

ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಉತ್ತರ ಕರ್ನಾಟಕ ಪ್ರದೇಶದಲ್ಲಿ ರಾಜಕೀಯವಾಗಿ ಬೆಳೆಯುತ್ತಿದ್ದರು. ಆದರೆ, ಬಿಜೆಪಿ ನಡೆಸಿದ ಒಳಸಂಚಿಗೆ ಬಲಿಪಶುವಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ನನಗೆ ನ್ಯಾಯಾಲಯದ ತೀರ್ಪಿ ಮೇಲೆ ಗೌರವ ಇದೆ. ಆದರೆ, ಈ ಪ್ರಕರಣದಲ್ಲಿ ದೊಡ್ಡ ಸಂಚು ನಡೆದಿದೆ. ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಲು ಸಿದ್ಧವಾಗಿದ್ದಾಗಲೇ ಪ್ರಕರಣವನ್ನು ಸಿಬಿಐ (CBI)ಗೆ ನೀಡಲಾಗಿತ್ತು. ಇದು ಕುಲಕರ್ಣಿ ಅವರಿಗೆ ಕಿರುಕುಳ ನೀಡಲು ನಡೆಸಿದ ಕ್ರಮ” ಎಂದು ಹೇಳಿದರು.
ಇದೇ ವೇಳೆ ವಿನಯ್ ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, “ನಾನು ಅವರ ಕುಟುಂಬದವರೊಂದಿಗೆ ಮಾತನಾಡಿದ್ದೇನೆ. ಅವರು ದೇವರ ಮೇಲೆ ಶಪಥ ಮಾಡಿ ತಾವು ನಿರ್ದೋಷಿ ಎಂದು ಹೇಳಿದ್ದಾರೆ. ನನಗೆ ಅವರ ಮೇಲೆ ಇನ್ನೂ ನಂಬಿಕೆ ಇದೆ. ಕಾನೂನುಬದ್ಧವಾಗಿ ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶ ಇದೆ.
ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳಬಾರದು. ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ನನ್ನ ವಿಚಾರದಲ್ಲೂ ಅನೇಕ ಸಂಚು ನಡೆಯಿತು. ನಾನು ಸಾಕಷ್ಟು ಅನುಭವಿಸಿದೆ. ಕೊನೆಗೆ ನನಗೆ ನ್ಯಾಯ ಸಿಕ್ಕಿದ್ದು ಸುಪ್ರೀಂ ಕೋರ್ಟ್ನಲ್ಲಿ. ಈ ಪ್ರಕರಣದಲ್ಲೂ ಮೇಲಿನ ಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಯಾರ ಒಳಸಂಚು ಇದೆ ಎಂಬ ಪ್ರಶ್ನೆಗೆ ಉತ್ತರಿಸಿ, “ಸಮಯ ಬಂದಾಗ ಹೇಳುತ್ತೇನೆ. ಸಿಬಿಐ ತನಿಖೆಗೆ ನೀಡುವ ಅಗತ್ಯ ಏನಿತ್ತು? ಸಿಬಿಐಗೆ ಪ್ರಕರಣ ಕೊಡಿಸುವೆ ಎಂದು ಹೇಳುವ ಸಂದರ್ಭ ಏನಿತ್ತು? ನಾನು ಅವತ್ತೇ ಹೇಳಿದ್ದೆ ಎಂದು ಯಡಿಯೂರಪ್ಪನವರು ಹೇಳುತ್ತಿದ್ದಾರಲ್ಲಾ, ಮುಂಚಿತವಾಗಿ ಹೆಂಗೆ ಹೇಳಲಾಯಿತು? ಉತ್ತರ ಕರ್ನಾಟಕದಲ್ಲಿ ರಾಜಕೀಯವಾಗಿ ಒಬ್ಬ ನಾಯಕ ಶಕ್ತಿಯಾಗಿ ಬೆಳೆಯುತ್ತಿದ್ದಾನೆ ಎಂದು ಬಿಜೆಪಿಯವರು ಒಳಸಂಚು ಮಾಡಿದ್ದಾರೆ” ಎಂದು ದೂರಿದರು.
Advertisement