೇಡ, ಬೇಗ ಮನೆಗೆ ಬರ್ತೇನೆ' ಎಂದು ಹೇಳಿದ್ದಾರೆ.
Advertisement