ಕುವೆಂಪು ವಿಶ್ವವಿದ್ಯಾಲಯದಲ್ಲಿ NSUI ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ; ಕುಲಪತಿಗಳೇ ಟಾರ್ಗೆಟ್! ಆಗಿದ್ದೇನು? Video

NSUI ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಗಲಭೆ ನಡೆಸಿ, ವಿವಿ ಆವರಣದಲ್ಲಿನ ಗಾಜುಗಳಿಗೆ ಹಾನಿ ಮಾಡಿ, ವಿಸಿ ಕ್ಯಾಬಿನ್ ಪ್ರದೇಶದ ಮುಂಭಾಗದಲ್ಲಿದ್ದ ಹೂವಿನ ಕುಂಡಗಳನ್ನು ಹೊಡೆದು ಹಾಕಿದ್ದಾರೆ.
Rampage by NSUI activists in Kuvempu University
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
Updated on

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಕುಲಪತಿಗಳಾದ ಡಾ. ಶರತ್ ಅನಂತಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಭಾರಿ ದಾಂಧಲೆ ನಡೆಸಿದ್ದಾರೆ.

NSUI ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಗಲಭೆ ನಡೆಸಿ, ವಿವಿ ಆವರಣದಲ್ಲಿನ ಗಾಜುಗಳಿಗೆ ಹಾನಿ ಮಾಡಿ, ವಿಸಿ ಕ್ಯಾಬಿನ್ ಪ್ರದೇಶದ ಮುಂಭಾಗದಲ್ಲಿದ್ದ ಹೂವಿನ ಕುಂಡಗಳನ್ನು ಹೊಡೆದು ಹಾಕಿದ್ದಾರೆ.

ಆಡಳಿತ ಕಟ್ಟಡದಲ್ಲಿರುವ ವಿಸಿ ಕ್ಯಾಬಿನ್ ಮುಂದೆ ಪ್ರತಿಭಟನೆ ನಡೆಸಿದ ಸುಮಾರು 40-50 ಕಾರ್ಯಕರ್ತರು ಏಕಾಏಕಿ ಕಟ್ಟಡದೊಳಗೆ ನುಗ್ಗಿ ಪ್ರದೇಶದೊಳಗೆ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಿ ಹಿಂಸಾತ್ಮಕವಾಗಿ ವರ್ತಿಸಿದರು.

Rampage by NSUI activists in Kuvempu University
15 ಲಕ್ಷ ರೂ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ KIADB ಸಹಾಯಕ ಆಯುಕ್ತ

ಕುಲಪತಿಗಳೇ ಟಾರ್ಗೆಟ್!

ಇದು ಬುಧವಾರ ಬೆಳಿಗ್ಗೆ ಶಂಕರಹಟ್ಟದ ಕ್ಯಾಂಪಸ್‌ನಲ್ಲಿ ಗದ್ದಲಕ್ಕೆ ಕಾರಣವಾಯಿತು. ಕ್ಯಾಂಪಸ್‌ನ ಆಡಳಿತ ಕಚೇರಿಯ ಮುಂದೆ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಅಧಿಕಾರಿಗಳ ವಿರುದ್ಧ ಮತ್ತು ವಿಸಿ ಪ್ರೊ. ಶರತ್ ಅನಂತಮೂರ್ತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಈ ವೇಳೆ ವಿಸಿ ಕಚೇರಿ ಬೋರ್ಡ್‌ಗೆ ಕಪ್ಪು ಮಸಿ ಬಳಿದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಕುವೆಂಪು ವಿಶ್ವವಿದ್ಯಾಲಯಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡಲಾಗುತ್ತಿದೆ. ವಿಶ್ವವಿದ್ಯಾಲಯದ ಇಂತಹ ನಡೆ ಖಂಡನೀಯ ಎಂದು ವಿದ್ಯಾರ್ಥಿಗಳು ವಿಸಿಗೆ ಧಿಕ್ಕಾರ ಕೂಗಿದರು.

ಕಾರಣವೇನು?

ಕಳೆದ ಎರಡು ವರ್ಷಗಳಿಂದ ನೀಡದ ಅಂಕಪಟ್ಟಿಗಳನ್ನು ಒದಗಿಸುವುದು, ಶುಲ್ಕ ಹೆಚ್ಚಳ ಮತ್ತು ಇತರ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾಕಾರರು ವಿವಿಧ ವಿದ್ಯಾರ್ಥಿ ಪರ ಚಟುವಟಿಕೆಗಳನ್ನು ಒತ್ತಾಯಿಸಿದರು.

ಅಧಿಕಾರಿಗಳು ವಿದ್ಯಾರ್ಥಿಗಳಿಗೆ ನೀಡಲಾದ ಅಂಕಪಟ್ಟಿಗಳಲ್ಲಿ ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ ಮತ್ತು ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳನ್ನು ನೀಡುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮೂಲಗಳ ಪ್ರಕಾರ, ಪ್ರತಿಭಟನಾಕಾರರ ವಿರುದ್ಧ ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪಕುಲಪತಿ ಶರತ್ ಅನಂತಮೂರ್ತಿ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಮೂರ್ತಿ, ಈ ವಿದ್ಯಾರ್ಥಿಗಳು ನಾಲ್ಕು ದಿನಗಳ ಹಿಂದೆ ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದರು ಎಂದು ಹೇಳಿದರು.

"ಆಗ ಅವರು ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು. ನಾವು ಅವರ ಕೆಲವು ದೂರುಗಳನ್ನು ಪರಿಹರಿಸಿದ್ದೇವೆ, ಆದರೆ ಇಂದು ಅವರು ವಿಶ್ವವಿದ್ಯಾಲಯದ ಆಸ್ತಿಗೆ ಹಾನಿ ಮಾಡುವ ಮೂಲಕ ಮಾಡಿದ್ದು ಸ್ವೀಕಾರಾರ್ಹವಲ್ಲ. ಪ್ರತಿಭಟನೆ ನಡೆಸಿದವರು ವಿದ್ಯಾರ್ಥಿಗಳು ಎಂದು ನಮಗೆ ತಿಳಿದಿಲ್ಲ" ಎಂದು ಕುಲಪತಿ ಹೇಳಿದರು.

ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com