ಮಹಿಳೆಯರಿಗೆ ಅವಕಾಶ ಕೊಟ್ಟರೆ, ಸಮಾಜಕ್ಕೆ ಹೆಚ್ಚಿನ ಕೊಡುಗೆ: ಸಂಸದ ಬಸವರಾಜ ಬೊಮ್ಮಾಯಿ

ಮಹಿಳೆಯರಲ್ಲಿ ಅಪಾರ ಪ್ರತಿಭೆ, ಪ್ರಾಮಾಣಿಕತೆ ಇರುತ್ತದೆ. ಅವರಿಗೆ ಸೂಕ್ತ ಅವಕಾಶಗಳು ದೊರೆತರೆ, ಅವರು ಸಮಾಜವನ್ನು ಮತ್ತಷ್ಟು ಮುನ್ನಡೆಸುವ ಶಕ್ತಿ ಹೊಂದಿದ್ದಾರೆ.
Basavaraj Bommai
ಬಸವರಾಜ ಬೊಮ್ಮಾಯಿ
Updated on

ಗದಗ: ಮಹಿಳೆಯರು ಹೆಚ್ಚಿನ ಪ್ರತಿಭೆ ಮತ್ತು ಸಮಗ್ರತೆಯನ್ನು ಹೊಂದಿರುತ್ತಾರೆ. ಅವರಿಗೆ ಅವಕಾಶಗಳನ್ನು ಕೊಟ್ಟರೆ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡುತ್ತಾರೆಂದು ಬಿಜೆಪಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಮುಂಡರಗಿ ತಾಲ್ಲೂಕಿನಲ್ಲಿ ಪ್ರಥಮ ರ್ಯಾಂಕ್ ಮತ್ತು ಗದಗ ಜಿಲ್ಲೆಯಲ್ಲಿ ಮೂರನೇ ರ್ಯಾಂಕ್ ಪಡೆದ ಕಲಕೇರಿಯ ಶ್ರೀ ಎಂ.ಬಿ. ಪಾಟೀಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಮಂಜುಳಾ ಹನುಮಂತಪ್ಪ ಹುಲಕಣ್ಣವರ್ ಅವರನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಅವಕಾಶ ನೀಡಿದರೆ ಅವರು ಸಮಾಜದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಮಹಿಳೆಯರಲ್ಲಿ ಅಪಾರ ಪ್ರತಿಭೆ, ಪ್ರಾಮಾಣಿಕತೆ ಇರುತ್ತದೆ. ಅವರಿಗೆ ಸೂಕ್ತ ಅವಕಾಶಗಳು ದೊರೆತರೆ, ಅವರು ಸಮಾಜವನ್ನು ಮತ್ತಷ್ಟು ಮುನ್ನಡೆಸುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ರಾಜ್ಯದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದರೂ, ಮಂಜುಳಾ ಪಡೆದಿರುವ ಗೌರವವೂ ಅಷ್ಟೇ ವಿಶೇಷವಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ದೇಶದಲ್ಲಿ ಅನೇಕ ಮಹಿಳೆಯರ ಪ್ರತಿಭೆ ಹೊರಬರದೆ ಉಳಿದಿರುವುದನ್ನು ಉಲ್ಲೇಖಿಸಿದ ಅವರು, ಹಿಂದಿನ ಪೀಳಿಗೆಯ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರಕಿದ್ದರೆ ಸಮಾಜ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

Basavaraj Bommai
ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

ಸಾಮಾಜಿಕ ಸುಧಾರಕ ಬಸವಣ್ಣ ಅವರ ಆದರ್ಶಗಳನ್ನು ಉಲ್ಲೇಖಿಸಿದ ಅವರು, ಲಿಂಗಭೇದವಿಲ್ಲದ ಸಮಾನತೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಜೊತೆಗೆ ಅಕ್ಕ ಮಹಾದೇವಿ ಅವರ ವಚನ ಸಾಹಿತ್ಯವನ್ನು ಪ್ರಶಂಸಿಸಿ, ಅವರ ಆಲೋಚನೆಗಳು ಇಂದಿಗೂ ಪ್ರೇರಣೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ತಾಯಿಯ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು ಭಾವುಕರಾದರು. ತಾಯಿ ತಂದೆಗಿಂತಲೂ ಶ್ರೇಷ್ಠಳಾಗಿದ್ದು, ಗರ್ಭದಲ್ಲಿಯೇ ಮಕ್ಕಳಿಗೆ ಮೌಲ್ಯಗಳನ್ನು ತುಂಬುತ್ತಾಳೆ ಎಂದು ಹೇಳಿದರು.

ತನ್ನ ತಾಯಿ ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಮೇಲುಗೈ ಹೊಂದಿದ್ದರೂ, ಏಳನೇ ತರಗತಿಗೆ ಶಿಕ್ಷಣ ನಿಲ್ಲಿಸಬೇಕಾಯಿತು. ಆದರೂ ನಂತರ ಹಲವು ಮಕ್ಕಳಿಗೆ ಶಿಕ್ಷಣದಲ್ಲಿ ಸಹಾಯ ಮಾಡಿದರು ಎಂದು ಸ್ಮರಿಸಿದರು.

ಮಂಜುಳಾ ಅವರ ಸಾಧನೆಯನ್ನು ಶ್ಲಾಘಿಸಿದ ಅವರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.95 ಅಂಕ ಪಡೆದು, ವಿವಾಹದ ನಂತರವೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಅತ್ಯಂತ ಪ್ರಶಂಸನೀಯ ಸಾಧನೆ ಎಂದು ಹೇಳಿದರು. ಅವರು ಕೆಎಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು ಎಂದು ಸಲಹೆ ನೀಡಿದ ಅವರು, ತಮ್ಮ ಟ್ರಸ್ಟ್‌ನಿಂದ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಿ ಸುಮಾರು 11 ಲಕ್ಷ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರುವುದನ್ನು ಅವರು ನೆನಪಿಸಿಕೊಂಡರು.

ಮತ್ತೆ ಅವಕಾಶ ದೊರೆತರೆ ಆ ಯೋಜನೆಯನ್ನು ಪುನರಾರಂಭಿಸುವ ಇಚ್ಛೆಯಿದೆ ಎಂದು ಹೇಳಿದರು. ಇಂತಹ ಸಾಧನೆಗಳು ಇತರ ಹುಡುಗಿಯರಿಗೂ ಪ್ರೇರಣೆಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್‌.ಎಸ್‌. ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com