

ಬೆಂಗಳೂರು: ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಉತ್ತಮ ಫಲಿತಾಂಶ ಪಡೆಯಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ ನೀಡಿದ್ದಾರೆ.
ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಿಬ್ಬಂದಿ ನಡೆಸುವ ಗಸ್ತು ಕಾರ್ಯವನ್ನು ಪತ್ತೆಹಚ್ಚಲು ಮತ್ತು ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ಪರಿಶೀಲಿಸುವ ಇತರ ಸಾಧನಗಳನ್ನು ನಿಯೋಜಿಸಲು ಅಭಿವೃದ್ಧಿಪಡಿಸಲಾದ ಮೊಬೈಲ್ ಆಧಾರಿತ ಅಪ್ಲಿಕೇಶನ್ 'ಇ-ಗಸ್ತು' ಅನ್ನು ಬಳಸಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಅತಿಕ್ರಮಣಗಳನ್ನು ತೆಗೆದುಹಾಕುವುದು ಕಷ್ಟಕರವಾದ ಕೆಲಸ ಎಂದು ಅವರು ಹೇಳಿದರು. 2015 ರ ನಂತರ ನಡೆದಿರುವ ಒತ್ತುವರಿ ತೆರವುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಕಾನೂನು ಕೋಶ ಮತ್ತು ಇಲಾಖೆಯ ಜಾಗೃತ ವಿಭಾಗವನ್ನು ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದರು.
ಮರಗಳನ್ನು ಕಡಿಯುವುದು, ಬೇಟೆಯಾಡುವುದು, ಅತಿಕ್ರಮಣ, ಮಾನವ-ಪ್ರಾಣಿ ಸಂಘರ್ಷಗಳು ಇಲಾಖೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಸೇರಿವೆ. ಸಂರಕ್ಷಣೆಗಾಗಿ ಮಾಡಿದ ಪ್ರಯತ್ನಗಳಲ್ಲಿ ಯಾವುದೇ ಜೀವ ನಷ್ಟವಾಗದಂತೆ ನೋಡಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯ ಸಿಬ್ಬಂದಿ ಕಾಡಿನಂಚಿನ ಜನರೊಂದಿಗೆ ಸೌಹಾರ್ದತೆ ಹೆಚ್ಚಿಸಿಕೊಳ್ಳಬೇಕು. ವಿವಿಧ ಪ್ರತಿಷ್ಠಾನಗಳಿಗೆ ಸಫಾರಿಯಿಂದ ಬರುವ ಹಣದಿಂದ ಕಾಡಿನಂಚಿನಲ್ಲಿ ಜನಸಂಪರ್ಕ ಸಭೆ ನಡೆಸಿ, ಸೌಕರ್ಯ ಒದಗಿಸಬೇಕು ಎಂದರು.
Advertisement