

ಬೆಂಗಳೂರು: ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ 94 ಅಡಿಗೆ ಕುಸಿದಿದ್ದು, ಇದು ಸಾಮಾನ್ಯ ಮಟ್ಟಕ್ಕಿಂತ ಬಹಳ ಕಡಿಮೆಯಾಗಿದೆ. ಇದರೊಂದಿಗೆ, ಅಣೆಕಟ್ಟಿನಿಂದ ನೀರಿನ ಲಭ್ಯತೆ ಕಳೆದ ವರ್ಷ 297 ಟಿಎಂಸಿಎಫ್ಟಿಯಿಂದ ಈಗ 278 ಟಿಎಂಸಿಎಫ್ಟಿಗೆ ಇಳಿಕೆಯಾಗಿದೆ.
ಜಲಾಶಯದ ಸಂಗ್ರಹ ತೀವ್ರವಾಗಿ ಕುಸಿದಿರುವುದರಿಂದ ಉಳಿದ ನೀರನ್ನು ಅತಿಯಾಗಿ ಬಳಸಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (KSNDMC) ಮಾಹಿತಿಯ ಪ್ರಕಾರ, ಕಳೆದ ವರ್ಷ ಏಪ್ರಿಲ್ 29ರಂದು KRS ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 19.50 ಮತ್ತು 9.25 ಟಿಎಂಸಿಎಫ್ಟಿ ನೀರಿದ್ದರೆ, ಈ ವರ್ಷ ಅದು 18.52 ಮತ್ತು 6.23 ಟಿಎಂಸಿಎಫ್ಟಿಗೆ ಇಳಿದಿದೆ ಎಂದು ತಿಳಿದುಬಂದಿದೆ.
ಈ ಸಮಯದಲ್ಲಿ ಸಾಮಾನ್ಯವಾಗಿ ಕೆಆರ್'ಎಸ್ ಜಲಾಶಯದ ಮಟ್ಟ 100 ಅಡಿ ಇರಬೇಕಾಗಿದ್ದು, ಈಗಿನ ಕುಸಿತ ಆತಂಕ ಮೂಡಿಸಿದೆ.
ತಾಪಮಾನ ಏರಿಕೆಯಿಂದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಪಾಚಿಯ ಬೆಳವಣಿಗೆ ಹೆಚ್ಚಾಗುತ್ತದೆ, ಇದು ನೀರನ್ನು ಕಲುಷಿತಗೊಳಿಸುತ್ತದೆ. ಪಾಚಿ ರಚನೆಯು ನೀರಿನ ಗುಣಮಟ್ಟ ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಅಂತಹ ನೀರನ್ನು ಸೇವಿಸಿದಾಗ, ಅದು ನೀರಿನಿಂದ ಹರಡುವ ರೋಗಗಳನ್ನು ಹೆಚ್ಚಿಸುತ್ತದೆ ಎಂದು ಮಾಜಿ ನೀರಾವರಿ ಕಾರ್ಯದರ್ಶಿ ಕ್ಯಾಪ್ಟನ್ ರಾಜಾ ರಾವ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಲೈವ್ ಸ್ಟೋರೇಜ್ ಸುಮಾರು 10 ಟಿಎಂಸಿಎಫ್ಟಿ ಇದ್ದು, ಅದರಲ್ಲಿ 7 ಟಿಎಂಸಿಎಫ್ಟಿಗಿಂತ ಹೆಚ್ಚು ನೀರನ್ನು ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿಗಾಗಿ ಬಳಸಲಾಗುತ್ತಿದೆ ಕೆಎಸ್ಎನ್ಡಿಎಂಸಿ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಇದಲ್ಲದೆ, ಕೆಆರ್'ಎಸ್ ನಿಂದ ಟಿ.ಕೆ. ಹಳ್ಳಿವರೆಗೆ (ಸುಮಾರು 80 ಕಿಮೀ) ನೀರು ಸಾಗುವಾಗ 0.8 ರಿಂದ 1 ಟಿಎಂಸಿಎಫ್ಟಿ ನೀರು ಆವಿಯಾಗುತ್ತದೆ ಎಂಬುದೂ ಗಮನಾರ್ಹ ವಿಚಾರವಾಗಿದೆ. ಹೀಗಾಗಿ ನಾವು ಸಂಕಷ್ಟದ ಸುಳಿಗೆ ಸಿಲುಕಿದ್ದೇವೆ. ಜನರು ನೀರನ್ನು ಮಿತವಾಗಿ ಬಳಸಬೇಕಿದೆ ಎಂದು ತಿಳಿಸಿದ್ದಾರೆ.
ಜೂನ್ನಲ್ಲಿ ಮಳೆಗಾಲ ಆರಂಭವಾದರೂ, ಜಲಾಶಯಕ್ಕೆ ತಕ್ಷಣವೇ ನೀರಿನ ಹರಿವು ಪ್ರಾರಂಭವಾಗುವುದಿಲ್ಲ. ಕನಿಷ್ಠ ಜೂನ್ 15ರವರೆಗೆ ಇರುವ ನೀರನ್ನು ಸಮರ್ಪಕವಾಗಿ ಬಳಸಬೇಕು ಎಂದು ಹೇಳಿದ್ದಾರೆ.
ಕಾವೇರಿ ಜಲಾನಯನ ಪ್ರದೇಶವಾಗಿರುವ ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ನೀರಿನ ಮಟ್ಟ ಕುಸಿತ ಕಂಡಿದೆ. ಈ ಪ್ರದೇಶಗಳು ‘ರೆಡ್ ಕ್ಯಾಟಗರಿ’ಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೂ, ಮುಂದಿನ ದಿನಗಳಲ್ಲಿ ಮಳೆಯಿಲ್ಲದಿದ್ದರೆ ಪರಿಸ್ಥಿತಿ ಸವಾಲಿನದ್ದಾಗಬಹುದು. ಹವಾಮಾನ ಇಲಾಖೆ ಮುನ್ಸೂಚನೆಯೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯ ನೀರಿನ ಬಳಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
Advertisement